ಕರಾವಳಿಯ ಕೊಲೆ ಪರಂಪರೆ ಫಾಝಿಲ್ ಸುರತ್ಕಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಹಾಶ್ ಶೆಟ್ಟಿ ಕೊಲೆಯಲ್ಲಿ ಅಂತ್ಯ ಕಾಣಲಿ ಜೊತೆಗೆ ಹಿಂದೆ ನಡೆದ ಎಲ್ಲಾ ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಲಿ, ಮತ್ತೊಬ್ಬನ ರಕ್ತ ಕರಾವಳಿಯ ಮಣ್ಣಿಗೆ ತಗುಲಬಾರದೆಂಬುವುದು ಕರಾವಳಿಯ ಶಾಂತಿ ಮತ್ತು ಸೌಹಾರ್ದತೆ ಬಯಸುವವರ ಅಭಿಲಾಷೆಯಾಗಿದೆ, ಧರ್ಮಧಾರಿತ ಕೋಮುವಾದಿಗಳ ಹೆಡೆಮುರಿ ಕಟ್ಟಿ, ಧರ್ಮನಿಂದಕರ ಬೀದಿ ಭಾಷಣಗಳಿಗೆ ಕಡಿವಾಣ ಬೀಳಬೇಕು ಎಂಬುವುದು ಕರಾವಳಿಗರ ಕಟ್ಟಕಡೆಯ ಕೂಗಿನ ನಡುವೆಯೇ ಮಂಗಳೂರಿನ ಬಂಟ್ವಾಳದಲ್ಲಿ ಅಬ್ದುರ್ರಹ್ಮಾನ್ ಎಂಬ ಯುವಕನ ಕೊಲೆಯಾಗಿದೆ. ದುಡಿಯಲು ಹೊರಟಿದ್ದ ಅಮಾಯಕ ಪಿಕಪ್ ಚಾಲಕ ಕತ್ತಿಯೇಟಿನಿಂದ ಬಲಿಯಾಗಿದ್ದಾನೆ. ಕೊಲೆಗಟ್ಟುಕರು ಪುಟ್ಟ ಮಗುವಿಗೆ ಅನಾಥೆ, ಒಂದು ಹೆಣ್ಣಿಗೆ ವಿಧವೆ ಎಂಬ ಪಟ್ಟವನ್ನು ಕೊಡಿಸಿದ್ದಾರೆ. ಪ್ರತೀಕಾರದ ಕೋಮು ಭಾಷಣಗಳು ಈ ಕೃತ್ಯಕ್ಕೆ ಕಾರಣವೆಂಬ ಅರಿವಿನ ಸ್ಪಷ್ಟತೆ ಆಡಳಿತ ವ್ಯವಸ್ಥೆಗೆ ಇದ್ದರೂ ಅಂತವರ ಮೇಲೆ ಕ್ರಮ ಕೈಗೊಳ್ಳದಿರುವುದು ದುರ್ದೈವ.
ಹೀಗಾದಲ್ಲಿ ಕರಾವಳಿ ಮತ್ತು ಕರ್ನಾಟಕದ ಕೋಮು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಹೇಗೆ ಸಾಧ್ಯವಾಗುವುದು? ಇವುಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿಯಾಗಿದೆ. ನೋಡಿ! ಇಲ್ಲಿ ಹತ್ಯೆಯಾದ ಎಲ್ಲಾ ಹೆಣಗಳನ್ನು ಮುಂದಿಟ್ಟು ರಾಜಕೀಯ ಬೆಳೆ ಬೇಯಿಸಿಕೊಂಡದ್ದೆ ಹೆಚ್ಚು. ಹೆಣ ಬಿದ್ದ ಮರುಕ್ಷಣ ಅಶಾಂತಿಗೆ ಕರೆಕೊಟ್ಟು, ಅಮಾಯಕ ಧರ್ಮಿಯ ಕಾರ್ಯಕರ್ತರನ್ನು ಬಳಸಿಕೊಂಡು ಕೋಮು ಪ್ರಚೋದನಕಾರಿ ಭಾಷಣ ಮಾಡಿ ಪ್ರತಿಭಟಿಸಿದವರು ಸಂಜೆ ಮನೆಗೆ ತೆರಳಿದರೆ ಮತ್ತೆ ಬೀದಿಗೆ ಬರಲು ಮತ್ತೊಂದು ಹೆಣ ಉರುಳಬೇಕು. ರಾಜಕಾರಣಿಗಳ ಓಟು ಮತ್ತು ಸೀಟು ಗಟ್ಟಿಯಾಗಲು ಅಮಾಯಕ ಹೆಣಗಳು ಉರುಳಲೇಬೇಕಾದ ಪರಿಸ್ಥಿತಿ. ಇಂತಹ ಅಮಾನವೀಯ ಕೃತ್ಯವನ್ನು ಖಂಡಿಸಬೇಕು, ಸೃಷ್ಟಿ ಶ್ರೇಷ್ಠ ಮನುಷ್ಯನು ಮತ್ತು ಇತರ ಸೃಷ್ಟಿಗಳಲ್ಲಿ ಮಾನವನ ಮೌಲ್ಯ ಅನರ್ಘ್ಯವಾಗಿದೆ. ಭೂಮಿಯಿಂದ ಬಾಹ್ಯಾಕಾಶದ ವರೆಗಿನ ಜಗದ ಸೊಬಗನ್ನು ಸ್ಪರ್ಶಿಸಲು ಸಾಧ್ಯವಾಗಿರುವುದು ಮಾನವನ ವಿವೇಚನಾ ಶಕ್ತಿ ಮತ್ತು ಚಾಕಚಕ್ಯತೆಯಿಂದ. ಸೃಷ್ಟಿಕರ್ತ ನೀಡಿದ ಬುದ್ಧಿಯನ್ನು ಸಂಕೀರ್ಣಗೊಳಿಸಿದ ಮಾನವ ಸೂರ್ಯಯಾನಕ್ಕೆ ತಯಾರಿ ನಡೆಸುತ್ತಿದ್ದಾನೆ. ಹೀಗೆ ಮನುಷ್ಯನನ್ನು ಎಷ್ಟೇ ಕೊಂಡಾಡಿದರೂ ಕೆಲವೊಮ್ಮೆ ಮೂಕ ಪ್ರಾಣಿಗಳ ಮುಂದೆ ಮನುಷ್ಯನನ್ನು ಕಟಕಟೆಯಲ್ಲಿ ನಿಲ್ಲಿಸುವ ಅನಿವಾರ್ಯತೆ ಎದುರಾಗುತ್ತದೆ. ಅಂತಹ ಕುಕೃತ್ಯಗಳನ್ನು ನಡೆಸಲು ಮನುಷ್ಯರಿಂದ ಪರಸ್ಪರ ಪೈಪೋಟಿ. ಮನುಷ್ಯರ ನಡುವೆ ಪ್ರೀತಿಯ ಮರೀಚಿಕೆಯಿಂದ ಭೀತಿಯ ಪ್ರಭಾವ ಹೆಚ್ಚಾಗುತ್ತಿದೆ. ಯಾವುದೇ ಪ್ರಾಣಿ ತನ್ನದೇ ಜಾತಿಯ ಪ್ರಾಣಿಯನ್ನು ಬಲಿ ತೆಗೆಯದ, ಹಿಂಸಾತ್ಮಕವಾಗಿ ನಡೆಸಿಕೊಳ್ಳದ ಬಗೆಯನ್ನು ಅಭಿಮಾನಿಸುವ ಮಾನವನು ಹೆತ್ತವರು, ಒಡನಾಡಿಗಳು, ಅಥವಾ ಸಂಬಂಧಿಕರು ಬೇಡ ನನ್ನದೇ ಶರೀರ ಮತ್ತು ನೋವು ಹೊಂದಿರುವ ಮನುಷ್ಯನು ಎಂಬುದನ್ನು ಯೋಚಿಸದೆ ಬರ್ಬರವಾಗಿ ಕೊಲ್ಲುವ ಮಟ್ಟಕ್ಕಿಳಿದು ಬಿಟ್ಟಿದ್ದಾನೆ. ಅಂತವರನ್ನು ಮನುಷ್ಯರೆಂಬ ವಿಳಾಸದಿಂದ ಬದಿಗಿರಿಸಬೇಕೆಂದು ಮೂಕ ಪ್ರಾಣಿಗಳು ಪ್ರತಿಭಟಿಸುವ ಕಾಲ ಉದಯವಾದರೂ ಅಚ್ಚರಿಯಿಲ್ಲ.
ಹಾಡಹಗಲಿನಲ್ಲೇ ಮನುಷ್ಯವೆಸಗುವ ಅಮಾನುಷಿಕ ಕೃತ್ಯ ಮಾನವ ಕುಲದ ಸ್ವಾಸ್ಥ್ಯ ಕೆಡಿಸುತ್ತಿದೆ. ಹಿಂದು ಹರಿಸುವ ಮುಸ್ಲಿಮನ, ಮುಸ್ಲಿಮನ ಇರಿತಕ್ಕೆ ಹರಿದ ಹಿಂದುವಿನ ರಕ್ತವು ಕುವೆಂಪುರವರ ಶಾಂತಿಯ ಸಾಲುಗಳನ್ನು ಮುಚ್ಚಿಹಾಕುವಂತಿದೆ. ಕೊಲೆಗಾರರನ್ನು ನಿಯಂತ್ರಿಸುವ ಬಣ್ಣ ಬಣ್ಣದ ವ್ಯವಸ್ಥೆಗಳ ಬಗ್ಗೆ ಮಾತನಾಡುವ ಚಾಳಿಯನ್ನು ಬಿಟ್ಟು ಕರಾವಳಿ ಮತ್ತು ಕರ್ನಾಟಕದ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ಯೋಜನೆಗಳಿಗೆ ಚಾಲನೆ ನೀಡಿ ಮನುಷ್ಯರಿಗೆ ಬದುಕುವ ಗ್ಯಾರಂಟಿಗಳನ್ನು ಮೊದಲು ಸರ್ಕಾರಗಳು ಒದಗಿಸಬೇಕೆಂದು ಎಂದು ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯಾಧ್ಯಕ್ಷ ಆಮಿರ್ ಅಶ್ಅರೀ ಬನ್ನೂರು ಆಗ್ರಹಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್
