ಶಾಲೆಗಳು ಆರಂಭವಾಗಿವೆ ಎಲ್ಲಾ ಮಕ್ಕಳ ಪಾಲಕರು ತಂತಮ್ಮ ಮಕ್ಕಳ ಶಾಲಾ ಫೀಸನ್ನು ತುಂಬಿ ಶಾಲೆಯ ಸಮವಸ್ತ್ರಗಳನ್ನು, ಪುಸ್ತಕಗಳನ್ನು ನೋಟ್ ಪುಸ್ತಕಗಳನ್ನು ತಂದು ಕೊಟ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಮಕ್ಕಳು ಅಮ್ಮಂದಿರಿಗೆ ಗಂಟು ಬಿದ್ದು ಎಲ್ಲಾ ಪುಸ್ತಕಗಳಿಗೆ ಕವರ್ ಹಾಕಿಸಿಕೊಂಡು ಹೊಸ ಸ್ಕೂಲ್ ಬ್ಯಾಗ್, ಊಟದ ಡಬ್ಬ, ಕಂಪಾಸ್ ಬಾಕ್ಸ್ ಮತ್ತು ಅಗತ್ಯ ವಸ್ತುಗಳನ್ನು ದುಂಬಾಲು ಬಿದ್ದು ಖರೀದಿಸಿ ಸಂತಸ ಪಡುತ್ತಿದ್ದಾರೆ.
ಇಷ್ಟು ದಿನದ ರಜಾ ದಿನಗಳಲ್ಲಿ ತುಸು ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದ ಅಮ್ಮಂದಿರು ಮತ್ತೆ ತಮ್ಮ ಭಾವಂತದ ಬದುಕಿಗೆ ಸಜ್ಜಾಗುತ್ತಿದ್ದಾರೆ. ಮುಂಜಾನೆ ಎದ್ದು ಮಕ್ಕಳಿಗೆ ಬೇಕಾದ ತಿಂಡಿ ತೀರ್ಥಗಳನ್ನು, ಡಬ್ಬಕ್ಕೆ ಬೇಕಾಗುವ ಊಟವನ್ನು ತಯಾರಿಸುವ, ಮಕ್ಕಳನ್ನು ಎಬ್ಬಿಸಿ ಶಾಲೆಗೆ ಕಳುಹಿಸಲು ತಯಾರು ಮಾಡಿ ಅವರು ಶಾಲೆಯ ಬಸ್ಸು ಹತ್ತುವವರೆಗೆ ಅವರ ಹಿಂದೆ ಮುಂದೆ ಓಡಾಡಿ ಅವರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ತಮ್ಮ ಕಾಯಕಕ್ಕೆ ಮತ್ತೆ ಮರಳಿದ್ದಾರೆ. ತುಸು ಹೆಚ್ಚು ಕಮ್ಮಿ ಎಲ್ಲ ಮನೆಗಳಲ್ಲೂ ಇದೇ ಪಾಡು…ಇದೇ ಹಾಡು.
ಆದರೆ ವಿದ್ಯಾರ್ಥಿಗಳ ಬದುಕಿನ ಮುಖ್ಯವಾದ ಕಲಿಕೆಯ ಘಟ್ಟದಲ್ಲಿ ಶಾಲೆಗೆ ಮರಳಿರುವ ಮಕ್ಕಳು ಮತ್ತೆ ಓದು ಬರಹಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಇದು ಸಕಾಲ. ಕಳೆದ ವರ್ಷಗಳಲ್ಲಿ ಓದಿನಲ್ಲಿ ಆಸಕ್ತಿ ವಹಿಸದೆ ನಂತರ ಪರೀಕ್ಷೆಯಲ್ಲಿ ಸುಮಾರಾಗಿ ಬರೆದು ಕಡಿಮೆ ಅಂಕಗಳನ್ನು ಪಡೆದ ಮಕ್ಕಳು ಮತ್ತು ಮಕ್ಕಳ ಪ್ರಗತಿಯ ಕುಂಠಿತತೆಯನ್ನು ನೋಡಿ ಬೇಸರಗೊಂಡಿರುವ ಪಾಲಕರು ಮತ್ತು ಮಕ್ಕಳಿಗೆ ಎಲ್ಲವನ್ನು ಮತ್ತೆ ಹೊಸದಾಗಿ ಆರಂಭಿಸಲು ಇದು ಸಕಾಲ.
ಮನುಷ್ಯನ ಬದುಕಿನಲ್ಲಿ ಓದು ಬರಹಗಳು ಅತ್ಯವಶ್ಯಕ ಎಂಬ ಅರಿವನ್ನು ಹೊಂದಿದ್ದು ಎಲ್ಲರೂ ಓದಿನ ಕುರಿತು ಹೆಚ್ಚು ಕಾಳಜಿವಹಿಸಲು ನಮ್ಮ ಬದುಕನ್ನು ರೂಪಿಸಲು ನಮಗೆ ಶಿಕ್ಷಣ ದ ಅವಶ್ಯಕತೆ ಇದೆ ಎಂಬುದೇ ಕಾರಣ.
ಹಾಗಾದರೆ ಮಕ್ಕಳು ಓದಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮಾಡಬೇಕಾದದ್ದು ಏನು? ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರವನ್ನು ಹುಡುಕೋಣ ಬನ್ನಿ.
ಶಾಲೆಯಲ್ಲಿ ಶಿಕ್ಷಕರು ಹೇಳಿದ ಪಾಠಗಳನ್ನು ಗಮನವಿಟ್ಟು ಆಲಿಸಬೇಕು. ಅಕಸ್ಮಾತ್ ಅವರು ಹೇಳಿದ ವಿಷಯದಲ್ಲಿ ಏನಾದರೂ ಗೊಂದಲ ತೋರಿದರೆ ಪಾಠದ ಮಧ್ಯದಲ್ಲಿ ಅವರಿಗೆ ಅಡಚಣೆ ಮಾಡದೇ ಅವರು ಹೇಳುವುದು ಮುಗಿದ ಮೇಲೆ ನಿಮ್ಮ ಸಂಶಯಗಳನ್ನು ಅವರಲ್ಲಿ ಕೇಳಿಕೊಂಡು ನಿವಾರಿಸಿಕೊಳ್ಳಿ.
ಅಯ್ಯೋ ಹಾಗೆ ಪ್ರಶ್ನೆಗಳನ್ನು ಕೇಳಿದರೆ ನನ್ನನ್ನು ದಡ್ಡ ಎಂದುಕೊಳ್ಳುವುದಿಲ್ಲವೇ ಎಂದು ಭಾವಿಸುವುದು ಬೇಡ. ಕೇಳದೇ ಇದ್ದರೆ ಖಂಡಿತವಾಗಿಯೂ ವಿಷಯ ನಿಮಗೆ ಅರ್ಥವಾಗದೆ ನೀವು ದಡ್ಡರಾಗುವ ಸಂಭವ ಇರುತ್ತದೆ.
ಶಾಲೆಯಲ್ಲಿ ಅಂದಂದು ಕಲಿಸಿದ ಪಾಠಗಳನ್ನು ಅಂದಂದೇ ಮನೆಯಲ್ಲಿ ಪುನರಾವರ್ತನೆ ಮಾಡಿ. ಚಿಕ್ಕ ತರಗತಿಗಳಾದರೆ ಕೇವಲ ಒಂದು ಗಂಟೆಯ ಅವಧಿ ಮನೆ ಪಾಠಕ್ಕೆ ಸಾಕಾದರೆ ತುಸು ದೊಡ್ಡ ತರಗತಿಗೆ ಒಂದೂವರೆ ಗಂಟೆಯಿಂದ 2 ಗಂಟೆ ಸಾಕು. ಅದರಲ್ಲೂ ಮೊದಲ 25 ನಿಮಿಷ ಲಕ್ಷ್ಯ ಕೊಟ್ಟು ಓದಿನಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ನಂತರ ಐದು ನಿಮಿಷದ ವಿರಾಮ ತೆಗೆದುಕೊಳ್ಳಬೇಕು. ಮತ್ತೆ 25 ನಿಮಿಷ ಓದಿ ಮತ್ತೆ ಐದು ನಿಮಿಷದ ವಿರಾಮ ತೆಗೆದುಕೊಳ್ಳಬೇಕು.
ನಿಮಗೆ ಇಷ್ಟವಾದ ವಿಷಯವನ್ನು ಮೊದಲು ಓದಲು ಆರಂಭಿಸಿ. ಇಷ್ಟವಾದ ವಿಷಯದ ಓದಿನ ಆಸಕ್ತಿ ನಿಮಗೆ ಮುಂದೆ ಕ್ಲಿಷ್ಟವಾದ ವಿಷಯಗಳನ್ನು ಓದಲು ಸಹಾಯಕವಾಗುತ್ತದೆ.
ಕ್ಲಿಷ್ಟವಾದ ವಿಷಯಗಳನ್ನು ಶಿಕ್ಷಕರ ಬಳಿ ಮತ್ತೆ ಮತ್ತೆ ಕೇಳಿ ಅರಿತುಕೊಂಡು ಅವುಗಳನ್ನು ಮನನ ಮಾಡಿಕೊಳ್ಳಬೇಕು. ದೈನಂದಿನ ಅಭ್ಯಾಸದಿಂದ ಎಂತಹದ್ದೇ ಕ್ಲಿಷ್ಟ ವಿಷಯಗಳು ಸರಳವೆನಿಸತೊಡಗುತ್ತವೆ.
ಎಷ್ಟು ಸಮಯ ಓದಿದೆ ಎಂಬುದಕ್ಕಿಂತ ಎಷ್ಟು ವಿಷಯವನ್ನು ಅರ್ಥ ಮಾಡಿಕೊಂಡೆ ಎಂಬುದು ಬಹಳ ಮುಖ್ಯ. ಸಾಕಷ್ಟು ಸಮಯ ಕುಳಿತು ಓದುವುದಕ್ಕಿಂತ ಗಮನವಿಟ್ಟು ಓದುವುದು ಅತ್ಯವಶ್ಯಕ. ಓದುವಾಗ ಅತ್ತಿತ್ತ ಕದಲದಂತೆ ಏಕಾಗ್ರ ಚಿತ್ತರಾಗಿ ಓದಬೇಕು ಸಾಧ್ಯವಾದಷ್ಟು ಬೆಳಗಿನ ಜಾವದಲ್ಲಿ ನೀರವ ವಾತಾವರಣದಲ್ಲಿ ಓದುವುದು ಒಳ್ಳೆಯದು.
ಕೇವಲ ಓದಿದರಷ್ಟೇ ಸಾಲದು… ಓದಿದ್ದನ್ನು ಮನನ ಮಾಡಿಕೊಳ್ಳಬೇಕು. ಪಠಣ, ಮನನ ಮತ್ತು ಪುನರ್ ಮನನಗಳ ಮೂಲಕ ವಿಷಯವನ್ನು ಅರಿತುಕೊಂಡು ಅಭ್ಯಸಿಸಬೇಕು. ಬಾಯಿ ಪಾಠ ಮಾಡಿದ ವಿಷಯ ಮರೆತು ಹೋಗಬಹುದು… ಮಂತ್ರಗಳು, ಹಾಡುಗಳು, ಮಗ್ಗಿಗಳು ಮಾತ್ರ ಬಾಯಿ ಪಾಠ ಮಾಡಲು ಸೂಕ್ತ. ಗಣಿತದಂತಹ ವಿಷಯಗಳನ್ನು ಪದೇಪದೇ ಮಾಡುವುದರಿಂದಲೇ ಕಲಿಯಲು ಸಾಧ್ಯ.
ಶಾಲೆಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಇಡುವ ಕಿರುಪರೀಕ್ಷೆಗೆ ಮಕ್ಕಳನ್ನು ಸಿದ್ಧಪಡಿಸುವುದಕ್ಕಿಂತ ಪ್ರತಿದಿನವೂ ಅವರು ಓದು ಬರಹಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು ಮಕ್ಕಳಿಗೆ ಅರ್ಥವಾಗದ ವಿಷಯಗಳನ್ನು ಅವರೊಂದಿಗೆ ಕುಳಿತುಕೊಂಡು ಚರ್ಚಿಸಿ ನಿಮಗೆ ತಿಳಿದಿದ್ದನ್ನು ಹೇಳಿಕೊಟ್ಟಾಗ ಮಕ್ಕಳು ಪಾಲಕರ ಸಹಯೋಗದಲ್ಲಿ ಇನ್ನಷ್ಟು ಅರಳಬಹುದು.
ಪಠ್ಯ ಚಟುವಟಿಕೆಗಳಿಗೆ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಪಾಠ ಪ್ರವಚನಗಳ ಜೊತೆ ಜೊತೆಗೆ ಆಟೋಟಗಳು ಮುಖ್ಯ. ”ಅ ಸೌಂಡ್ ಮೈಂಡ್ ಇನ್ ಎ ಸೌಂಡ್ ಬಾಡಿ” ಎಂಬಂತೆ ಮಕ್ಕಳು ದೈಹಿಕವಾಗಿ ಆಟೋಟದಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಸದೃಢತೆ ಉಂಟಾಗುತ್ತದೆ. ಆಟೋಟಗಳು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ, ಹೊಂದಾಣಿಕೆ, ಛಲ, ಶ್ರದ್ಧೆ
ಮತ್ತು ಸ್ಪೂರ್ತಿಯನ್ನು ನೀಡುತ್ತವೆ. ಆಟವಾಡುವ ಮಕ್ಕಳು ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಹೊಂದಿದ್ದು ಆರೋಗ್ಯವಂತರಾಗಿರುತ್ತಾರೆ, ಆದ್ದರಿಂದ ಮಕ್ಕಳನ್ನು ಸಾಧ್ಯವಾದಷ್ಟು ಹೊರಾಂಗಣ ಕ್ರೀಡೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕು.
ಚಿಕ್ಕಂದಿನಿಂದಲೇ ಮಕ್ಕಳನ್ನು ಹಾಡು, ನೃತ್ಯ, ರಂಗಕಲೆ, ನಾಟಕ, ದೊಡ್ಡಾಟ, ಬಯಲಾಟ ಮುಂತಾದ ಪ್ರದರ್ಶನ ಕಲೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು. ಭಾಷಣ, ಪ್ರಬಂಧ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸಲು ಅವಕಾಶ ಮಾಡಿಕೊಡಬೇಕು. ಚದುರಂಗ, ಕೇರಂ, ಚೌಕಬಾರದಂತಹ ಆಟಗಳನ್ನು ಕೂಡಾ ಕಲಿಸಬೇಕು. ನಮ್ಮ ಗ್ರಾಮೀಣ ಭಾಗದಲ್ಲಿ ನಡೆಯುವ ಹಬ್ಬ,ಹುಣ್ಣಿವೆ, ಜಾತ್ರೆ ಕರಗಗಳ ಕುರಿತು ಮಾಹಿತಿ ನೀಡಬೇಕು ಮತ್ತು ಪ್ರತ್ಯಕ್ಷವಾಗಿ ಕರೆದೊಯ್ದು ತೋರಿಸಬೇಕು. ಈ ರೀತಿ ಮಾಡುವುದರಿಂದ ಮಕ್ಕಳಿಗೆ ವಿವಿಧ ವಿಷಯಗಳ ಜ್ಞಾನ ದೊರೆಯುತ್ತದೆ. ಧೈರ್ಯ, ಸಾಹಸ ಪ್ರವೃತ್ತಿಗಳು ಮಕ್ಕಳಲ್ಲಿ ಮನೆ ಮಾಡುತ್ತವೆ.
ಇದರ ಜೊತೆಗೆ ಪಾಲಕರು ಮತ್ತೊಂದು ಕೆಲಸವನ್ನು ಮಾಡಬೇಕಾಗುತ್ತದೆ. ರಜೆ ಬಿಟ್ಟಾಗ ಮಕ್ಕಳನ್ನು ಕರೆದುಕೊಂಡು ಸ್ನೇಹಿತರ ಸಂಬಂಧಿಕರ ಮನೆಯ ಕಾರ್ಯಕ್ರಮಗಳಿಗೆ ಹೋಗುವುದು ಸರಿಯಷ್ಟೇ ಆದರೆ ಎಷ್ಟೋ ಬಾರಿ ರಜೆ ಇಲ್ಲದೆ ಹೋದಾಗಲೂ ಕೂಡಾ ಮಕ್ಕಳಿಗೆ ರಜೆ ಹಾಕಿಸಿ ಎಂಟೆಂಟು ದಿನ ಊರಿಗೆ ಹೋಗುವ ಪಾಲಕರು ನಮ್ಮಲ್ಲಿ ಇದ್ದಾರೆ. ಹಾಗೆ ತಾವು ಮಕ್ಕಳನ್ನು ಕರೆದುಕೊಂಡು ಹೋಗಿ ಬಂದ ನಂತರ ಈಗಾಗಲೇ ತಮ್ಮ ಪಾಠಗಳು ಮುಗಿದು ಹೋಗಿದ್ದು ಅವುಗಳನ್ನು ಮರಳಿ ಶಿಕ್ಷಕರ ಬಳಿ ಕೇಳುವ ಧೈರ್ಯ ಇಲ್ಲದೆ ಮಕ್ಕಳು ಹಿಂಜರಿದರೆ ಶಿಕ್ಷಕರಿಗೂ ಇವರು ಪದೇಪದೇ ರಜೆ ಹಾಕಿದ್ದರ ಕುರಿತು ಕೊಂಚ ಆಕ್ಷೇಪಣೆ ಇದ್ದೆ ಇರುತ್ತದೆ. ಇದು ಪಾಲಕರು, ಶಿಕ್ಷಕರು ಮತ್ತು ಮಕ್ಕಳ ನಡುವಿನ ಶೀತಲ ಸಮರಕ್ಕೆ ಕಾರಣವಾಗುತ್ತದೆ.
ರಜೆ ದಿನಗಳಲ್ಲಾದರೆ ಪರವಾಗಿಲ್ಲ ಆದರೆ ಶಾಲೆ ಇದ್ದಾಗ ಸಾಧ್ಯವಾದಷ್ಟು ಮಕ್ಕಳನ್ನು ಸಮಾರಂಭಗಳಿಗೆ ಕರೆದೊಯ್ಯದೆ ಇರುವುದು ಒಳ್ಳೆಯದು.
ಇನ್ನೊಂದು ಮುಖ್ಯವಾದ ವಿಷಯ ಎಂದರೆ ಪಾಲಕರು
ಶಾಲಾ ವರ್ಷದ ಆರಂಭದ ದಿನಗಳಲ್ಲಿ ಮಕ್ಕಳ ಕುರಿತು ಅಷ್ಟೇನೂ ಗಮನಹರಿಸುವುದಿಲ್ಲ… ಆದರೆ ಪರೀಕ್ಷೆಯ ಸಮಯದಲ್ಲಿ ಮೈ ಮೇಲೆ ದೆವ್ವ ಬಂದವರಂತೆ ಪರೀಕ್ಷೆ ಬಂತು ಓದಿಕೋ, ಪರೀಕ್ಷೆ ಬಂತು ಬರೆದು ತೆಗೆ ಎಂದು ಬೆನ್ನು ಬೀಳುತ್ತಾರೆ. ಆಟ ಆಡುವುದನ್ನು ನಿಷೇಧಿಸುತ್ತಾರೆ. ಮನರಂಜನೆಯನ್ನು ಇದು ಖಂಡಿತ ತಪ್ಪು.
ಪದೇಪದೇ ಮಕ್ಕಳನ್ನು ಶಾಲೆ ಬಿಡಿಸಿ ಕಾರ್ಯಕ್ರಮಗಳಿಗೆ ಸಮಾರಂಭಗಳಿಗೆ ಊರಿಗೆ ಕರೆದೊಯ್ಯುವುದರಿಂದ ಮಕ್ಕಳು ವಿದ್ಯಾಭ್ಯಾಸದಿಂದ ವಿಮುಖರಾಗುತ್ತಾರೆ. ಇದು ಪಾಲಕರ ಗಮನದಲ್ಲಿರಲಿ.
ಇನ್ನು ಮಕ್ಕಳು ಪದೇಪದೇ ಹೊಟ್ಟೆ ನೋವು ತಲೆ ನೋವು ತಲೆನೋವು ನೆಪ ಹೇಳಿ ಶಾಲೆ ತಪ್ಪಿಸುತ್ತಿದ್ದರೆ ಸೂಕ್ಷ್ಮವಾಗಿ ಮಕ್ಕಳ ವರ್ತನೆಯಲ್ಲಿನ ಬದಲಾವಣೆಗಳನ್ನು ಗಮನಿಸಿ. ಕೆಲ ಬಾರಿ ಮಕ್ಕಳು ಹೋಂವರ್ಕ್ ಮಾಡದೆ ಇದ್ದಾಗ ಶಿಕ್ಷಕರು ತನ್ನನ್ನು ಗದರಿಸಬಹುದು ಎಂಬ ಹೆದರಿಕೆಯಿಂದಲೂ ಹೀಗೆ ನೆಪ ಹೇಳಬಹುದು.
ಮತ್ತೆ ಕೆಲಬಾರಿ ಮಕ್ಕಳಿಗೆ ನಿಜವಾಗಿಯೂ ತೊಂದರೆ ಇದ್ದರೆ ಒಳ್ಳೆಯ ತಜ್ಞ ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಕೊಡಿಸಿ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಆಗಾಗ ದೈಹಿಕ ತೊಂದರೆಗಳಿಗೆ ಸಿಲುಕುತ್ತಾರೆ. ಉತ್ತಮ ಮನೋದೈಹಿಕ ಆರೋಗ್ಯವನ್ನು ಪಡೆಯಲು
ಒಳ್ಳೆಯ ಸಾತ್ವಿಕ ಮತ್ತು ಪೋಷಣ ಯುಕ್ತ ಆಹಾರವನ್ನು ಮಕ್ಕಳಿಗೆ ಸೇವಿಸಲು ರೂಢಿ ಮಾಡಿಸಬೇಕು. ಒಳ್ಳೆಯ ಆರೋಗ್ಯ, ಆಹಾರ ಮತ್ತು ವಿಹಾರಗಳೇ ಮಕ್ಕಳಿಗೆ ಉತ್ತಮ ಮತ್ತು ಆರೋಗ್ಯದ ಬದುಕಿಗೆ ದಾರಿ ಎಂಬುದನ್ನು ಅವರಿಗೆ ಅರಿವು ಮೂಡಿಸಿ.
ತ್ರಿಕೋನದ ಮೂರು ಭುಜಗಳಂತೆ ಪಾಲಕರು, ಮಕ್ಕಳು ಮತ್ತು ಶಿಕ್ಷಕರು ಮಗುವಿನ ಶೈಕ್ಷಣಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಯಾವುದೇ ಒಬ್ಬರ ಕಾಣಿಕೆ ಅಲ್ಪವಾದರೂ ಹೊಡೆತ ಬೀಳುವುದು ಮಗುವಿನ ಶೈಕ್ಷಣಿಕ ಭವಿಷ್ಯಕ್ಕೆ ಎಂಬುದನ್ನು ಅರಿವಿನಲ್ಲಿಟ್ಟುಕೊಂಡು ಮಕ್ಕಳ ಶೈಕ್ಷಣಿಕ ಜೀವನಕ್ಕೆ ಭದ್ರ ಬುನಾದಿಯನ್ನು ಹಾಕೋಣ.
- ವೀಣಾ ಹೇಮಂತಗೌಡ ಪಾಟೀಲ್, ಮುಂಡರಗಿ ಗದಗ
