ಬಳ್ಳಾರಿ/ ಕಂಪ್ಲಿ : ಅಂಬೇಡ್ಕರ್ ನೀಡಿದ ಸಂವಿಧಾನದ ಆಶಯದಂತೆ ಒಳ್ಳೆಯ ಭವಿಷ್ಯ ಕಟ್ಟಿಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ತಾಲೂಕಿನ ಸಣಾಪುರ ಗ್ರಾಮದಲ್ಲಿ ಗುರುವಾರ ಅಂಬೇಡ್ಕರ್ ಸಂಘದಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೂತನ ಪುತ್ಥಳಿ ಅನಾವರಣಗೊಳಿಸಿದ ನಂತರ ವೇದಿಕೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದಿಂದ ಸಮಾಜದ ಬದಲಾವಣೆ ಸಾಧ್ಯ, ಅಂಬೇಡ್ಕರ್ ಅವರ ಕನಸಿನಂತೆ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಮುಂದಿನ ಗುರಿಯೊಂದಿಗೆ ಸಾಧನೆ ಮಾಡಬೇಕು. ಸಂವಿಧಾನದಿಂದ ಸಾಕಷ್ಟು ಹಕ್ಕುಗಳನ್ನು ಪಡೆಯಲಾಗುತ್ತಿದೆ. ಮೂಢನಂಬಿಕೆ ಬಿಟ್ಟು, ಆರ್ಥಿಕವಾಗಿ ಸಬಲರಾಗಬೇಕು. ಅಂಬೇಡ್ಕರ್ ಅವರ ತತ್ವಸಿದ್ದಾಂತಗಳು ಮತ್ತು ಚಿರಿತ್ರೆಗಳನ್ನು ಜ್ಞಾನವನ್ನು ಮಕ್ಕಳಲ್ಲಿ ಮೂಡಿಸಬೇಕು. ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು ಎಂದರು.
ಎಮ್ಮಿಗನೂರು ಪಂಪಾಪತಿ ಅವರು ಉಪನ್ಯಾಸ ನೀಡಿದರು. ಮುಖಂಡ ಮರಿಸ್ಚಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ತದ ನಂತರ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷ ರಮಣಯ್ಯ, ಕಂಪ್ಲಿ ತಾಲೂಕು ವ್ಯವಸಾಯ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕೆ.ಭಾಸ್ಕರ್, ಮುಖಂಡರಾದ ಎ.ಮಾನಯ್ಯ, ಪಿ.ಮೂಕಯ್ಯಸ್ವಾಮಿ, ವೆಂಕಟರಾಮರಾಜು, ಶರಣಗೌಡ, ಸಿ.ಆರ್. ಹನುಮಂತ, ಕೆ.ಷಣ್ಮುಕಪ್ಪ, ಜಿ.ರಾಮಣ್ಣ, ವೀರಾಂಜಿನೀಯಲು, ಹನುಮಂತಪ್ಪ, ಎನ್.ಗಂಗಣ್ಣ, ಹೆಚ್.ಗುಂಡಪ್ಪ, ಮರಿಯಪ್ಪ, ಪಕ್ಕೀರಪ್ಪ, ಆರ್.ಎಂ.ರಾಮಯ್ಯ, ಅಂಬೇಡ್ಕರ್ ಸಂಘದ ಎಸ್.ರಾಮು, ವಿಜಯಕುಮಾರ, ವೆಂಕಟೇಶ, ದೇವಪುತ್ರ, ಹುಸೇನಿ, ರವಿ, ಲೋಕೇಶ, ಮಂಜು, ಪಂಪಾಪತಿ, ಮಲ್ಲೇಶ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















