
ಬಳ್ಳಾರಿ / ಕಂಪ್ಲಿ : ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ಇಂದು ತಾಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ನರೇಗಾ ದಿನಾಚರಣೆ ಮತ್ತು ಕಾರ್ಯಾಗಾರ ಕಾರ್ಯಕ್ರಮ ನಡೆಯಿತು.
ಶಾಸಕ ಜೆ.ಎನ್.ಗಣೇಶ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ನಡೆಸಲಾಗುವ ಕೆಲಸಗಳು ಗ್ರಾಮದ ಜನರ ಮನಸ್ಸಲ್ಲಿ ಉಳಿಯುವಂತಿರಬೇಕು. ಗುರಿ ಸಾಧನೆಯ ಜತೆಗೆ ಗ್ರಾಮದ ಅಭಿವೃದ್ಧಿಯಲ್ಲಿ ಶಾಶ್ವತವಾಗಿರುವ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸರಕಾರ ಜಾರಿಗೆ ತಂದ ಯಾವುದೇ ಯೋಜನೆ ಯಶಸ್ವಿಯಾಗುವಲ್ಲಿ ಸಮರ್ಥ ಕಾರ್ಯಪಡೆಯ ಪಾತ್ರ ಬಹುಮುಖ್ಯ. ಸರಕಾರಿ ವ್ಯವಸ್ಥೆಯಲ್ಲಿ ಯೋಜನೆಗಳ ಯಶಸ್ಸಿಗೆ ಸರಕಾರಿ ಅಧಿಕಾರಿಗಳು, ನೌಕರರ ಜತೆಗೆ ಆಯಾ ಯೋಜನೆಯ ಸಿಬಂದಿಯ ಸಹಕಾರ ಬೇಕಾಗಿರುತ್ತದೆ, ಅದು ನಮಗೆ ಉತ್ತಮ ರೀತಿಯಲ್ಲಿ ಸಿಗುತ್ತಿದೆ ಎಂದರು.
ಕಾರ್ಯನಿರ್ವಾಹಕ ಅಧಿಕಾರಿ ಆರ್.ಕೆ. ಶ್ರೀಕುಮಾರ್ ಮಾತನಾಡಿದರು. ಕಾರ್ಮಿಕರಿಗೆ ಉದ್ಯೋಗ ಚೀಟಿ ನವೀಕರಣ, ಹೊಸ ಉದ್ಯೋಗ ಚೀಟಿ ವಿತರಣೆ, ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಮಲ್ಲನಗೌಡ ಕೆ.ಎಸ್, ಪುರಸಭೆ ಸದಸ್ಯ ಸಿ.ಆರ್.ಹನುಮಂತ, ಎಪಿಎಂಸಿ ಅಧ್ಯಕ್ಷ ಹಬೀಬ್ ರೆಹಮಾನ್, ಶಾರದಾ ದೇವಸಮುದ್ರ, ಮಾಯಮ್ಮ, ರಾಮಣಯ್ಯ ಸೇರಿದಂತೆ ತಾಪಂ, ಗ್ರಾಪಂ ಸಿಬ್ಬಂದಿಗಳು, ಕಾಯಕ ಬಂಧುಗಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್
