ತುಂಬು ಕುಟುಂಬದ ದೊಡ್ಡಣ್ಣ
ತೋರಲಾರನು ಕಪಟದ ಬಣ್ಣ
ಕೊಟ್ಟು ಸಲಹುವನು ಶ್ರೇಷ್ಠ ಗುಣ
ಮಕ್ಕಳ ಏಳಿಗೆಯ ಗುರಿ ಪ್ರತಿ ಕ್ಷಣ.
ಬೆರಳ ಹಿಡಿದು ನಡಿಗೆ ಕಲಿಸಿದಾತ
ಹೆಗಲ ಮೇಲೊತ್ತು ಮೆರೆಸಿದಾತ
ಹಗಲಿರುಳು ನಮಗಾಗಿ ದುಡಿದಾತ
ತನ್ನೆಲ್ಲಾ ಸುಖವ ಬದಿಗೊತ್ತಿದಾತ.
ನ್ಯಾಯ, ನೀತಿಯ ದಾರಿ ತೋರಿ
ಒಳ ಅಂಧಕಾರ ಗಾಳಿಗೆ ತೂರಿ
ಕೊಡಲು ಸನ್ಮಾರ್ಗ ಬೆಳಕ ದಾರಿ
ಶ್ರಮಿಸಿದರು ತನ್ನೆಲ್ಲಾ ಶಕ್ತಿ ಮೀರಿ.
ಅಪ್ಪನೆಂಬ ಸುಂದರ ಎರಡಕ್ಷರ
ಇವನ ತ್ಯಾಗವದು ಆಕಾಶದೆತ್ತರ
ಕೊಟ್ಟನಿವ ರೀತಿ ನೀತಿ ಸಂಸ್ಕಾರ
ನಿತ್ಯ ಸ್ಮರಣೆ ಮಾಡಿ ಈ ದೇವರ.
ತೀರಿಸಲಾದೀತೇ ಇವರ ಋಣ
ಸುರಿದರೂ ಕೋಟಿಗಟ್ಟಲೆ ಹಣ
ಇವರಿತ್ತ ಭಿಕ್ಷೆ ಈ ದೇಹದ ಕಣ
ಗೌರವಿಸಿ ಸತ್ಕರಿಸಿ ಬಾಳೋಣ.
- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
(ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ,
ದೂರವಾಣಿ ಸಂಖ್ಯೆ: 9740199896.
