ಕಲಬುರಗಿ/ ಚಿತ್ತಾಪುರ: ಕಲಬುರಗಿ ಜಿಲ್ಲೆಯ ಕಲಬುರಗಿ ತಾಲೂಕಿನ ನಂದಿಕೂರ ಗ್ರಾಮದ ಲಂಬಾಣಿ ಸಮಾಜದ ಬಾಲಕಿಯ ಮೇಲೆ ಅತ್ಯಾಚಾರ ಮಾರಣಾಂತಿಕ ಹಲ್ಲೆ ನಡೆಸಿದ ವಸೀಮ ಶೇಖ್ ಮೌಲಾ ಈತನನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಿ ನ್ಯಾಯ ಒದಗಿಸಬೇಕು ಎಂದು ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ತಾಲೂಕು ಅಧ್ಯಕ್ಷ ಭೀಮಸಿಂಗ್ ಚವ್ಹಾಣ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಿ ಮಾತನಾಡಿದ ಅವರು, ಆರೋಪಿ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಎಫ್. ಐ. ಆರ್ ಕೂಡಾ ದಾಖಲಾಗಿರುತ್ತದೆ. ಸದರಿ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು. ಸಂತ್ರಸ್ತೆಯ ಕುಟುಂಬದವರಿಗೆ 50 ಲಕ್ಷ ರೂ. ಪರಿಹಾರ ನೀಡಬೇಕು, ಮುಂದಿನ ದಿನಗಳಲ್ಲಿ ನಮ್ಮ ಸಮಾಜದವರ ಮೇಲೆ ಈ ರೀತಿ ಅತ್ಯಾಚಾರ ಘಟನೆಗಳು ಜರುಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಿರಿಯ ಮುಖಂಡ ಚಂದು ಜಾಧವ ಮಾತನಾಡಿ, ಸದರಿ ಬಾಲಕಿಯ ಅತ್ಯಾಚಾರ ವಿಷಯವನ್ನು ಇಟ್ಟುಕೊಂಡು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಇತನು ಮುಸ್ಲಿಂ ಸಮುದಾಯವನ್ನು 15 ನಿಮಿಷ ಸಮಯ ಕೊಟ್ಟರೆ ಇಡೀ ಕಲಬುರಗಿ ಪಟ್ಟಣದಲ್ಲಿರುವ ಮುಸ್ಲಿಂ ಸಮುದಾಯವರನ್ನು ಸಂಪೂರ್ಣವಾಗಿ ಖಲಾಸ್ ಮಾಡುತ್ತೇವೆಂದು ಹೇಳಿಕೆ ನೀಡಿ ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆಯನ್ನು ನೀಡಿರುತ್ತಾನೆ. ಮೇಲಾಗಿ ಜಾತಿ ಜಾತಿಗಳ ನಡುವೆ ಜಗಳ ಹಚ್ಚುವ ಕೆಲಸ ಮಾಡಿರುತ್ತಾನೆ ಇದನ್ನು ನಮ್ಮ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಬಂಜಾರ ಸಮಾಜದ ಯುವ ಅಧ್ಯಕ್ಷ ಜಗದೀಶ ಚವ್ಹಾಣ ಮಾತನಾಡಿ, ಬಂಜಾರ ಸಮಾಜದ ಬಾಲಕಿ ಮೇಲೆ ವಸೀಮ ಶೇಖ್ ಶೇಖ್ ಮೌಲಾ ಅತ್ಯಾಚಾರ ಮಾಡಿರುವ ಇತನ ಮೇಲೆ ಕಾನೂನು ಕ್ರಮ ಕೈಗೊಂಡು ಕೂಡಲೇ ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಿ ನ್ಯಾಯ ಒದಗಿಸಿ ಕೊಡಬೇಕು ಒಂದು ವೇಳೆ ಅತ್ಯಾಚಾರ ಎಸಗಿರುವ ಇತನ ಮೇಲೆ ಕ್ರಮ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ಹಂತ ಹಂತವಾಗಿ ಉಗ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಂಜಾರ ಸಮಾಜದ ಮುಖಂಡರಾದ ಕುಮಾರ ಚವ್ಹಾಣ ಯಾಗಾಪೂರ, ದೇವಿದಾಸ ಚವ್ಹಾಣ, ರವಿ ರಾಠೋಡ, ವಿಜಯಕುಮಾರ ಚವ್ಹಾಣ ಯಾಗಾಪೂರ, ರಾಕೇಶ ಪವಾರ, ಪ್ರವೀಣ ಪವಾರ, ವಿಠಲ್ ರಾಠೋಡ, ಗೋಪಿ ರಾಠೋಡ ಇದ್ದರು.
ವರದಿ ಮಹಮ್ಮದ್ ಅಲಿ
