
ಬಳ್ಳಾರಿ : ಕನ್ನಡ ಭಾಷೆಯನ್ನು ತಮಿಳು ಭಾಷೆಯಿಂದ ಹುಟ್ಟಿದ್ದು ಎಂಬ ದುರಹಂಕಾರ ಹೇಳಿಕೆಯನ್ನು ನಟ ಕಮಲ್ ಹಾಸನ್ ಹೇಳಿರುವುದನ್ನು ಸಮಸ್ತ ಏಳು ಕೋಟಿ ಕನ್ನಡಿಗರು ಖಂಡಿಸಿದ್ದಾರೆ.
ಅದರಂತೆ ಇಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಪುಟ್ಬಾಲ್ ಕ್ರೀಡಾಂಗಣದಿಂದ ರಾಯಲ್ ವೃತ್ತದಲ್ಲಿ ಸೇರಿ ಕಮಲ್ ಹಾಸನ್ ಭಾವಚಿತ್ರವನ್ನು ಹರಿದು ಬೆಂಕಿ ಹಚ್ಚಿ ಅವರ ವಿರುದ್ಧ ಧಿಕ್ಕಾರವನ್ನು ಕೂಗಿ ಪ್ರತಿಭಟಿಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಂಘಟನೆಯ ಜಿಲ್ಲಾಧ್ಯಕ್ಷ ಎಚ್. ಹುಲುಗಪ್ಪ ಮಾತನಾಡಿ ಸುಮಾರು 2,000 ವರ್ಷಗಳ ಇತಿಹಾಸ ಇರುವಂತಹ ಕನ್ನಡ ಭಾಷೆಯನ್ನು ತಮಿಳು ಭಾಷೆಯಿಂದ ಹುಟ್ಟಿದ್ದು ಎಂಬ ದುರಹಂಕಾರ ಹೇಳಿಕೆಯನ್ನು ನಟ ಕಮಲ್ ಹಾಸನ್ ಹೇಳಿರುವುದನ್ನು ಸಮಸ್ತ ಏಳು ಕೋಟಿ ಕನ್ನಡಿಗರು ಖಂಡಿಸಿದ್ದು ಕನ್ನಡದ ಎಂಟು ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವುದು, ಇಮ್ಮಡಿ ಪುಲಕೇಶಿ, ಅಮೋಘವರ್ಷ, ಕೃಷ್ಣದೇವರಾಯ ಎಂಬ ಅತಿರಥ ಮಹಾರಾಜರು ಇಡೀ ನಮ್ಮ ಕನ್ನಡನಾಡನ್ನಲ್ಲದೆ ಇಡೀ ದೇಶವನ್ನು ಆಳಿದಂತಹ ಇತಿಹಾಸವಿರುವ ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿರುವುದು ಎಂಬ ಹೇಳಿರುವುದು ದುರಹಂಕಾರದ ಪರಮಾವಧಿ ಮಾತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಸಂಚಾಲಕ ಹಾಗೂ ಕಂಪ್ಲಿ ತಾಲೂಕು ಅಧ್ಯಕ್ಷ ಬಿ. ರಮೇಶ ಮಾತನಾಡಿ ತಮಿಳು ನಟ ಕಮಲಹಾಸನ್ ಕ್ಷಮೆ ಕೇಳುವವರೆಗೂ ಅವರು ಅಭಿನಯಿಸುವ ಯಾವುದೇ ಚಿತ್ರವೂ ಕರ್ನಾಟಕದಲ್ಲಿ ಬಿಡುಗಡೆಯಾಗಬಾರದು ಮತ್ತು ಅವರು ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ಕಾಲಿಡದಂತೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾನೂನು ಕ್ರಮ ತೆಗೆದು ಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ
ಆದ್ದಿಗೇರೆ ರಾಮಣ್ಣ, ಜಿಲ್ಲಾ ಸಂಚಾಲಕ ದುರ್ಗಾ ಪ್ರಸಾದ ಕುರುಗೋಡು ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು ಹಾಗೂ ವಿವಿಧ ತಾಲೂಕಿನ ಪದಾಧಿಕಾರಿಗಳು ಕನ್ನಡ ಅಭಿಮಾನಿಗಳು ಭಾಗವಹಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್
