ಬೆಂಗಳೂರು: ರಾಜ್ಯದಲ್ಲಿ ಹೊಸ ವಿದ್ಯುತ್ ಸಂಪರ್ಕಗಳಿಗೆ ಸ್ವಾಧೀನಾನುಭವ ಪತ್ರ (ಒ.ಸಿ.) ಕಡ್ಡಾಯಗೊಳಿಸಿರುವುದರಿಂದ ಕಟ್ಟಡ ನಿರ್ಮಾಣಕ್ಕೆ ಹಾಗೂ ಕೈಗಾರಿಕೋದ್ಯಮಕ್ಕೆ ಕಿರಿಕಿರಿ ಶುರುವಾಗಿದೆ. ಒ.ಸಿ. ಸಲ್ಲಿಸದ ಕಾರಣಕ್ಕೆ ವಿದ್ಯುತ್ ವಿತರಣಾ ಕಂಪನಿಗಳು (ಎಸ್ಕಾಂ) ವಿದ್ಯುತ್ ಸಂಪರ್ಕ ನಿರಾಕರಿಸುತ್ತಿದ್ದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್ಸಿ) ಆದೇಶವು ಕಟ್ಟಡಗಳ ಮಾಲೀಕರ ಜತೆಗೆ ಇಂಧನ ಇಲಾಖೆಗೂ ಸಂಕಷ್ಟ ತಂದೊಡ್ಡಿದೆ.
ಈ ಹಿಂದೆ ಕಟ್ಟಡ ನಕ್ಷೆ ಮಂಜೂರಾತಿ, ಕಟ್ಟಡ ಆರಂಭಿಕ ಪ್ರಮಾಣಪತ್ರದ (ಸಿ.ಸಿ.) ಆಧಾರದಲ್ಲಿ ಎಸ್ಕಾಂಗಳು ಹೊಸ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದ್ದವು. ಕಟ್ಟಡ ಮಾಲೀಕರು ಒ.ಸಿ. ಇಲ್ಲದಿದ್ದರೂ ಇತರೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ವಿದ್ಯುತ್ ಸಂಪರ್ಕ ಪಡೆಯುತ್ತಿದ್ದರು. ಆದರೆ, ಸುಪ್ರೀಂಕೋರ್ಟ್ ಮತ್ತು ಕೆಇಆರ್ಸಿ ಆದೇಶದ ಅನ್ವಯ ಎಸ್ಕಾಂಗಳು ಏ.4ರಿಂದ ಅನ್ವಯವಾಗುವಂತೆ ಹೊಸ ವಿದ್ಯುತ್ ಸಂಪರ್ಕಕ್ಕೆ ಒ.ಸಿ. ಸಲ್ಲಿಕೆ ಕಡ್ಡಾಯಗೊಳಿಸಿವೆ.
5,500 ಕೈಗಾರಿಕೆಗಳಿಗೆ ಕರೆಂಟ್ ಕೊಟ್ಟಿಲ್ಲ
ರಾಜ್ಯದಲ್ಲಿ ವಸತಿ ಹಾಗೂ ವಾಣಿಜ್ಯ ಆಸ್ತಿಗಳ ಮಾದರಿಯಲ್ಲೇ ಕೈಗಾರಿಕೆ, ಕೈಗಾರಿಕಾ ಶೆಡ್ಗಳಿಗೂ ಏ.4 ರಿಂದ ವಿದ್ಯುತ್ ಸಂಪರ್ಕಕ್ಕೆ ಒ.ಸಿ. ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ. ಎಲ್ಲವೂ ಸರಿಯಿದ್ದು, ನಕ್ಷೆ ಮಂಜೂರಾತಿ ಪಡೆದಿದ್ದರೂ ನಕ್ಷೆ ಮಂಜೂರಾತಿ ಪ್ರಕಾರ ಕೈಗಾರಿಕಾ ಕಟ್ಟಡ ನಿರ್ಮಿಸಿಲ್ಲಎಂಬ ಕಾರಣ ನೀಡಿ ಒ.ಸಿ. ಕೊಡುತ್ತಿಲ್ಲ. ಒ.ಸಿ. ಇಲ್ಲದ ಕಾರಣಕ್ಕೆ ಕೈಗಾರಿಕೆ, ಸಣ್ಣ ಕೈಗಾರಿಕೆ, ಕೋಳಿ ಫಾರಂ, ಡೇರಿಗಳಿಗೂ ವಿದ್ಯುತ್ ಸಂಪರ್ಕ ಸಿಗದಂತಾಗಿದೆ. ಒ.ಸಿ ಸಲ್ಲಿಸದ ಕಾರಣಕ್ಕೆ ಬರೋಬ್ಬರಿ 5,500 ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕ ತಡೆ ಹಿಡಿಯಲಾಗಿದ್ದು, ಸಣ್ಣ ಕೈಗಾರಿಕಾ ವಲಯಕ್ಕೆ ಪೆಟ್ಟು ಬಿದ್ದಿದೆ.
ಸಚಿವರ ಮಾತು
“ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸ್ವಾಧೀನಾನುಭವ ಪತ್ರ ಕಡ್ಡಾಯಗೊಳಿಸಿರುವುದರಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿಚರ್ಚಿಸಿ ತೀರ್ಮಾನ ಮಾಡುತ್ತೇವೆ. ಸಮಸ್ಯೆಯನ್ನು ಶೀಘ್ರವೇ ಪರಿಹರಿಸುತ್ತೇವೆ ” .
- ಕೆ.ಜೆ.ಜಾರ್ಜ್ ಇಂಧನ ಸಚಿವರು
ವರದಿ ಜಿಲಾನಸಾಬ್ ಬಡಿಗೇರ್
