ಬಾಗಲಕೋಟೆ: ಸಮಾಜದಲ್ಲಿ ಅಂಧ, ಅನಾಥ, ನಿರ್ಗತಿಕ ಬಡ ಮಕ್ಕಳಿಗೆ ಅಣ್ಣ, ವಸ್ತ್ರ, ವಸತಿ ವ್ಯವಸ್ಥೆ ಮಾಡಿ ಅವರಿಗೆ ಸಂಗೀತ ಕಲಿಸುವುದರೊಂದಿಗೆ ಅವರನ್ನು ಮುಖ್ಯವಾಹಿನಿಗೆ ತರುವ ಮೂಲಕ ಸಂಗೀತ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಶ್ರೀ ಗಾನಯೋಗಿ ಪಂಚಾಕ್ಷರ ಗವಾಯಿಗಳ ಪ್ರತಿಷ್ಠಾನವನ್ನು ಶೀಘ್ರದಲ್ಲಿಯೇ ರಚಿಸಲಾಗುವುದು ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮಾಜಿ ಸದಸ್ಯರು, ಹಿರಿಯ ಗಾಯಕ ಅಖಂಡೇಶ್ವರ ಎಂ. ಪತ್ತಾರ ಹೇಳಿದರು.
ಅವರು ಭಾನುವಾರ ವಿದ್ಯಾಗಿರಿ ಸಾಯಿ ಮಂದಿರದಲ್ಲಿ ಶ್ರೀ ಗಾನಯೋಗಿ ಪಂಚಾಕ್ಷರ ಗವಾಯಿಗಳ ಶಿಷ್ಯರು, ಅಭಿಮಾನಿಗಳು ಸೇರಿದ ದ್ವಿತೀಯ ಸಭೆಯಲ್ಲಿ ಮಾತನಾಡಿದ ಅವರು, ಪಂ, ಪಂಚಾಕ್ಷರ ಗವಾಯಿಗಳು ಎಂಬ ಬಿರುದು, ಹೆಸರು ಬಂದಿರುವುದು ಬಾಗಲಕೋಟೆ ಜಿಲ್ಲೆ ಆಗಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ, ಈ ಹಿನ್ನೆಲೆಯಿಂದಾಗಿ ಜಿಲ್ಲಾ ಮಟ್ಟದ ಎಲ್ಲಾ ಪ್ರಕಾರ ಕಲೆಗಳ ಕಲಾವಿದರು, ಶಿಷ್ಯರು, ಅಭಿಮಾನಿಗಳು ಸೇರಿಕೊಂಡು ಅವರ ಹೆಸರಿನಲ್ಲಿ ಪ್ರತಿಷ್ಠಾನ ರಚಿಸಲು ಜಿಲ್ಲೆಯ ಎಲ್ಲಾ ಕಲಾವಿದರು ಸಹಮತ ವ್ಯಕ್ತಪಡಿಸಿರುವುದು ಸಂತಸ ತಂದಿದೆ. ಶೀಘ್ರದಲ್ಲಿಯೇ ಬಾಗಲಕೋಟದಲ್ಲಿ ಪಂ, ಪಂಚಾಕ್ಷರ ಗವಾಯಿಗಳ ಹೆಸರಲ್ಲಿ ಪ್ರತಿಷ್ಠಾನ ರಚಿಸುವ ಮೂಲಕ ಸಂಗೀತ ಹಾಗೂ ಎಲ್ಲ ಪ್ರಕಾರದ ಕಲೆಗಳ ಬೆಳವಣಿಗೆಗೆ ಪ್ರೋತ್ಸಾಹಿಸುವುದು, ಕಲಾವಿದರ ಕುಂದು ಕೊರತೆಗಳ ಕುರಿತು ಚರ್ಚಿಸಿ ಸರ್ಕಾರದ ಗಮನಕ್ಕೆ ತರುವುದು, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸಾಧನೆ ಮಾಡಿದ ಹಿರಿಯ ಕಿರಿಯ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರಶಸ್ತಿ, ಪುರಸ್ಕಾರ ನೀಡಿ ಗೌರವಿಸುವ ಕೆಲಸ ಕಾರ್ಯಗಳು ಪ್ರತಿಷ್ಠಾನದ ಮೂಲ ಉದ್ದೇಶವಾಗಿದೆ ಎಂದರು ಹೇಳಿದರು.
ಸಭೆಯಲ್ಲಿ ಖ್ಯಾತ ಸಂಗೀತ ಕಲಾವಿದ ಆನಂದಕುಮಾರ ಕಂಬಳಿಹಾಳ, ಮುಧೋಳದ ಬಸವರಾಜ ಮುಗಳಖೋಡ, ಬಾಗಲಕೋಟೆಯ ಶಶಿಧರ ಜಿಗಜಿನ್ನಿ, ಅಶೋಕ ಬಡಿಗೇರ, ರಾಮಪುರದ ಚಂದ್ರಶೇಖರ ಆಲೂರ, ಗುಳೇದಗುಡ್ಡದ ಶಂಕರ ಲಮಾಣಿ, ಭೀಮಸಿಂಗ್ ರಾಠೋಡ, ಸರದಾರ ಮುಂದಿನಮನಿ, ಶ್ರೀಕಾಂತ ಚಿಮ್ಮಲ, ಬಸವರಾಜ ಸಿಂದಗಿಮಠ, ಪವಿತ್ರಾ ಜಕ್ಕಪ್ಪನವರ, ಬಾದಾಮಿ ದೇವೇಂದ್ರ ಬಡಿಗೇರ, ಇಳಕಲ್ಲದ ಕೃಷ್ಣಾ ಬೆಣ್ಣೂರ ಇತರರು ಪ್ರತಿಷ್ಠಾನ ಮಾಡಲು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಸೋಮು ಗಡೇದಗೌಡರ, ಕಲ್ಯಾಣಕುಮಾರ ಗೂಗಿ, ಮಹಾಲಿಂಗಪ್ಪ ಹೂಗಾರ, ಬಸವರಾಜ ಜಿಡಗಿ, ವಿಜಯ ಹಿರೇಮಠ, ಕೋಟೆ, ವಿದ್ಯಾ ಹೊದ್ಲೂರ, ಬೀಳಗಿ, ಮುಧೋಳ, ಹುನಗುಂದ, ಇಳಕಲ್ಲ, ಬಾದಾಮಿ, ಜಮಖಂಡಿ, ಗುಳೇದಗುಡ್ಡ, ರಬಕವಿ-ಬನಹಟ್ಟಿ ತಾಲ್ಲೂಕಿನ ಕಲಾವಿದರು ಇದ್ದರು.
- ಕರುನಾಡ ಕಂದ
