ಬೀದರ/ಬಸವಕಲ್ಯಾಣ : ತಾಲೂಕಿನ ಬಗದುರಿ ಗ್ರಾಮದ ರೈತರ ಬೇಡಿಕೆ ಇನ್ನೂ ಈಡೇರದ ಕಾರಣ ಗ್ರಾಮದ ರೈತ ಮುಖಂಡರಾದ ಶ್ರೀ ಪ್ರಶಾಂತ ಬಿರಾದಾರ ಮತ್ತು ಗ್ರಾಮದ ರೈತರ ನೇತೃತ್ವದಲ್ಲಿ ದಿ. 27/05/2025 ಮಂಗಳವಾರ ದಂದು ಅರೆಬೆತ್ತಲೆ ದೀರ್ಘದಂಡ ನಮಸ್ಕಾರದೊಂದಿಗೆ ಸತ್ಯಾಗ್ರಹ ಮಾಡುವುದಾಗಿ ಈ ಕೆಳಕಂಡಂತೆ ತಿಳಿಸಿರುತ್ತಾರೆ.
ಬಸವಕಲ್ಯಾಣದ ಮಹಾಜನತೆ ಮತ್ತು ಅಧಿಕಾರಿ ವೃಂದದವರಿಗೆ ಈ ಮೂಲಕ ತಿಳಿಸುವುದೇನೆಂದರೆ ಬಸವಕಲ್ಯಾಣ ತಾಲೂಕಿನ ಬಗದುರಿ ಗ್ರಾಮದ ರೈತರ ಸಮಸ್ಯೆಗಳ ಬಗ್ಗೆ ಸುಮಾರು 4 ತಿಂಗಳಿನಿಂದ ನಿರಂತರವಾಗಿ ವಿವಿಧ ರೀತಿಯ ಹೋರಾಟಗಳ ಮುಖಾಂತರ ತಾಲೂಕಿನ ಅಧಿಕಾರಿ ವೃಂದದವರ ಗಮನ ಸೆಳೆದು ಕೊನೆಗೆ ಪರಿಹಾರದ ಸ್ಪಷ್ಟ ಭರವಸೆಯೊಂದಿಗೆ ರೈತರು ಗ್ರಾಮಕ್ಕೆ ತೆರಳಿರುತ್ತಾರೆ. ಸ್ಥಳೀಯ ಶಾಸಕರು ಅಧಿಕಾರಿಗಳಿಗೆ 4 ದಿನಗಳ ಒಳಗಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಿ ರೈತರ ಜ್ವಲಂತ ಸಮಸ್ಯೆಗಳಿಗೆ ಪರಿಹರಿಸಲು ತಿಳಿಸಿರುತ್ತಾರೆ. ಆದರೆ, ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುತ್ತಾರೆ. ಆದ ಕಾರಣ ಬಗದುರಿ ಗ್ರಾಮದ ರೈತರು ಮತ್ತೆ ಹೋರಾಟವನ್ನು ಮಾಡಲು ನಿರ್ಧರಿಸಿದ್ದು, ತಹಶೀಲ್ದಾರರ ಕಛೇರಿಯಿಂದ ತಾಲೂಕು ಪಂಚಾಯತ ಕಛೇರಿಯವರೆಗೆ ದೀರ್ಘ ದಂಡ ನಮಸ್ಕಾರದೊಂದಿಗೆ ಅರೆ ಬೆತ್ತಲೆ ಮೆರವಣಿಗೆಯೊಂದಿಗೆ ಬಂದು ತಾಲೂಕು ಪಂಚಾಯತ ಕಛೇರಿಯ ಆವರಣದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದೇವೆ ಎಂದು ಪತ್ರಿಕಾ ಪ್ರಕಟಣೆಗೆ ತಿಳಿಸಿರುತ್ತಾರೆ.
ವರದಿ : ಶ್ರೀನಿವಾಸ ಬಿರಾದಾರ
