
ಪುಸ್ತಕದ ಹೆಸರು : “ಬಾಲಹೆಜ್ಜೆ ಭಾವನೆಗಳ ಗೆಜ್ಜೆ”
ಕವಿಯತ್ರಿ : ಶ್ರೀಮತಿ ಶಿವಮ್ಮ ಗುರುಸ್ಥಲ ಮಠ.
ಪ್ರಕಟವಾದ ವರ್ಷ :2024.
ಬೆಲೆ.. 120 ರೂ.
ಪ್ರಕಾಶನ.. ಅಕ್ಷರ ನಾದ ಪಬ್ಲಿಕೇಷನ್ ಬೆಂಗಳೂರು.
ಕವನ ಬರೆಯುವುದು ಸುಲಭ, ಆದರೆ ಮಕ್ಕಳ ಕವನ ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ, ಆದರೂ ಕೆಲವರು ಶಿಶು ಸಾಹಿತ್ಯ, ಮಕ್ಕಳ ಸಾಹಿತ್ಯ ವನ್ನು ಬರೆಯುವ ಪ್ರಯತ್ನದಲ್ಲಿದ್ದು ಕವನ ಸಂಕಲನಗಳನ್ನು ಪ್ರಕಟಿಸುವ ಹುಮ್ಮಸ್ಸಿನಲ್ಲಿದ್ದು
ಅಂತಹ ಪ್ರಯೋಗಗಳಲ್ಲಿ ಯಶಸ್ವಿಯೂ ಆಗಿರುವುದು
ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಈ ಹಿನ್ನಲೆಯಲ್ಲಿ ಕೊಪ್ಪಳದವರೇ ಆದ, ವೃತ್ತಿಯಿಂದ ಶಿಕ್ಷಕಿಯೂ, ಪ್ರವೃತ್ತಿಯಿಂದ ಕವಿಯತ್ರಿಯೂ
ಆಗಿರುವ ಶ್ರೀಮತಿ ಶಿವಮ್ಮ ಗುರುಸ್ಥಲ ಮಠ ಅವರ ಪ್ರಪ್ರಥಮ ಶಿಶುಗೀತೆಗಳ ಸಂಕಲನ, “ಬಾಲ ಹೆಜ್ಜೆ ಭಾವನೆಗಳ ಗೆಜ್ಜೆ,” ಕೃತಿಯ ಅವಲೋಕನ ಮಾಡುವ ಪ್ರಯತ್ನವೇ ಈ ಬರಹ.
ಮೂಲತಃ ಶಿಕ್ಷಕ ವೃತ್ತಿಯಲ್ಲಿರುವ ಶಿವಮ್ಮ ನವರ
ಈ ಚೊಚ್ಚಿಲ ಶಿಶು ಗೀತೆಗಳ ಸಂಕಲನದಲ್ಲಿ ಒಟ್ಟು ನಲವತ್ತಾರು (46) ಕವನಗಳಿವೆ.
ಪ್ರತಿ ನಿತ್ಯ ಮಕ್ಕಳ ಒಡನಾಟದಲ್ಲಿರುವ ಶಿವಮ್ಮ ಟೀಚರ್, ಮಕ್ಕಳ ಮನ ಮುಟ್ಟುವ, ಸಹೃದಯರ ಹೃದಯ ತಟ್ಟುವ ಕವಿತೆಗಳನ್ನು ಬರೆದಿದ್ದಾರೆ.ಅಂತಹ ಹಲವಾರು ಕವಿತೆಗಳ
ನ್ನಿಲ್ಲಿ ಹೆಸರಿಸಬಹುದು.
ಉದಾಹರಣೆಗೆ, ಗುರುವಿಗೊಂದು ಅರಿಕೆ,
ನನ್ನ ಶಾಲೆ, ಹೂವೇ ಹೂವೇ,
ಮಂಗಣ್ಣ, ನವಿಲೇ,
ಕಾಮನ ಬಿಲ್ಲು, ಬಾಲ ಗೋಪಾಲ, ಚಂದಿರ, ಆಟ,
ಆಚರಣೆ, ಹೀಗೇ ಹೆಸರಿಸುತ್ತಾ
ಹೋದರೆ ಪುಟ ತುಂಬಿ ಹೋಗುತ್ತದೆ.
ಶಿವಮ್ಮ ಟೀಚರ್ ಬರೆದ ಈ ಸಂಕಲನದ ಕೆಲವು ಶಿಶುಗೀತೆಗಳ ಸಾಲುಗಳನ್ನು ಗಮನಿಸೋಣ.
‘ ಮಕ್ಕಳ ರಿಕ್ತ ಮನಸಿನಲಿ
ಬಿತ್ತಿ ಬೆಳೆಯೋ ನೀನು
ಸದಾಚಾರ ಸದ್ವಿಚಾರ
ಭಾವನೆಗಳ ಸಾಕಾರ,
ಆಗದಿರಲೆಂದೆಂದೂ ಮಗು ನಿರಾಕಾರ.
ನೀನಾಗು ಮನವೇ
ಕರ್ತವ್ಯ ಪಾಲಕ
ನಿನಗಾಗುವುದು ಲೋಕ
ಮೂಕ ಪ್ರೇಕ್ಷಕ,
ಹೊರಹೊಮ್ಮಲಿ
ಮಗುವಿನ ಆದರ್ಶ ಜಾತಕ
ನಿನಗಾಗಿ, ನನಗಾಗಿ, ಬೇರೆಯವರಿಗಾಗಿ, ಬದಲಾಗು,
ಉತ್ತಮ ಗುರುವಾಗಿ,
ಜಗ ಬೆಳಗಲಿ ನಿತ್ಯ
ಪ್ರಕಾಶ ಪ್ರಭೆಯಾಗಿ’ ಎಂದು
ಗುರುವಿಗೊಂದು ಅರಿಕೆ ಎಂಬ ಕವಿತೆಯಲ್ಲಿ ಗುರು ಹೇಗಿರಬೇಕೆಂಬುದರ ಬಗ್ಗೆ
ಬಹಳ ಸರಳ ಶಬ್ದಗಳಲ್ಲಿ ಸಹಜವಾಗಿ ಅಭಿವ್ಯಕ್ತಿಸಿದ್ದಾರೆ.
ಶಾಲೆಯ ಕುರಿತು ಅವರು ನನ್ನ ಶಾಲೆ, ಎನ್ನುವ ಕವನದಲ್ಲಿ
ಹೀಗೆ ಹೇಳುತ್ತಾರೆ.
“ನನ್ನ ಶಾಲೆ ಸುಂದರ
ಅಂದ, ಚಂದ, ಸುಮಧುರ
ಗೋಡೆ ಬರಹ,ಜ್ಞಾನದ ಕಡಲು,
ನಲಿ ಕಲಿ ನಲಿ ಕಲಿ
ಕಲಿಕೆಯ ಹೊನಲು
ನಿಸರ್ಗದ ಪುಟ್ಟ ಆಕಾರವಿದೆಯಲ್ಲಿ,
ತರ ತರದ ಹೂ ಮರ ಬಳ್ಳಿ, ಖಗಗಳಿಗೆ,
ಉಂಟು ನೀರು ನೆರಳು ಇಲ್ಲಿ,”
ಮಕ್ಕಳಿಗೆ ಸಂತೋಷ ಪರಿಸರದಲ್ಲಿ.
ನಿತ್ಯವೂ ಸಾಗಿದೆ
ಕಾಯಕದಲ್ಲಿ ಹೊಸತನ
ಶಾಲೆಯಲ್ಲಿ ಬೋಧನೆ
ಕಲಿಕೆಯ ಸಾಧನ. ” ಎಂದು ಹೇಳಿರುವಲ್ಲಿ ಶಾಲೆಯ ಪರಿಸರ ದ ಚಿತ್ರಣ ಸಹಜವಾಗಿ ಮಕ್ಕಳಿಗೆ ಆನಂದ ನೀಡುತ್ತದೆ.
ಹೂವೇ ಹೂವೇ, ಎಂಬ ಕವಿತೆಯ ಕೆಲವು ಸಾಲುಗಳು ಹೀಗಿವೆ.
” ಹೂವೇ ಹೂವೇ
ನೀನು ಯಾವ ಹೂ?
ಮಗುವೇ ಮಗುವೇ
ನಾನು ಹೊನ್ನಂಬರ
ಹೂವೇ ಹೂವೇ
ನೀನೆಲ್ಲಿ ಇರುವೆ?
ಮಗುವೇ ಮಗುವೇ
ನಾನು ಎಲ್ಲ ಕಡೆ ಇರುವೆ.
ಹೂವೇ ಹೂವೇ ನಿನ್ನ
ಊಟ ತಿಂಡಿ ಏನು
ಮಗುವೇ ಮಗುವೇ
ಬಾನಿನ ಬಿಸಿಲೇ ಎಲ್ಲ.”….
ಈ ರೀತಿಯ ಪದಬಳಕೆ, ನಿಜಕ್ಕೂ ಮಕ್ಕಳ ಮನಸ್ಸಿಗೆ
ಹಿಡಿಸುತ್ತದೆ, ಹೂವಿನೊಂದಿಗಿನ ಮಗುವಿನ ಮುಗ್ಧ ಸಂಭಾಷಣೆ, ಸೊಗಸಾಗಿ ಮೂಡಿಬಂದಿದೆ.
ಕಾಮನ ಬಿಲ್ಲು, ಕುರಿತಾದ ಕವನವೂ ಸಹ ಮಕ್ಕಳ ಮನಸಿಗೆ ಮುದ ನೀಡುವಲ್ಲಿ
ಯಶಸ್ವಿಯಾಗಿದೆ. ಈ ಕವಿತೆಯಲ್ಲಿ…
ಕಾಮನ ಬಿಲ್ಲೆ,
ನೀನಿರುವೆ ಅಷ್ಟು ದೂರ,
ನಿನ್ನಲ್ಲಿರುವ ಬಣ್ಣ ಗಳೆಷ್ಟು
ಎಣಿಸಿ ಹೇಳು ಬಾರ.
ಕಟ್ಟಿದ ಕಮಾನಿನಂತೆ
ನಿನ್ನ ಆಕಾರ,
ನೀನೇ ನಮ್ಮ ರಾಜಕುಮಾರ
ಏಕೆ ಅಲ್ಲಿ ಮೇಲಿರುವೆ,
ಇಳಿದು ಮುಖವ ತೋರ….
ಕವನ ಮುಂದುವರಿಯುತ್ತ
ಕಾಮನ ಬಿಲ್ಲು ಕಣ್ಮರೆ ಯಾದಾಗ ನಿನ್ನ ನು ಹುಡುಕಲು ಬರಲೇನು?
ಎಂದು ಮುಗ್ಧವಾಗಿ ಕೇಳುವ ಮಕ್ಕಳ ಪ್ರಶ್ನೆಗೆ ಕಾಮನ ಬಿಲ್ಲು ಉತ್ತರ ನೀಡದು, ಎಂಬುದು
ಆ ಮಗುವಿಗೆ ಹೇಗೆ ತಿಳಿದೀತು!? ಹೀಗೆ ಕವಿತೆಗಳು
ಸರಾಗವಾಗಿ ಓದಿಸಿ ಕೊಂಡು ಹೋಗುವುದರಿಂದ, ಸಾಹಿತ್ಯ ಪ್ರಿಯರಿಗೂ, ಮುಗ್ಧ ಮನಸಿನ ಮಕ್ಕಳಿಗೂ ಆನಂದ ನೀಡುತ್ತವೆ.
ಈ ಸಂಕಲನದಲ್ಲಿರುವ ಬಹುತೇಕ ಕವಿತೆಗಳು ಮಕ್ಕಳ ಮನಸ್ಸಿಗೆ ಮುದ ನೀಡುತ್ತವೆ, ಎನ್ನವುದಕ್ಕೆ, ಜಿಂಕೆ ಮರಿ,ಮಂಗಣ್ಣ, ನೀರು, ಸೂರ್ಯ, ಬಣ್ಣದ ಗಿಳಿ, ನಿಸರ್ಗ, ಮುಂತಾದ ಕವಿತೆಗಳು, ಮುದ್ದು ಮಕ್ಕಳ
ಮನಸ್ಥಿತಿ ಗೆ ಅನುಗುಣವಾಗಿ
ರಚನೆಯಾಗಿರುವುದರಿಂದ
ಈ “ಬಾಲ ಹೆಜ್ಜೆ, ಭಾವನೆಗಳ ಗೆಜ್ಜೆ” ಸಾಹಿತ್ಯ ಕ್ಷೇತ್ರ ದಲ್ಲಿ ಭರವಸೆಯ ನ್ನು ಮೂಡಿಸುವಲ್ಲಿ ಸಫಲವಾಗಿದೆ,
ಎಂದು ಆಶಿಸುತ್ತಾ ನನ್ನ ಪುಸ್ತಕಾವಲೋಕನ ಬರಹಕ್ಕೆ
ವಿರಾಮ ನೀಡುವೆ.
- ಶಿವಪ್ರಸಾದ್ ಹಾದಿಮನಿ, ಕನ್ನಡ ಉಪನ್ಯಾಸಕರು.
ಸರರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳ. ಮೊಬೈಲ್ ಸಂಖ್ಯೆ.
7996790189.
