
ಮೈಸೂರಿನ ವಾರ್ಡ್ ಸಂಖ್ಯೆ 51 ಅಗ್ರಹಾರದ ಜೆ ಎಸ್ ಎಸ್ ಆಸ್ಪತ್ರೆಯ ಬಳಿ ಬುಧವಾರ ಮಧ್ಯಾಹ್ನ ಕಾರೊಂದು ಗುಂಡಿಗೆ ಬಿದ್ದು ಅವಾಂತರ ಉಂಟಾಯಿತು.
ಕಾರು ಗುಂಡಿಗೆ ಬಿದ್ದು ಹೂತು ಹೋಗಿತ್ತು, ನಂತರ ಕಾರನ್ನು ಜೆ ಸಿ ಬಿ ಮೂಲಕ ಮೇಲೆತ್ತಲಾಯಿತು.
ಈ ಘಟನೆಗೆ ಆಮೆಗತಿಯಲ್ಲಿ ಸಾಗುತ್ತಿರುವ ರಸ್ತೆ ಕಾಮಗಾರಿಯೇ ಕಾರಣ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾತಾಳ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಜೆ ಎಸ್ ಎಸ್ ಆಸ್ಪತ್ರೆ ಬಳಿ ಚಾಮುಂಡೇಶ್ವರಿ ದೇವಸ್ಥಾನದ ವರಗಿನ ರಸ್ತೆ ಕಾಮಗಾರಿ ಶುರುವಾಗಿ ವರ್ಷಗಳೇ ಕಳೆದಿವೆ.
ಆದರೂ ಪದೇ ಪದೇ ಎರಡು ಮೂರು ಬಾರಿ ಅದೇ ರಸ್ತೆಯಲ್ಲಿ ಮತ್ತೆ ಮತ್ತೆ ಅಗೆದು ಕಾಮಗಾರಿ ಮಾಡುತ್ತಿದ್ದಾರೆ, ಇದುವರೆಗೂ ಪೂರ್ಣಗೊಂಡಿಲ್ಲ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಇದರ ಪಕ್ಕದಲ್ಲೇ ಇರುವ ಮತ್ತೊಂದು
ರಸ್ತೆಯಲ್ಲೂ ಕೂಡಾ ಇದೆ ಪರಿಸ್ಥಿತಿ ಇರುವುದು ವಿಪರ್ಯಾಸ.
ಕ್ಷೇತ್ರದ ಶಾಸಕರಾದ ಶ್ರೀ ವತ್ಸ ರವರ ಕಚೇರಿ ಇದೆ ಸ್ಥಳದಲ್ಲೇ ಇದ್ದರೂ ಶಾಸಕರೂ ರಸ್ತೆ ಅಭಿವೃದ್ಧಿ ಪಡಿಸದೆ ಇರುವುದು ಅಚ್ಚರಿ ತಂದಿದೆ ಎಂದು ತೇಜಸ್ವಿ ವಿಷಾದಿಸಿದ್ದಾರೆ.
ಈ ಕಳಪೆ ಕಾಮಗಾರಿಯಿಂದ ಸ್ಥಳೀಯ ನಿವಾಸಿಗಳಿಗೆ ಮತ್ತು ವ್ಯಾಪಾರಿಗಳಿಗೆ ವಾಹನ ಸವಾರರಿಗೆ ಮತ್ತು ವಿಶೇಷ ವಾಗಿ ಆಸ್ಪತ್ರೆಗೆ ಆಗಮಿಸುವ ಜನತೆಗೆ ದಿನನಿತ್ಯ ನರಕ ಸದೃಶ ವಾತಾವರಣ ನಿರ್ಮಾಣವಾಗಿದೆ.
ಜತೆಗೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಉಂಟಾಗಿ ಟ್ರಾಫಿಕ್ ಪೋಲಿಸರು ದಿನನಿತ್ಯವೂ ಹಿಂಸೆಯಿಂದ ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಕಿಡಿಕಾರಿದ್ದಾರೆ.
ಸಂಬಂಧಪಟ್ಟ ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಮತ್ತು ನಗರ ಪೋಲಿಸ್ ಆಯುಕ್ತರು ಈ ರಸ್ತೆ ಗುತ್ತಿಗೆದಾರನ ಮೇಲೆ ಕೂಡಲೇ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆಗ್ರಹಿಸಿದ್ದಾರೆ.
ಕೂಡಲೇ ಕಾಮಗಾರಿ ಪೂರ್ಣವಾಗಿ ದುರಸ್ತಿ ಕಾರ್ಯ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ತೇಜಸ್ವಿ ಎಚ್ಚರಿಕೆ ನೀಡಿದ್ದಾರೆ.
- ಕರುನಾಡ ಕಂದ
