ಕಲಬುರಗಿ/ ಚಿತ್ತಾಪುರ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರು ಒಂದು ಜನ್ಮ ಅಲ್ಲ ಇನ್ನೂ ಹತ್ತು ಜನ್ಮ ಪಡೆದು ಬಂದ್ರೂ ಮುಸ್ಲಿಂ ಸಮಾಜವನ್ನು ಮುಗಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ತಾಲೂಕು ಅಧ್ಯಕ್ಷ ಮುಕ್ತಾರ್ ಪಟೇಲ್ ಹೇಳಿದರು.
ಪಟ್ಟಣದ ಕಿಂಗ್ ಪ್ಯಾಲೇಸ್ ಫಂಕ್ಷನ್ ಹಾಲ್’ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಣಿಕಂಠ ರಾಠೋಡ್ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾತನಾಡುವಾಗ, ಓರ್ವ ಮುಸ್ಲಿಂನವನು ನಮ್ಮ ಬಂಜಾರ ಸಮಾಜದ ಹುಡುಗಿ ಮೇಲೆ ಅತ್ಯಾಚಾರ ಮಾಡಿದ್ದಾನೆ, ಒಂದು ವೇಳೆ ನಮಗೆ 15-20 ನಿಮಿಷ ಸಮಯ ಕೊಡಿ ಕಲಬುರಗಿಯಲ್ಲಿರುವ ಮುಸ್ಲಿಂರನ್ನು ಸಾಫ್ ಮಾಡುತ್ತೇನೆ ಎಂದು ಹೇಳಿರುವುದು ಯಾವ ನ್ಯಾಯ? ನಾವು ಕೂಡ ಯಾರು ಅತ್ಯಾಚಾರ ಮಾಡಿದ್ದಾನೆ ಅವನಿಗೆ ಕಠಿಣ ಶಿಕ್ಷೆಯಾಗಲಿ ಎಂದು ಒತ್ತಾಯಿಸುತ್ತೇವೆ. ಆದರೆ ಒಬ್ಬ ವ್ಯಕ್ತಿ ಮಾಡಿದ ತಪ್ಪಿಗ ಇಡೀ ಮುಸ್ಲಿಂ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದು ಇಡೀ ಮುಸ್ಲಿಂ ಸಮುದಾಯವು ಇದನ್ನು ತ್ರೀವವಾಗಿ ಖಂಡಿಸುತ್ತದೆ ಎಂದರು.
ಮಣಿಕಂಠ ರಾಠೋಡ ಸೇರಿದಂತೆ ಕೆಲ ಬಿಜೆಪಿ ನಾಯಕರು ಮುಸ್ಲಿಂ ಸಮುದಾಯವನ್ನು ಟೀಕಿಸುವುದು, ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದು ಇಲ್ಲಸಲ್ಲದ ಆರೋಪ ಮಾಡುವುದನ್ನು ದಿನನಿತ್ಯದ ರೂಢಿಯನ್ನಾಗಿಸಿಕೊಂಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುತ್ತಿರುವವರ ಮತ್ತು ದ್ವೇಷದ ಭಾಷಣ ಮಾಡುವವರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಬೇಕು. ಕೂಡಲೇ ಅವರನ್ನು ಬಂಧಿಸಿ ಅವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೋಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಬಿಜೆಪಿ ರಾಜ್ಯ ಮತ್ತು ಜಿಲ್ಲಾ ನಾಯಕರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಭಾಷಣ ಮಾಡುವ ಸಂದರ್ಭದಲ್ಲಿ, ಜಿಲ್ಲೆಯ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಅವರನ್ನು ಕೇವಲ ಅವರ ಧರ್ಮವನ್ನು ಗುರಿಯಾಗಿಟ್ಟುಗೊಂಡು ಅವರಿಗೆ ಮತ್ತು ಒಂದು ಸಮಾಜಕ್ಕೆ ಅವಮಾನವಾಗುವ ರೀತಿಯಲ್ಲಿ ಹೇಳಿಕೆ ನೀಡುತ್ತಾರೆ. ಇಂತಹ ಹೇಳಿಕೆಗಳು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಅಚ್ಚರಿಯ ಸಂಗತಿವೆಂದರೆ, ಯಾವ ಪಕ್ಷದ ಘೋಷಣೆ ವಾಕ್ಯ ಭೇಟಿ ಪಡಾವೋ ಭೇಟಿ ಬಚಾವೋ ಇದೆ ಅವರದೇ ಸ್ವಪಕ್ಷದವರೇ ಇಂದು ಒಬ್ಬ ಬಡ ಕುಟುಂಬದಿಂದ ಕಷ್ಟಪಟ್ಟು ಐಎಎಸ್ ಪರೀಕ್ಷೆ ಪಾಸ್ ಮಾಡಿ ಬಂದು ಸಾಂವಿಧಾನಿಕ ಸ್ಥಾನದಲ್ಲಿರುವ ಹೆಣ್ಣು ಮಗಳಿಗೆ ಕೇವಲ ಧರ್ಮವನ್ಮು ಗುರಿಯಾಗಿಸಿಕೊಂಡು ಟೀಕಿಸುತ್ತಿರುವ ಬಿಜೆಪಿ ನಾಯಕರ ಮನಸ್ಥಿತಿ ತೋರಿಸುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ಸಮಾಜದ ಮುಖಂಡ ಸೈಯದ್ ಜಫರುಲ್ ಹಸನ್ ಮಾತನಾಡಿ, ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರ ಮೇಲೆ ಗೂಂಡಾ ಕಾಯ್ದೆ ಹಾಕಿ ಚಿತ್ತಾಪುರದಿಂದ ಗಡಿಪಾರು ಮಾಡಬೇಕು ಎಂದರು.
ಮುಸ್ಲಿಂ ಸಮಾಜದ ಮುಖಂಡ ಪಾಶಾಮಿಯ್ಯಾ ಖುರೇಶಿ ಮಾತನಾಡಿ, ಬಿಜೆಪಿಯ ಕೆಲ ಮುಖಂಡರಿಗೆ ಜಾತಿ ಜಾತಿಗಳ ಮಧ್ಯದಲ್ಲಿ ವಿಷ ಬೀಜ ಬಿತ್ತುವುದನ್ನು ಬಿಟ್ಟು ಬೇರೆನು ಗೊತ್ತಿಲ್ಲ. ಮಾತೆತ್ತಿದರೆ ಹಿಂದೂ-ಮುಸ್ಲಿಂ ಎನ್ನುತ್ತಾರೆ. ಇವರಿಗೆ ದೇಶದ ಬಗ್ಗೆ ಅಪಾರ ಗೌರವ ಇದ್ದರೆ ಅಭಿವೃದ್ಧಿ, ಶಿಕ್ಷಣ, ಉದ್ಯೋಗದ ಬಗ್ಗೆ ಮಾತಾಡಲಿ, ಅದನ್ನು ಬಿಟ್ಟು ಜಾತಿ ಬಗ್ಗೆ ಮಾತಾಡಿದರೆ ದೇಶ ಉದ್ಧಾರ ಆಗುತ್ತಾ ಎಂದರು.
ಮುಸ್ಲಿಂ ಸಮಾಜದ ಮುಖಂಡ ಎಂ. ಎ. ರಶೀದ್ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಸಾಬೀರ ಖುರೇಷಿ, ಅಫಜಲ್ ಖುರೇಷಿ, ಯಕ್ಬಾಲ್ ತಂಬಾಕವಾಲೇ, ಅಹ್ಮದ್ ಸೇಠ, ಶೇಖ ಬಬ್ಲು, ಖಾಜಾ ಬದಲ್, ಮೋಸಿನ್ ಚೈನು, ಅಬ್ದುಲ್ ಗಫೋರ್, ಎಂ. ಎ. ನಯೀಮ್, ಸಾಬೀರ್ ಖುರೇಶಿ, ನಜಿರ್ ಅಡ್ಕಿ, ಸೀರಾಜ ಖಾಜಿ, ಮುನ್ನಾ ಸೇರಿದಂತೆ ಇತರರು ಇದ್ದರು.
ವರದಿ ಮಹಮ್ಮದ್ ಅಲಿ
