ಬಳ್ಳಾರಿ/ ಕಂಪ್ಲಿ: ಕಂಪ್ಲಿ ಕೋಟೆಯಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆಯು ತುಂಗಭದ್ರಾ ಜಲಾಶಯದಿಂದ ನದಿಗೆ ಇನ್ನೂ ಅಧಿಕ ಪ್ರಮಾಣದಲ್ಲಿ ನೀರನ್ನು ಬಿಟ್ಟರೆ ಸೇತುವೆ ಮುಳುಗಡೆಯಾಗಲಿದ್ದು, ಕಂಪ್ಲಿ – ಗಂಗಾವತಿ ಸಂಪರ್ಕ ಕಡಿತದ ಭೀತಿ ಉಂಟಾಗಲಿದ್ದು, ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್ ನೀರನ್ನು ಬಿಟ್ಟಲ್ಲಿ ಸೇತುವೆ ಮುಳುಗಡೆಯಾಗಿ ಕೆಲವು ವರ್ಷ ತಿಂಗಳುಗಟ್ಟಲೆ ಕಂಪ್ಲಿ ಗಂಗಾವತಿ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ನದಿಗೆ ನೂತನ ಸೇತುವೆ ನಿರ್ಮಾಣ ಕಾಮಗಾರಿ ಆರಂಭ ಯಾವಾಗ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಕಂಪ್ಲಿ ಗಂಗಾವತಿ ಸಂಪರ್ಕ ಕಡಿತದಿಂದ 10.ಕಿ.ಮೀ. ದೂರದ ಗಂಗಾವತಿಗೆ 35 ಕಿ.ಮೀ.ದೂರ ಸುತ್ತಿ ತಲುಪಬೇಕಿದೆ. ಇದರಿಂದ ವಿದ್ಯಾರ್ಥಿಗಳು, ಚಿಕಿತ್ಸೆಗೆ ತೆರಳುವ ರೋಗಿಗಳು, ಕೃಷಿ ಕಾರ್ಮಿಕರಿಗೆ, ಪ್ರಯಾಣಿಕರಿಗೆ ಅಡಚಣೆಯಾಗಲಿದೆ. ಸೇತುವೆ ಶಿಥಿಲಗೊಂಡಿರುವುದರಿಂದ ಭಾರೀ ವಾಹನಗಳ ಸಂಚಾರ ನಿಷೇಧಿಸಿ 2013ರ ಆ.3ರಂದು ಬಳ್ಳಾರಿ ಜಿಲ್ಲಾಧಿಕಾರಿಗಳು ಹಾಗೂ 2019ರ ಸೆ.3 ರಂದು ಗಂಗಾವತಿ ಲೋಕೋಪಯೋಗಿ ಇಲಾಖೆ ಎಇ ಅಧಿಸೂಚನೆ ಹೊರಡಿಸಿದ್ದರು. ಆದರೂ ಭಾರಿ ವಾಹನಗಳು ಸೇತುವೆ ಎಂದಿನಂತೆ ಸಂಚರಿಸುತ್ತಿವೆ.
ಕಂಪ್ಲಿ ಕೋಟೆಯಲ್ಲಿ ನೂತನ ಸೇತುವೆ ನಿರ್ಮಿಸುವ ಧ್ವನಿ ಹೆಚ್ಚಾದಾಗ 2014 – 15ರಲ್ಲಿ 1.36ಕೋಟಿ ರೂಗಳ ವೆಚ್ಚದಲ್ಲಿ ಸೇತುವೆ ಬಲವರ್ಧನೆ ಕಾಮಗಾರಿಯನ್ನು ಕೈಗೊಂಡಿದ್ದರು, ಆದರೆ ಸೇತುವೆ ಮುಳುಗಡೆಯಾಗಿ ಬಲವರ್ಧನೆ ಕಾಮಗಾರಿ ಪ್ರವಾಹಕ್ಕೆ ಕೊಚಿಕೊಂಡು ಹೋಗಿತ್ತು. ಪ್ರತಿ ವರ್ಷವೂ ಸೇತುವೆ ಮುಳುಗಡೆಯಾದಾಗಲೆಲ್ಲಾ ಸೇತುವೆಯ ಎರಡೂ ಬದಿಗಳ ರಕ್ಷಣಾ ಕಂಬಿಗಳು ಕೊಚ್ಚಿಕೊಂಡು ಹೋಗುವುದು ಸಾಮಾನ್ಯವಾಗಿದೆ.
ಸುಮಾರು ಆರು ದಶಕಗಳ ಹಿಂದಿನ ಸೇತುವೆ ಶಿಥಿಲಗೊಂಡಿದ್ದು, ನಿರಂತರ ಮುಳುಗಡೆಯಾಗುತ್ತಿದೆ ಹೊಸ ಸೇತುವೆ ನಿರ್ಮಿಸುವಂತೆ ಕಳೆದೆರಡು ದಶಕಗಳಿಂದ ಒತ್ತಾಯಿಸುತ್ತಿದ್ದರೂ ಸರ್ಕಾರವಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸುತ್ತಿಲ್ಲ.ಪಟ್ಟಣದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಅನೇಕ ಹೋರಾಟ ಮಾಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಕಂಪ್ಲಿ ಶಾಸಕರಾದ ಜೆ.ಎನ್.ಗಣೇಶ್ 2024ರ ಬೆಳಗಾವಿ ಅಧಿವೇಷನದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಿಗೆ ನೂತನ ಸೇತುವೆ ನಿರ್ಮಾಣದ ಬಗ್ಗೆ ಗಮನ ಸೆಳೆದು ಚರ್ಚಿಸಿದ್ದರು.
2025ರ ಜೂ.16ರಂದು ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಸೇತುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇಲಾಖೆಯ ತಾಂತ್ರಿಕ ತಜ್ಞರೊಂದಿಗೆ ಚರ್ಚಿಸಿ ಸೇತುವೆ ನಿರ್ಮಾಣದ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದ್ದರು.
ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರ ರಾಜ್ಯದ ಜನತೆಗೆ ಅನೇಕ ಭಾಗ್ಯಗಳನ್ನು ನೀಡಿದ್ದು, ಕಂಪ್ಲಿ ಭಾಗದ ಜನತೆಗೆ ನೂತನ ಸೇತುವೆಯ ಭಾಗವನ್ನು ನೀಡಬಹುದೇ ಎನ್ನುವುದನ್ನು ಕಾದು ನೋಡಬೇಕಿದೆ.
“ಕಂಪ್ಲಿ ಕೋಟೆಯಲ್ಲಿ ತುಂಗಭದ್ರಾ ನದಿಗೆ ನೂತನ ಸೇತುವೆ ನಿರ್ಮಿಸುವಂತೆ ಹಲವಾರು ಭಾರಿ ಪ್ರತಿಭಟನೆ ನಡೆಸಿ,ಮನವಿಗಳನ್ನು ಸಲ್ಲಿಸಿ ಸರ್ಕಾರವನ್ನು ಆಗ್ರಹಿಸಲಾಗಿದೆ. ಮುಂದಿನ ವರ್ಷದೊಳಗೆ ಸರ್ಕಾರ ನೂತನ ಸೇತುವೆ ನಿರ್ಮಿಸುವಲ್ಲಿ ಗಮನ ಹರಿಸಬೇಕಿದೆ” ಎಂದು ಪಟ್ಟಣದ ಪ್ರಗತಿಪರ ಸಂಘಟನೆಗಳ (ಪಕ್ಷಾತೀತ) ಒಕ್ಕೂಟದ ಅಧ್ಯಕ್ಷ ಜಿ.ಜಿ.ಚಂದ್ರಣ್ಣ ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಸಚಿವರಾದ ಸತೀಶ್ ಜಾರಕಿಹೊಳಿಯವರು ಸೇತುವೆ ವೀಕ್ಷಿಸಿದ ನಂತರ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಬಂದಿಲ್ಲ.
- ಜೆ.ವಿಶ್ವನಾಥ, ಎಇಇ, ಉಪವಿಭಾಗ ಲೋಕೋಪಯೋಗಿ ಇಲಾಖೆ, ಗಂಗಾವತಿ.
ವರದಿ: ಜಿಲಾನಸಾಬ್ ಬಡಿಗೇರ



















