ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿ ಶಾಂತಿ ಕದಡುವ ಪ್ರಯತ್ನವನ್ನು ಸಹಿಸುವುದಿಲ್ಲ. ಕೋಮುದ್ವೇಷ ಹರಡುವ ಹಾಗೂ ಹಿಂಸೆಗೆ ಪ್ರಚೋದನೆ ನೀಡುವವರ ಮೇಲೆ ನಿಗಾ ಇಡಲಾಗಿದೆ. ಇಂತಹವರ ವಿರುದ್ಧ ಗೂಂಡಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಜೂನ್ 7 ರ ಬಕ್ರೀದ್ ಹಬ್ಬದ ಅಂಗವಾಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಿಂದೂ–ಮುಸ್ಲಿಂ ಮುಖಂಡರ ಸೌಹಾರ್ದ ಸಭೆ ನಡೆಯಿತು. ಸಂಚಾರ ನಿಯಮ ಉಲ್ಲಂಘನೆ, ಸ್ವಚ್ಛತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚರ್ಚೆ ನಡೆಯಿತು.
ಹಬ್ಬದ ಸಂದರ್ಭದಲ್ಲಿ ಕೆಲವರು ಹಿಂಸೆಗೆ ಪ್ರಚೋದನೆ ನೀಡುವುದು ಗಮನಕ್ಕೆ ಬಂದಿದೆ. ಗೋವು ರಕ್ಷಣೆಯ ಹೆಸರಿನಲ್ಲಿ ಅನೈತಿಕ ಪೊಲೀಸ್ ಗಿರಿ ಕೂಡಾ ನಡೆಯುತ್ತಿದೆ, ಗೋವು ಅಕ್ರಮ ಸಾಗಣೆ ಕಂಡುಬಂದರೆ ಪೊಲೀಸರ ಗಮನಕ್ಕೆ ತರಬೇಕು, ಕಾನೂನು ಕೈಗೆತ್ತಿಕೊಂಡರೆ ಸುಮ್ಮನೆ ಇರುವುದಿಲ್ಲ’ ಎಂದು ಪೊಲೀಸರು ಎಚ್ಚರಿಕೆ ನೀಡಿದರು.
ಸಾಮಾಜಿಕ ಜಾಲತಾಣದಲ್ಲಿ ಹರಡುವ ವದಂತಿ ಸವಾಲಾಗಿ ಪರಿಣಮಿಸುತ್ತಿದೆ. ವಾಸ್ತವ ತಿರುಚಿ ಸಂದೇಶ ರವಾನಿಸುವ ಯುವ ಸಮೂಹ ಸಮಸ್ಯೆಗೆ ಸಿಲುಕುತ್ತಿದೆ. ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಡಲಾಗಿದ್ದು, ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ಹೇಳಿದರು.
‘ಹಬ್ಬದಲ್ಲಿ ಸಂಚಾರ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು, ಹಬ್ಬದ ನೆಪದಲ್ಲಿ ದ್ವಿಚಕ್ರ ವಾಹನದಲ್ಲಿ ನಿಗದಿಗಿಂತ ಹೆಚ್ಚು ಜನರು ಸಂಚರಿಸಲು ಅವಕಾಶವಿಲ್ಲ. ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ. ಮಾದಕ ದ್ರವ್ಯ ಕಳ್ಳಸಾಗಣೆ, ಮಾರಾಟ ಕಂಡುಬಂದರೆ ಮಾಹಿತಿ ನೀಡಿ’ ಎಂದು ಮನವಿ ಮಾಡಿದರು.
‘ತ್ಯಾಗ ಮತ್ತು ಸೌಹಾರ್ದ ಸಂಕೇತದ ಹಬ್ಬ ಬಕ್ರೀದ್ ಪ್ರೀತಿ, ಸಹೋದರತ್ವ ಸಾರಲು ಈ ಹಬ್ಬ ಮಾಡಲಾಗುತ್ತದೆ. ಬೇರೆ ಧರ್ಮೀಯರ ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ಹಬ್ಬ ಆಚರಣೆ ಮಾಡುವ ಅಗತ್ಯ ಇದೆ’ ಎಂದು ಮುಸ್ಲಿಂ ಸಮುದಾಯದ ಮುಖಂಡ ಹಾಗೂ ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್ ಹೇಳಿದರು.
ಡಿ.ವೈ.ಎಸ್. ಪಿ ಪ್ರಸಾದ್ ಗೋಖಲೆ, ಪಿಎಸ್ಐ ಕೆ.ಬಿ. ವಾಸುಕುಮಾರ, ಕಾನೂನು ಸುವ್ಯಸ್ಥೆಯ ಪಿಎಸ್ಐ ಅವಿನಾಶ ಕಾಂಬಳೆ, ಪುರಸಭೆ ಅಧ್ಯಕ್ಷ ಬಿ ಪ್ರಸಾದ, ಸೇರಿದಂತೆ ಸರ್ವಧರ್ಮ ಸಮಾಜ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
