ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರೂರು ಹೋಬಳಿಯ ಕೂರಿಗನೂರು ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದದಿಂದ ಮಂಜೂರಾತಿಗೊಂಡ ರೂ. 100000/- (ಒಂದು ಲಕ್ಷ ) ಮೊತ್ತದ ಡಿ. ಡಿ. ಯನ್ನು ಶ್ರೀ ಈಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿಗಳಾದ ಶ್ರೀ ಸುಧೀರ್ ಹಂಗಳೂರು ರವರು ವಿತರಿಸಿದರು.
ನಂತರ ಮಾತನಾಡಿದ ಅವರು ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೊಡುಗೆ ಅನನ್ಯವಾಗಿದ್ದು ಕರ್ನಾಟಕ ರಾಜ್ಯಾದ್ಯಂತ ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿ ಭಾವ ಹಾಗೂ ಆಧ್ಯಾತ್ಮಿಕತೆ ಹೆಚ್ಚಿಸಲು ಪುರಾತನ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯ ಹಸ್ತ ಚಾಚುತ್ತಿದ್ದು ಈವರೆಗೆ ಸಿರಗುಪ್ಪ ತಾಲೂಕಿನ 85 ದೇವಸ್ಥಾನಗಳಿಗೆ 1 ಕೋಟಿ 96 ಲಕ್ಷ ಮೊತ್ತದ ಅನುದಾನ ನೀಡಿ ಪುರಾತನ ದೇವಸ್ಥಾನಗಳ ಅಭಿವೃದ್ಧಿಗೆ ಶ್ರಮಿಸಲಾಗಿದೆ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅತ್ಯಂತ ಸ್ವಚ್ಛ ಪರಿಸರ ಕಾಪಾಡಿದ ಹೆಗ್ಗಳಿಕೆಯನ್ನು ಹೊಂದಿದ್ದು ಅದರಂತೆ ನಮ್ಮ ಕರ್ನಾಟಕದ ಉಳಿದ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಅನುಷ್ಠಾನವಾಗುವ ಯೋಜನೆ ರೂಪಿಸಿಕೊಂಡು ತಾಲೂಕಿನಲ್ಲಿ 305 ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯಕ್ರಮದೊಟ್ಟಿಗೆ ಕಸ ವಿಲೇವಾರಿಗೆ ಪರಿಕರಗಳನ್ನು ವಿತರಿಸಲಾಗಿದೆ. ಧರ್ಮಸ್ಥಳದ ಮೂಲಕ ಭಜನಾ ಮಂಡಳಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಜನಾ ಕಮ್ಮಟ ಹಾಗೂ ಗ್ರಾಮಗಳಲ್ಲಿರುವ ಭಜನಾ ಮಂಡಳಿಗಳಿಗೆ ಕಟ್ಟಡ ರಚನೆ ಹಾಗೂ ತರಬೇತಿಗೆ ಸಹಕಾರ ನೀಡಲಾಗುತ್ತಿದೆ, ಪ್ರತಿ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹಗಳು ನಡೆದುಕೊಂಡು ಬರುತ್ತಿವೆ ಇದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಕಾರ್ಯಗಳಿಗೂ ಒತ್ತು ನೀಡುತ್ತಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಈವರೆಗೆ ಶಾಲಿಗನೂರು ಹಾಗೂ ಗುಂಡಿಗನೂರು ಕೆರೆಗಳ ಜೀರ್ಣೋದ್ಧಾರಕ್ಕೆ ರೂ. 22 ಲಕ್ಷ,
52 ಜನ ನಿರ್ಗತಿಕರ ಮಾಸಾಶನಕ್ಕಾಗಿ ಪ್ರತಿ ತಿಂಗಳು ರೂ. 1,000/- ದಂತೆ ಮಾಸಿಕವಾಗಿ ರೂ. 52,000/-,
ಹತ್ತನೆ ತರಗತಿಯ 34 ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಟ್ಯೂಷನ್ ಕ್ಲಾಸ್ಗಾಗಿ ರೂ. 3 ಲಕ್ಷ 40 ಸಾವಿರ,
152 ಜನ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ವಿತರಣೆ, ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ 24 ಸರ್ಕಾರಿ ಶಾಲೆಗಳಿಗೆ ರೂ. 19 ಲಕ್ಷ 20 ಸಾವಿರ ಮೊತ್ತದ ಅನುದಾನ ವಿತರಣೆ ಮಾಡಲಾಗಿದೆ.
CSC ಕಾರ್ಯಕ್ರಮದ ಮೂಲಕ 4253 ಜನರಿಗೆ ಇ-ಶ್ರಮ ಕಾರ್ಡ್ ವಿತರಣೆ, 12,198 ಜನರಿಗೆ ಆಯುಷ್ಮಾನ್ ಕಾರ್ಡ್ಗಳ ವಿತರಣೆ, 4128 ಜನರಿಗೆ ಪಾನ್ ಕಾರ್ಡ್ಗಳ ವಿತರಣೆ ಮಾಡಲಾಗಿದೆ. ಕುಡಿತದ ಚಟಕ್ಕೆ ಒಳಗಾಗಿ ಮದ್ಯಪಾನಕ್ಕೆ ದಾಸರಾದವರಿಗೆ ಮದ್ಯವರ್ಜನ ಶಿಬಿರದ ಮೂಲಕ ನವಜೀವನ ಕಟ್ಟಿಕೊಳ್ಳಲು ತಾಲೂಕಿನಲ್ಲಿ 04 ಮದ್ಯವರ್ಜನ ಶಿಬಿರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರಿಂದ 250 ಜನರನ್ನು ಪಾನಮುಕ್ತರನ್ನಾಗಿ ಮಾಡಿ ಸುಂದರ ಜೀವನ ರೂಪಿಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ, ಕಾಳಿಂಗಪ್ಪ, ನಾಗರಾಜ, ಎಸ್ ಗಾಧಿಲಿಂಗಪ್ಪ ಹಾಗೂ ಊರಿನ ಗಣ್ಯರು ಮತ್ತು ಕರೂರು ವಲಯದ ಮೇಲ್ವಿಚಾರಕರಾದ ಹನುಮಂತಪ್ಪ, ಸ್ಥಳೀಯ ಸೇವಾಪ್ರತಿನಿಧಿಗಳು, ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
- ಕರುನಾಡ ಕಂದ
