
ಬಳ್ಳಾರಿ / ಕಂಪ್ಲಿ : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನ ದುರ್ಬಳಕೆ ಹಿನ್ನೆಲೆಯಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಕಾಂಗ್ರೇಸ್ ಶಾಸಕರು, ಸಂಸದರ ಮನೆಗಳ ಮೇಲೆ ಇಡಿ ಅಧಿಕಾರಿಗಳು ಇಂದು ಬೆಳ್ಳಂ ಬೆಳಿಗ್ಗೆ ದಾಳಿ ನಡೆಸಿದ್ದು, ಕಂಪ್ಲಿ ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರ ನಿವಾಸದ ಮೇಲೆಯೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಳಗಿನಿಂದ ಸಂಜೆಯವರೆಗೂ ಶಾಸಕರ ನಿವಾಸದಲ್ಲಿ ಪರಿಶೀಲನೆ ಹಾಗೂ ವಿಚಾರಣೆ ಮುಂದುವರೆದಿತ್ತು.
ಲೋಕಸಭಾ ಚುನಾವಣೆಗೂ ಮುನ್ನ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅನುದಾನ ದುರ್ಬಳಕೆ ರಾಜ್ಯದಲ್ಲಿ ದೊಡ್ಡ ಮಟ್ಟದ ಸಂಚಲನವನ್ನು ಉಂಟು ಮಾಡಿತ್ತು. ಜೊತೆಗೆ ಅಂದಿನ ಪರಿಶಿಷ್ಟ ಪಂಗಡಗಳ ಸಚಿವರಾಗಿದ್ದ ಬಿ.ನಾಗೇಂದ್ರ ಈ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಈ ಅನುದಾನವನ್ನು ಬಳ್ಳಾರಿ ಲೋಕಸಭಾ ಚುನಾವಣೆ ಹಾಗೂ ನೆರೆಯ ಆಂದ್ರಪ್ರದೇಶದ ಚುನಾವಣೆಗೆ ಬಳಸಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.
ಅಂತೆಯೇ ಬಳ್ಳಾರಿ ಲೋಕಸಭಾ ಕ್ಷೇತ್ರದ ಕೆಲವು ಶಾಸಕರು ಹಾಗೂ ಸಂಸದರ ಮನೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಇಂದು ಬೆಳಿಗ್ಗೆ ಕಂಪ್ಲಿ ಶಾಸಕರಾದ ಜೆ.ಎನ್.ಗಣೇಶ್ ಅವರ ಕುರುಗೋಡು ನಿವಾಸಕ್ಕೆ ತೆರಳಿದ್ದ ಬೆಂಗಳೂರಿನಿಂದ ಎರಡು ವಾಹನಗಳಲ್ಲಿ ಆಗಮಿಸಿರುವ ಇ.ಡಿ ಅಧಿಕಾರಿಗಳು ಕುರುಗೋಡಿನಲ್ಲಿ ಶಾಸಕರು ಇಲ್ಲದೇ ಇರುವುದನ್ನು ಗಮನಿಸಿ ಕಂಪ್ಲಿ ನಿವಾಸಕ್ಕೆ ದಾಳಿ ಮಾಡಿದ್ದಾರೆ.
ಶಾಸಕರು ಕಂಪ್ಲಿ ನಿವಾಸದಲ್ಲಿಯೇ ಇದ್ದು, ಇ.ಡಿ ಅಧಿಕಾರಿಗಳು ಬೆಳಗಿನಿಂದ ಸಂಜೆಯವರೆಗೂ ಪರಿಶೀಲನೆ ಹಾಗೂ ವಿಚಾರಣೆ ನಡೆಸಿದ್ದಾರೆ. ಶಾಸಕರ ನಿವಾಸದ ಮುಂದೆ ಬೆಂಗಳೂರಿನಿಂದ ಆಗಮಿಸಿರುವ ಶಸ್ತಸಜ್ಜಿತ ಸಿಬ್ಬಂದಿಗಳು ಕಾವಲು ಇದ್ದರು. ಶಾಸಕರ ನಿವಾಸದ ಮನೆ ಇಡಿ ಅಧಿಕಾರಿಗಳು ದಾಳಿ ನಡೆಸಿರುವುದು ತಿಳಿಯುತ್ತಿದ್ದಂತೆಯೇ ಪಕ್ಷದ ಜನಪ್ರತಿನಿಧಿಗಳು, ಮುಖಂಡರು,ಕಾರ್ಯಕರ್ತರು ಶಾಸಕರ ಮನೆಗೆ ಆಗಮಿಸುತ್ತಿರುವುದು ಕಂಡು ಬಂತು.
ವರದಿ : ಜಿಲಾನಸಾಬ್ ಬಡಿಗೇರ್
