ರಾಯಚೂರು/ ಸಿಂಧನೂರು:
ಇಂದಿನ ವಿದ್ಯಾರ್ಥಿ ಮತ್ತು ಯುವಕರಿಗೆ ಯೋಗ ಅತ್ಯಂತ ಮಹತ್ವವಾಗಿದ್ದು ಯೋಗದಿಂದ ಮಾನಸಿಕ ಮತ್ತು ದೈಹಿಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಯೋಗಪಟು ಹಾಗೂ ಮುಳ್ಳೂರು (ಯು.) ಶಾಲೆಯ ಶಿಕ್ಷಕರಾದ ತಿಪ್ಪಣ್ಣ ನೈನಾಪೂರ ಹೇಳಿದರು.
ಅವರು ತಾಲೂಕಿನ ಕಲಮಂಗಿ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ಕಲಮಂಗಿ, ಶ್ರೀ ಚೆನ್ನಮಲ್ಲಿಕಾರ್ಜುನ ಗ್ರಾಮಾಭಿವೃದ್ಧಿ ಸಮಿತಿ ಹಾಗೂ ಸ್ನೇಹ ಸಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಅಂತರಾಷ್ಟ್ರೀಯ ಯೋಗ ದಿನಾಚರಣೆ’ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿ ಮಾತನಾಡುತ್ತಾ, ಯೋಗದಿಂದ ಅನೇಕ ಲಾಭಗಳಿವೆ ಇಂದು ಇಡೀ ಜಗತ್ತು ಇದನ್ನು ಅರ್ಥ ಮಾಡಿಕೊಂಡಿದೆ. ವಿದ್ಯಾರ್ಥಿ-ಯುವಕರು ನಿತ್ಯವೂ ಯೋಗಭ್ಯಾಸಗಳನ್ನು ಮಾಡುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗುತ್ತಾರೆ. ದಿನಂಪ್ರತಿ ನಿತ್ಯ ಕರ್ಮಗಳ ಜೊತೆಗೆ ಯೋಗ, ಪ್ರಾಣಾಯಾಮ ಅಭ್ಯಾಸ ಮಾಡುವ ಮೂಲಕ ನಿಮ್ಮ ಮನಸ್ಸನ್ನು ಶುದ್ಧಿಗೊಳಿಸಿಕೊಂಡು ಹತೋಟಿಯಲ್ಲಿ ಇಟ್ಟುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
2015 ರಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸುವ ಕುರಿತು ವಿಷಯವನ್ನು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ವರ್ಷ ಜೂನ್-21ರಂದು ದಿನಾಚರಣೆಯನ್ನು ಆಚರಣೆಗೆ ತರಲಾಗಿದೆ. ವೇದಗಳ ಕಾಲದಿಂದಲೂ ಇದ್ದ ಯೋಗ ಶಾಸ್ತçವನ್ನು ಪತಂಜಲಿ ಮುನಿಗಳು ಯೋಗ ಸೂತ್ರಗಳ ಮೂಲಕ ಪರಿಚಯಿಸಿದರು ಎಂದು ಮುಖ್ಯಗುರು ಮಲ್ಲಪ್ಪ ಬಾದರ್ಲಿ ಹೇಳಿದರು.
ಕನ್ನಡ ಭಾಷಾ ಶಿಕ್ಷಕ ರವಿಚಂದ್ರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಯೋಗದಿಂದ ಅನೇಕ ಪ್ರಯೋಜನಗಳಿದ್ದು ವಿದ್ಯಾರ್ಥಿಗಳು ನಿತ್ಯವೂ ರೂಢಿ ಮಾಡುವುದರಿಂದ ಆರೋಗ್ಯದ ಜೊತೆಗೆ ಏಕಾಗ್ರತೆಯನ್ನು ಪಡೆದುಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಶ್ರೀ ಚನ್ನಮ್ಮಲ್ಲಿಕಾರ್ಜುನ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದಯಾನಂದ ಸ್ವಾಮಿ ಹಿರಮಠ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ದೇವಮ್ಮ ನಾಗಪ್ಪ, ಗ್ರಾಮದ ಹಿರಿಯರಾದ ಶರಣೆಗೌಡ ಹಳೆಮನೆ, ಶರಣೆಗೌಡ ಪೋಲಿಸ ಪಾಟೀಲ, ಸ್ನೇಹ ಸಿರಿ ಟ್ರಸ್ಟಿನ ಉಪಾಧ್ಯಕ್ಷರಾದ ಅಯ್ಯನಗೌಡ, ಗ್ರಾಮದ ಹಿರಿಯರಾದ ಶರಣೆಗೌಡ ಕುಲಕರ್ಣಿ, ಸೋಮಲಿಂಗಪ್ಪ ತಾವರಗೇರಿ, ಆಂಜನೇಯ ಶೆಟ್ಟಿ, ಶಿಕ್ಷಕರಾದ ಸುಭಾಷ ಪತ್ತಾರ, ವೀರೇಶ ಗೋನವಾರ, ಎಂ.ಮಾರುತಿ, ರೂಪಾ, ಶರಣಬಸವ ಕುಲಕರ್ಣಿ, ಮಂಹಾಂತೇಶ ಕುಲಕರ್ಣಿ, ನಾಗರಾಜ ಸೇರಿದಂತೆ ಗ್ರಾಮದ ಹಿರಿಯರು, ಯುವಕರು ಉಪಸ್ಥಿತರಿದ್ದರು.
ಯೋಗ :
ತಾವರಗೇರಿಯ ಯೋಗ ಶಿಕ್ಷಕ ತಿಪ್ಪಣ್ಣ ನೈನಾಪುರ ಇವರ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಓಂಕಾರ-ಸೂರ್ಯ ನಮಸ್ಕಾರದಿಂದ ಆರಂಭವಾಗಿ ಯೋಗದ ವಿವಿಧ ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನವನ್ನು ಹೇಳಿಕೊಟ್ಟರು.
- ಕರುನಾಡ ಕಂದ



















