ಶಿವಮೊಗ್ಗ : ಡೆಂಗ್ಯೂ, ಚಿಗುನ್ ಗುನ್ಯಾ, ಮಲೇರಿಯಾದಂತಹ ಇತರೆ ರೋಗಗಳನ್ನು ಹರಡುವ ಸೊಳ್ಳೆಗಳನ್ನು ನಿಯಂತ್ರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ, ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಬಾಪೂಜಿ ಆಯುರ್ವೇದಿಕ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ – 2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಮುಂಗಾರು ಆರಂಭವಾಗಲಿದ್ದು ನಮ್ಮ ಮನೆ ಸುತ್ತಲಿನಲ್ಲಿ ಸೊಳ್ಳೆಗಳು ಆಗದಂತೆ ನೋಡಿಕೊಳ್ಳಬೇಕು, ಆರೋಗ್ಯ ಇಲಾಖೆಯಿಂದ ಡೆಂಗ್ಯೂ ಸೇರಿದಂತೆ ಸೊಳ್ಳೆಯಿಂದ ಹರಡುವ ರೋಗಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ, ಎಲ್ಲಾ ಹಂತಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ನಾವು ಈ ಕಾರ್ಯಕ್ರಮಗಳ ಉದ್ದೇಶ ಅರಿತುಕೊಂಡು ಜಾಗೃತರಾಗಬೇಕು
ನಾವೆಲ್ಲಾ ಸೇರಿ ಡೆಂಗ್ಯೂನಂತಹ ಮಾರಣಾಂತಿಕ ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ನಿಯಂತ್ರಣಕ್ಕೆ ಬದ್ದರಾಗಬೇಕು ಎಂದ ಅವರು ಪ್ಲಾಸ್ಟಿಕ್ ಬಳಕೆಗೆ ಸಹ ಕಡಿವಾಣ ಹಾಕಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಡಿಎಚ್ ಒ ಡಾ.ನಾಗರಾಜ ನಾಯ್ಕ್, ಟಿಹೆಚ್ ಒ ಡಾ. ಚಂದ್ರಶೇಖರ್, ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಆರಾಧ್ಯ ಎಂ.ವಿ.ಟಿ, ಬಾಪೂಜಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕವಿತಾ, ಇತರೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
