
ಬಳ್ಳಾರಿ / ಸಂಡೂರ :ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಡೂರ ತಾಲೂಕುನ ನಾರಾಯಣಪುರ ಗ್ರಾಮದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ 134ನೇ ಜಯಂತಿ ಮತ್ತು ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಅವರ 118ನೇ ಜಯಂತಿ ಹಾಗೂ ಕಾಯಕಯೋಗಿ ಶ್ರೀ ಜಗಜ್ಯೋತಿ ಬಸವಣ್ಣ ನವರ 891 ನೆಯ ಜಯಂತಿಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಂಪಾಪತಿ ಹೆಚ್. ಅಂಬೇಡ್ಕರ್ ವಿಚಾರವಾದಿ ಕಾಯಕಯೋಗಿ ಬಸವಣ್ಣನವರ ಕುರಿತು ಉಪನ್ಯಾಸ ನೀಡಿ ಮತನಾಡಿ ಇಡಿ ಜಗತ್ತು ಗೌರವಿಸುವ ಹಾಗೂ ಎಲ್ಲಾ ಜನಾಂಗದವರು ಒಪ್ಪಿಕೊಳ್ಳುವ ಮಹಾನ್ ಕನ್ನಡದ ವಚನಕಾರರೆಂದರೆ 12ನೇ ಶತಮಾನದ ಸಾಮಾಜಿಕ ಹರಿಕಾರ ಜಗಜ್ಯೋತಿ ಬಸವಣ್ಣ ಸಮಾಜದಲ್ಲಿದ್ದ ಗೊಡ್ಡು ಸಂಪ್ರದಾಯಗಳನ್ನು ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಗುಣವನ್ನು ಹೊಂದಿದ್ದವರು ಜಾತ್ಯಾತೀತ ಸಮಾಜ ಕಲ್ಪನೆಯನ್ನು, ಜಾತಿ ಜಾತಿಗಳ ಧರ್ಮ ಧರ್ಮಗಳ ಹೆಸರಿನಲ್ಲಿ ನಡೆಯುತ್ತಿದ್ದ ಮಾನವ ಸಂಘರ್ಷವನ್ನು ಕುರಿತು ನೊಂದು ನುಡಿದವರು.
ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯ
ಇವನಮ್ಮವ ಇವನಮ್ಮವ ನೆಂದೆನಿಸಯ್ಯ
ಎನ್ನುವ ಮೂಲಕ ಇಡಿ ವಿಶ್ವಕ್ಕೆ ದಿವ್ಯ ಸಂದೇಶ ನೀಡಿ ಮನುಷ್ಯನಾಗಿ ಹುಟ್ಟಿದ ಮೇಲೆ ಇಲ್ಲಿ ಎಲ್ಲರೂ ಸಮಾನರೇ ಎಲ್ಲಾರು ನಮ್ಮವರೇ ಎಲ್ಲಾ ಜಾತಿ ಜನಾಂಗದವರನ್ನು ಪ್ರೀತಿಯಿಂದ ಕಾಣಬೇಕು ಎಂಬ ದೊಡ್ಡ ಸಂದೇಶವನ್ನು ನೀಡಿದವರು ಬಸವಣ್ಣನವರು.
ಕಲ್ಲುನಾಗರ ಕಂಡರೆ ಹಾಲನೆರೆಯೆಂಬರು ಎನ್ನುವ ಈ ವಚನದ ಮೂಲಕ ಮೌಡ್ಯತೆಯ ಹೆಸರಿನಲ್ಲಿ ನೆಡೆಯುತ್ತಿದ್ದ ಡಾಂಭಿಕ ಆಚರಣೆಗಳ ಬಗ್ಗೆಯೂ ಜನಸಮೂಹವನ್ನು ಎಚ್ಚರಿಸಿದವರು. ಅನುಭವ ಮಂಟಪ ಕಟ್ಟಿ ಶರಣರು ತಮ್ಮ ಎಲ್ಲಾ ಸಮೂಹದೊಂದಿಗೆ ಅನುಭಾವದ ಬಗ್ಗೆ ಚಿಂತನೆ. ವಿಚಾರವಿನಿಮಯ ಮತ್ತು ಸಂವಾದಕ್ಕಾಗಿ ಅನುಭವ ಮಂಟಪವನ್ನು ಕಟ್ಟಿದ್ದರು ಬಸವಣ್ಣ.
ಇದು ಜಗತ್ತಿನ ಮೊದಲ ಸಂಸತ್ತು ಎಂದು ಗುರುತಿಸಲ್ಪಟ್ಟಿದೆ. ಅಲ್ಲಿನ ಎಲ್ಲಾ ಚಟುವಟಿಕೆಗಳು ಇಂದಿನ ಪ್ರಜಾಪ್ರಭುತ್ವದ ಮಾದರಿಯಲ್ಲೆ ಜರುಗುತ್ತಿದ್ದವು. ಜಗಜ್ಯೋತಿ, ಭಕ್ತಿ ಭಂಡಾರಿ, ವಿಶ್ವಜ್ಯೋತಿ, ಬಸವಣ್ಣನವರು ಹಾಕಿಕೊಟ್ಟ ಮಾದರಿಯಲ್ಲೇ ಇಂದು ನಾವೂ ನಡೆಯುತ್ತಿದ್ದೇವೆ. ಬುದ್ದನ ಶಾಂತಿ ಸಂದೇಶ, ಬಸವಣ್ಣನ ಕಾಯಕ ತತ್ವ ಮತ್ತು ಅಂಬೇಡ್ಕರ್ ಸಮಾನತೆ ಹಾಗೂ ಅವರ ಸಂವಿಧಾನದ ನೀತಿ ನಿಯಮಗಳು ಈ ದೇಶದಲ್ಲಿ ಉಳಿದಾಗ ಮಾತ್ರ ಈ ದೇಶ ಅಭಿವೃದ್ದಿಯಾಗುತ್ತದೆ ಎಂದು ತಿಳಿಸಿದರು.
ನಂತರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕರಾದ ಎಂ. ರಾಮಕೃಷ್ಣ ಹೆಗಡೆ ಅವರು ಮಾತನಾಡಿ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಪ್ರತಿಯೊಬ್ಭರಿಗೂ ಶ್ರೀ ರಕ್ಷೆಯಾಗಿದೆ ಮತ್ತು ತುಳಿತಕ್ಕೆ ಒಳಗಾದವರನ್ನು ಮೇಲೆ ತರಲು ಅಂಬೇಡ್ಕರ್ ಅವರು ತಮ್ಮ ಜೀವ ಮತ್ತು ಜೀವನವನ್ನು ಮುಡಿಪಾಗಿಟ್ಟರು. ಹಗಲು-ರಾತ್ರಿ ಎನ್ನದೆ ಓದಿ ಈ ದೇಶಕ್ಕೆ ಬೃಹತ್ ಸಂವಿಧಾನವನ್ನು ನೀಡಿದ್ದಾರೆ ಎಂದರು.
ಇದೇ ವೇಳೆ ಸಂಡೂರು ಅಂಬೇಡ್ಕರ ಸಂಘದ ಅಧ್ಯಕ್ಷರಾದ ಎಂ. ಶಿವಲಿಂಗಪ್ಪ ನವರು ಮಾತನಾಡಿ, ಹಸಿರು ಕ್ರಾಂತಿಯ ಹರಿಕಾರ ಹಾಗೂ ಕಾರ್ಮಿಕ ಖಾತೆಗಳ ಶಿಲ್ಫಿ. ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರು ಅಸ್ಪ್ರಶ್ಯತೆ ನಿವಾರಣೆಗಾಗಿ, ಮೇಲು-ಕೀಳು, ತಾರತಮ್ಮ, ಜಾತಿಪದ್ದತಿ, ವಿರುದ್ದ ಹೋರಾಡುತ್ತಾ ಸುಮಾರು 30 ವರ್ಷಗಳ ಕಾಲ ಕೇಂದ್ರ ವಿಧಾನ ಸಭೆಯ ಸದಸ್ಯರಾಗಿ ಹಾಗೂ ಭಾರತದಲ್ಲಿ ಬಡವರ ಏಳ್ಗೆಗಾಗಿ ಸುಧೀರ್ಘಕಾಲ ಸೇವೆಸಲ್ಲಿಸಿ, ಕ್ಯಾಬಿನೆಟ್ ಸಚಿವರು ಹಾಗೂ ದೇಶದ ಪ್ರಗತಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಬಾಬೂಜಿ ಸಾಧನೆ ದೊಡ್ಡದು ಎಂದರು.
ನಂತರ ಗಣ್ಯರ ಸಮ್ಮುಖದಲ್ಲಿ DSS ಪದಾಧಿಕಾರಿಗಳಿಗೆ ಮತ್ತು ಮುಖ್ಯ ಅತಿಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಊರಿನ ಪ್ರಮುಖ ಗಣ್ಯರು, ಮುಖಂಡರು, ಶಿಕ್ಷಣ ಪ್ರೇಮಿಗಳು, ಸೇರಿದಂತೆ ನಾರಾಯಣಪುರದ ಸಮಸ್ತ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
