ಶಿವಮೊಗ್ಗ : ಕೆಲವು ರಾಜಕಾರಣಿಗಳು ದೇಶ ಮೊದಲು ಎಂಬುದನ್ನು ಮರೆತು ಎಲ್ಲಾ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಿರುವುದು ಇದೀಗ ಕಂಡು ಬರುತ್ತಿದೆ, ಇಂತಹವರಿಂದ ನಾವು ಏನನ್ನು ನಿರೀಕ್ಷಿಸಬಹುದು? ಎಂಬುದನ್ನು ಈ ದೇಶದ ಜನ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಕರುನಾಡ ಯುವಶಕ್ತಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಎಸ್.ಎನ್.ಮಿಲನ್ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಹುಶಃ ಸ್ವಾತಂತ್ರ್ಯ ನಂತರ ಪಾಕಿಸ್ತಾನ ಭಾರತದ ಮೇಲೆ ಮಾಡಿದ ದಾಳಿ, ಉಗ್ರ ಚಟುವಟಿಕೆ ಒಂದೇ ಎರಡೇ? ಎಲ್ಲವನ್ನೂ ಸಹಿಸಿಕೊಂಡು ಉತ್ತರ ಕೊಡುವಲ್ಲಿ ಕೊಡುತ್ತಾ ಬಂದಿದೆ, ಆದರೆ ಯಾವತ್ತೂ ನಮ್ಮ ದೇಶ ಅವರಂತೆ ಹೇಡಿತನದ ಕೃತ್ಯಗಳನ್ನು ಮಾಡಲೇ ಇಲ್ಲ. ಹೀಗಾಗಿಯೇ ಅವರು ಮೇಲಿಂದ ಮೇಲೆ ದಾಳಿ ಮಾಡುತ್ತಲೇ ಬಂದರು. ಕಾಶ್ಮೀರದಲ್ಲಿ ಎಷ್ಟು ನರಮೇಧ ನಡೆಯಿತು? ಅಲ್ಲಿನ ಕಾಶ್ಮೀರಿ ಪಂಡಿತರ ಬದುಕು ಏನಾಯಿತು? ಎಲ್ಲವೂ ನಮ್ಮ ಮುಂದೆಯೇ ಇದೆ. ಆದರೆ ಇಷ್ಟೆಲ್ಲಾ ಆಗಿದ್ದರೂ ಇವತ್ತು ಕೆಲವು ರಾಜಕಾರಣಿಗಳ ನಡೆ ಮತ್ತು ಅವರ ಹೇಳಿಕೆಗಳು ರಾಜಕೀಯ ಪ್ರೇರಿತವಾಗುತ್ತಿರುವುದು ಅಚ್ಚರಿ ಮೂಡಿಸುತ್ತಿವೆ ಎಂದರು.
ಇಷ್ಟಕ್ಕೂ ಕೆಲವು ರಾಜಕೀಯ ಪಕ್ಷಗಳಿಗೆ ಅಧಿಕಾರವೇ ಮುಖ್ಯವಾಗಿರುವುದರಿಂದ ಮತಬ್ಯಾಂಕನ್ನು ಈ ಸಮಯದಲ್ಲಿಯೂ ಕಾಪಾಡಿಕೊಳ್ಳಲು ಹವಣಿಸುತ್ತಿರುವುದು ನಿಜಕ್ಕೂ ಬೇಸರ ಮೂಡಿಸುತ್ತಿದೆ. ಪಾಕಿಸ್ತಾನದ ವಿರುದ್ಧ ಮಾತನಾಡಿದರೆ ದೇಶದ ಪ್ರಜೆಯಾಗಿರುವ ಮುಸ್ಲಿಮರಿಗೆ ಬೇಸರವಾಗಬಹುದು. ಅವರು ನಮಗೆ ಮತ ಹಾಕದೆ ಹೋಗಬಹುದು ಎಂದು ಕೆಲವು ನಾಯಕರು ಅಂದುಕೊಳ್ಳುತ್ತಿರುವುದು ಮತ್ತು ಅವರನ್ನು ಓಲೈಸುವ ಸಲುವಾಗಿ ನಮ್ಮ ದೇಶದ ಬಗ್ಗೆಯೇ ಹಗುರವಾಗಿ ಮಾತನಾಡುತ್ತಿರುವುದು ಕ್ಷಮಿಸಲಾರದ್ದಾಗಿದೆ ಎಂದರು.
ಪಹಲ್ಗಾಮ್ನಲ್ಲಿ ನಡೆದ ಹಿಂದೂಗಳ ನರಮೇಧದ ನಂತರ ಇಡೀ ದೇಶದ ಜನ ಪಾಕಿಸ್ತಾನದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಆ ದೇಶದ ಆಟಾಟೋಪಕ್ಕೆ ಇತಿಶ್ರೀ ಹಾಡಲು ಇದು ಪಕ್ವ ಸಮಯ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಇಡೀ ದೇಶದ ಜನ ಆಕ್ರೋಶಗೊಂಡಿರುವಾಗ ಮತ್ತು ನಮಗಾದ ಅನ್ಯಾಯಕ್ಕೆ ತಕ್ಕ ಶಾಸ್ತಿ ನೀಡಬೇಕಾದ ಸಮಯದಲ್ಲಿ ಆಡಳಿತದಲ್ಲಿ ಯಾರೇ ಇರಲಿ ಅವರಿಗೆ ಸಾಥ್ ನೀಡುವುದು ಈ ದೇಶದ ರಾಜಕೀಯ ನಾಯಕರ ಮತ್ತು ಪ್ರಜೆಗಳ ಆದ್ಯ ಕರ್ತವ್ಯವಾಗುತ್ತದೆ ಎಂದು ತಿಳಿಸಿದರು.
ಇವತ್ತು ಪಹಲ್ಗಾಮ್ ನಲ್ಲಿ ನಡೆದ ದಾಳಿ ಹಿಂದೆ ಏನೇನು ವೈಫಲ್ಯಗಳಾಗಿವೆಯೋ ಅದೆಲ್ಲವೂ ಒತ್ತಟ್ಟಿಗಿರಲಿ. ಅಲ್ಲಿ ವೈಫಲ್ಯವಾಗಿದೆ ಎನ್ನುವುದು ಕಣ್ಣಮುಂದೆ ಇರುವ ಸತ್ಯ. ಅದರ ಕುರಿತಂತೆ ತನಿಖೆಗಳಾಗುತ್ತವೆ. ಆದರೆ ಕಾಲ ಮಿಂಚಿ ಹೋಗಿದೆ. ಇಪ್ಪತ್ತಾರು ಮಂದಿಯ ಪ್ರಾಣವೂ ಹೋಗಿದೆ. ಅವರನ್ನು ಕಳೆದುಕೊಂಡ ಕುಟುಂಬಕ್ಕಷ್ಟೆ ಆ ನೋವು ಗೊತ್ತಿದೆ. ಮತ್ತು ಅದು ಜೀವನದುದ್ದಕ್ಕೂ ಕಹಿ ನೆನಪಾಗಿ ಉಳಿಯಲಿದೆ. ಆದರೆ ಅದಕ್ಕೆ ಪ್ರತಿಕಾರ ತೀರಿಸಿಕೊಳ್ಳುವುದು ಈಗಿನ ಅವಶ್ಯಕತೆಯಾಗಿದೆ. ಭಾರತವನ್ನು ಕೆಣಕಿದರೆ ಏನಾಗುತ್ತದೆ ಎಂಬ ಸಂದೇಶವನ್ನು ರವಾನಿಸುವುದು ದೇಶದ ಮುಂದಿದೆ ಎಂದರು.
ಪಹಲ್ಗಾಮ್ ಘಟನೆಯ ನಂತರ ಯಾರನ್ನು ಯಾರೋ ವಿರೋಧಿಸುವ ಭರದಲ್ಲಿ ಕೆಲವರು ದೇಶದ ಬಗ್ಗೆಯೇ ಹಗುರವಾಗಿ ಮಾತನಾಡುವುದು, ಹೇಳಿಕೆ ನೀಡುವುದು ಮಾಡುತ್ತಿದ್ದಾರೆ. ಆ ಮೂಲಕ ತಮ್ಮ ಮತಬ್ಯಾಂಕ್ ಅನ್ನು ಗಟ್ಟಿಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಎದ್ದು ಕಾಣಿಸುತ್ತಿದೆ. ಇದು ಯಾವುದೇ ನಾಯಕರಿಗೆ ಶೋಭೆ ತರುವಂತಹದಲ್ಲ. ಅದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ವಿರೋಧಿಸುವುದೇ ನಿಮ್ಮ ರಾಜಕೀಯದ ತಂತ್ರ ಎಂದು ಭಾವಿಸಿ ದೇಶದ ಜನ ಸುಮ್ಮನಾಗಬಹುದು. ಆದರೆ ನಿಮ್ಮ ಹೇಳಿಕೆಗಳು ಶತ್ರು ರಾಷ್ಟ್ರಗಳಿಗೆ ಆಹಾರವಾಗುತ್ತದೆ ಮತ್ತು ದೇಶದ ಮಾನ ಹರಾಜಾಗುತ್ತದೆ ಎಂಬುದು ನೆನಪಿರಲಿ ಎಂದರು.
ಈಗಾಗಲೇ ಕೆಲವರ ಹೇಳಿಕೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಹೇಗೆ ಬಿಂಬಿತವಾಯಿತು ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಹೀಗಿರುವಾಗ ನಮ್ಮಲ್ಲಿನ ಕೆಲವು ನಾಯಕರು ಬಾಯಿ ಮುಚ್ಚಿ ಕುಳಿತು ಬಿಟ್ಟರೆ ಅಷ್ಟೇ ಸಾಕು. ಈ ಸಮಯದಲ್ಲಿ ನಿಮ್ಮ ರಾಜಕೀಯವನ್ನು ಬದಿಗೊತ್ತಿ ತೆಪ್ಪಗಿರಿ ಎಂದು ಮತ ನೀಡಿ ಗೆಲ್ಲಿಸಿದ ತಪ್ಪಿಗೆ ಜನ ವಿನಂತಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಅದು ಏನೇ ಇರಲಿ ನಮ್ಮ ಜನನಾಯಕರು ದೇಶದ ವಿಚಾರದಲ್ಲಿ ಹೇಗೆಲ್ಲಾ ನಡೆದುಕೊಳ್ಳಬೇಕು ಎಂಬುವುದನ್ನು ಅರಿತುಕೊಂಡರೇ ಒಳಿತು ಎಂಬುವುದು ನಮ್ಮ ಅಶಯ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
