
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಜನರ ಹಕ್ಕುಗಳ ರಕ್ಷಣೆಗಾಗಿ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಠಾಣೆಯ ಸ್ಥಾಪನೆ – ಇದರ ಸದುಪಯೋಗ ಪಡೆಯಲು ಎಸ್ ಎಸ್ ಹೊಸಮನಿ ಮನವಿ.
ಯಾದಗಿರಿ/ ಗುರುಮಠಕಲ್: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಜನರ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರಕಾರಕ್ಕೆ ನೆರವಾಗಲು, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿ ಸಿ ಆರ್ ಇ) ವನ್ನು 33 ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದ್ದು, ಯಾದಗಿರಿ ಜಿಲ್ಲೆಗೆ ವಿಶೇಷ ಪೊಲೀಸ್ ಠಾಣೆ ಲಕ್ಷ್ಮೀ ನಗರ ಕಾಡ್ಲೂರ ಪೆಟ್ರೋಲ್ ಪಂಪ್ ಹತ್ತಿರ ಕಚೇರಿ ಪ್ರಾರಂಭವಾಗಿದ್ದು, ಇದರ ಸದುಪಯೋಗ ಪಡೆಯಲು ಇಂದು ಪಟ್ಟಣದ ಹರಿಜನವಾಡ ಬಡವಣೆಯಲ್ಲಿ ದಲಿತ ಮುಖಂಡರ ಸಭೆ ಜರುಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯಾದಗಿರಿ ಡಿ.ಸಿ.ಅರ್.ಇ ಪೊಲೀಸ್ ಠಾಣೆಯ ಶಿವಪ್ಪ ಹೊಸಮನಿ HC ಅವರು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ ಜನರ ವಿರುದ್ಧ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ದೂರು ದಾಖಲಿಸಿ, ನಿಗದಿತ ಅವಧಿಯಲ್ಲಿ ಸೂಕ್ತ ತನಿಖೆ ನಡೆಸಿ, ನ್ಯಾಯಾಲಯಗಳಿಗೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲು ಪ್ರತಿ ಜಿಲ್ಲೆಗೆ ಒಂದರಂತೆ ಹಾಗೂ ಬೆಂಗಳೂರು ನಗರಕ್ಕೆ 02 ರಂತೆ ರಾಜ್ಯದಲ್ಲಿ ಒಟ್ಟು 33 ಡಿ ಸಿ ಆರ್ಇ ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ,
ಈ ದೌರ್ಜನ್ಯ ಪ್ರಕರಣಗಳು ಅಲ್ಲದೆ, ಸುಳ್ಳು ಜಾತಿ ಸರ್ಟಿಫಿಕೇಟ್ ಪಡೆದ ಪ್ರಕರಣಗಳು, ಸರಕಾರಿ ಸೇವೆಗಳ ನೇಮಕಾತಿ ಮತ್ತು ಭಡ್ತಿಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ವಿದ್ಯಾರ್ಥಿಗಳ ಸೇರ್ಪಡೆಯಲ್ಲಿ ಮೀಸಲಾತಿ ನೀತಿ ಉಲ್ಲಂಘನೆಯ ಪ್ರಕರಣಗಳು, ಪರಿಶಿಷ್ಟರಿಗೆ ಮೀಸಲಾದ ಅನುದಾನಗಳ ದುರ್ಬಳಕೆ ಪ್ರಕರಣಗಳು, ಪರಿಶಿಷ್ಟರ ಜಮೀನುಗಳ ಅಕ್ರಮ ಮಾರಾಟ, ಅತಿಕ್ರಮಣ ಪ್ರಕರಣಗಳು ಹೀಗೆ ಹಲವು ಗಂಭೀರ ಸ್ವರೂಪದ ಅಪರಾಧಗಳ ಬಗ್ಗೆ ದೂರು ದಾಖಲಿಸಿ, ತನಿಖೆ ನಡೆಸಿ, ಸಕಾಲದಲ್ಲಿ, ಎರಡು ತಿಂಗಳ ಒಳಗೆ, ನ್ಯಾಯಾಲಯಗಳಿಗೆ ಆರೋಪ ಪಟ್ಟಿಗಳನ್ನು ಸಲ್ಲಿಸಿ, ಅಪರಾಧಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸುವಂತೆ ಕಾರ್ಯ ನಿರ್ವಹಿಸುವುದು ಈ ವಿಶೇಷ ಪೊಲೀಸ್ ಠಾಣೆಗಳ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು.
ತಿಪ್ಪಣ್ಣ ಎಚ್.ಸಿ ಅವರು ಯಾದಗಿರಿ ಜಿಲ್ಲೆಯ ವಿಶೇಷ ಪೊಲೀಸ್ ಠಾಣೆಯ ಸಹಾಯವಾಣಿ ಸಂಖ್ಯೆ: 08473 200141 ಕರೆಮಾಡಿ ತಮ್ಮ ಸಮಸ್ಯೆ ಗಳನ್ನು ತಿಳಿಸಲು ಸೂಚಿಸಿದ್ದಾರೆ.
ಸಭೆಯಲ್ಲಿ ದಲಿತ ಮುಖಂಡರಾದ ಲಾಲಪ್ಪ ತಲಾರಿ, ಅಶೋಕ್ ಅಂಬೇಡ್ಕರ್, ರವಿ ಬುರನೊಳ, ಶ್ರೀಕಾಂತ ತಲಾರಿ, ಮೋಹನ ಮುಕುಡಿ, ಅಶೋಕ್ ಲಿಕ್ಕಿ, ಅನಿಲ ಮುಕಡಿ, ರವಿ ಚಿನ್ನಗಪೊಳ್, ಆಕಾಶ, ರಾಕೇಶ್, ಬಿ ಎಸ್ ತಲಾರಿ, ನವೀನ, ಶ್ರೀನಿವಾಸ ಕಿಂದಿಂಟಿ, ನರೇಶ್ ಮುಕುಡಿ, ಅನಿಲ ಬಸಪೋಳ ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ
