ಬೆಳಗಾವಿ/ ರಾಮದುರ್ಗ: ಪಟ್ಟಣದ ಅಲ್ಪಸಂಖ್ಯಾತರ ಬಹುದಿನದ ಬೇಡಿಕೆಯಾದ ಸಮುದಾಯ ಭವನ (ಶಾದಿಮಹಲ್) ನಿರ್ಮಾಣದ ಬೇಡಿಕೆಯು ಇವತ್ತು ಸಾಕಾರಗೊಂಡಿದೆ. ಸಮುದಾಯ ಭವನ ನಿರ್ಮಾಣಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸುಮಾರು 40 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಕೂಡ ಆಗಿದೆ.
ಈ 40 ಲಕ್ಷ ರೂಪಾಯಿ ವೆಚ್ಚದಲ್ಲಿ ರವಿವಾರ ಪಟ್ಟಣದ ಹೊರ ವಲಯದಲ್ಲಿರುವ ಈದ್ಗಾ ಹತ್ತಿರದ ಅಂಜುಮನ್ ಇಸ್ಲಾಂ ಕಮಿಟಿಯ ಖುಲ್ಲಾ ಜಾಗೆಯಲ್ಲಿ ಅಂಜುಮನ್ ಸಂಸ್ಥೆ ವತಿಯಿಂದ ನಿರ್ಮಿಸಲಾಗುತ್ತಿರುವ ಸಮುದಾಯ ಭವನ (ಶಾದಿಮಹಲ್) ಕಟ್ಟಡದ ಕಾಮಗಾರಿಗೆ ಕರ್ನಾಟಕ ಸರಕಾರದ ಮುಖ್ಯ ಸಚೇತಕರು ಹಾಗೂ ರಾಮದುರ್ಗ ಕ್ಷೇತ್ರದ ಶಾಸಕರಾದ ಅಶೋಕ್ ಪಟ್ಟಣ ಅವರು ಭೂಮಿ ಪೂಜೆ ನೇರವೆರಿಸಿದರು.
ನಂತರ ಸುದ್ಧಿಗಾರರ ಜೊತೆ ಮಾತನಾಡಿದ ಶಾಸಕರು “ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ತಾವೆಲ್ಲರೂ ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು.
ಅಲ್ಪಸಂಖ್ಯಾತ ಮುರಾರ್ಜಿ ವಸತಿ ಶಾಲೆಗೆ ಶೀಘ್ರದಲ್ಲಿ ಕಟ್ಟಡ ನಿರ್ಮಿಸಲಾಗುವುದು. ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ, ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದಲ್ಲಿ ಉನ್ನತ ವ್ಯಕ್ತಿಗಳನ್ನಾಗಿ ಮಾಡಬೇಕು, ಎಲ್ಲರೂ ಒಂದಾಗಿ ಸಮಾಜಕ್ಕಾಗಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಾಮಿಯಾ ಮಸ್ಜಿದ್ ಮೌಲಾನಾ ಜಹೂರ ಹಾಜಿ ಅವರು ಆಶೀರ್ವಚನ ನೀಡಿದರು.
ಅಂಜುಮನ್ ಸಂಸ್ಥೆಯ ಮೇಲೆ ಆಧಾರರಹಿತ ಆರೋಪ ಮಾಡಿದ ಸಂಸ್ಥೆ ನಿರ್ದೇಶಕನ ವಜಾ
ರಾಮದುರ್ಗ ಅಂಜುಮನ್ ಸಂಸ್ಥೆ ನಿರ್ದೇಶಕರಾದ ಶಬ್ಬಿರ ತಾಸಗಾಂವ ಅವರು ಇತ್ತೀಚೆಗೆ ಅಂಜುಮನ್- ಎ- ಇಸ್ಲಾಂ ಕಮೀಟಿಯವರು ಪಟ್ಟಣದ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆಗೆ ಹಲಾಲ ಸರ್ಟಿಫಿಕೇಟನ್ನು ನೀಡಿ , ಅವರಿಂದ ಹಣ ಪಡೆದಿದ್ದಾರೆಂದು ಗಂಭೀರ ಆರೋಪವನ್ನು ಮಾಡಿದ್ದರು.
ಈ ವಿಷಯದ ಕುರಿತು ಅಂಜುಮನ್ ಸಂಸ್ಥೆಯು ಜಾಮಿಯ ಮಸೀದಿಯಲ್ಲಿ 29-04-2025 ರಂದು ಸಭೆ ಮಾಡಿತು. ಸಭೆಯಲ್ಲಿ ಸದರಿ ನಿರ್ದೇಶಕರಾದ ಶಬ್ಬಿರಅಹ್ಮದ ತಾಸಗಾಂವ ಅವರು ತಾವು ಮಾಡಿದ ಆರೋಪದ ಕುರಿತು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ತಪ್ಪು ಒಪ್ಪಿಕೊಂಡ ಕಾರಣ ಅವರನ್ನು ಅಂಜುಮನ ಇಸ್ಲಾಂ ಕಮೀಟಿಯಿಂದ ವಜಾ ಮಾಡಿ ಮುಂದಿನ ಕ್ರಮಕ್ಕಾಗಿ ವಕ್ಫ್ ಬೋರ್ಡಿಗೆ ಕಳಿಸಿದ್ದೇವೆ ಎಂದು ಸಮುದಾಯ ಭವನದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಸಂಸ್ಥೆ ವತಿಯಿಂದ ಕರ ಪತ್ರ ಹಂಚಲಾಯಿತು.
ಈ ಸಂಧರ್ಭದಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ, ಶಬ್ಬೀರ್ ಕಾಜಿ, ಉಪಾಧ್ಯಕ್ಷ ಫೈರೋಜ್ ಪಠಾಣ , ಜಾಮಿಯಾ ಮಸ್ಜಿದ್ ಮೌಲಾನಾ ಜಹೂರ ಹಾಜಿ, ಯುವ ಕಾಂಗ್ರೆಸ್ ಅಧ್ಯಕ್ಷ ಅನಿಕೇತ್ ಪಟ್ಟಣ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
- ಕರುನಾಡ ಕಂದ
