ಜಲಸಸ್ಯದಿಂದ ಮುಳುಗಿದ ಕಾಲುವೆಗಳು : ಕಳೆದು ಐದಾರು ವರ್ಷದಿಂದ ಅನುದಾನ ಇಲ್ಲ : ನಿರ್ವಹಣೆಗೆ ಅನುದಾನ ಕೊರತೆಯಲ್ಲಿ ಅಧಿಕಾರಿಗಳು
ಬಳ್ಳಾರಿ/ ಕಂಪ್ಲಿ : ಸರ್ಕಾರದ ಪಂಚ ಯೋಜನೆಗಳಿಗೆ ಸಾಕಷ್ಟು ಅನುದಾನ ಬಳಕೆ ಮಾಡುತ್ತಿರುವ ಹಿನ್ನಲೆ ನೀರಾವರಿ ಇಲಾಖೆಗೆ ಅನುದಾನದ ಕೊರತೆಯಿಂದ ಡಿಸ್ಟಿಬ್ಯೂಟರ್ ಕಾಲುವೆಗೆ ದುರಸ್ಥಿ ಕಾರ್ಯ ಮರಿಚಿಕೆಯಾಗಿದೆ.
ಹೌದು. ಕಂಪ್ಲಿ ತಾಲೂಕು ವ್ಯಾಪ್ತಿಯ ಎಲ್. ಎಲ್. ಸಿ ಕಾಲುವೆಯ ಡಿಸ್ಟ್ರಿಬ್ಯೂಟರ್ ಹಾಗೂ ಎಚ್ .
ಎಲ್. ಸಿ ಯ ದರೋಜಿ ಡಿಸ್ಟ್ರಿಬ್ಯೂಟರ್ ಕಾಲುವೆಗಳು ಕಂಪ್ಲಿ ನೀರಾವರಿ ಇಲಾಖೆಗೆ ಒಳಪಡುವುದರಿಂದ ಇಲ್ಲಿನ ಕಾಲುವೆಯಲ್ಲಿ ತುಂಬಿರುವ ಹೂಳು ಮತ್ತು ಜಂಗಲ್ ಕಟ್ಟಿಂಗ್ ನಿರ್ವಹಣೆಗೆ ಅನುದಾನದ ಇಲ್ಲದೆ, ಕಾಲುವೆಗಳು ಅಭಿವೃದ್ಧಿಯಿಂದ ಕಣ್ಮರೆಯಾಗುತ್ತಿವೆ.
ಸರ್ಕಾರವು ಪ್ರತಿಯೊಂದು ಇಲಾಖೆಗೆ ಸಾಕಷ್ಟು ಅನುದಾನಗಳನ್ನು ನೀಡುವ ಮೂಲಕ ಅಭಿವೃದ್ಧಿಗೆ ಒತ್ತು ನೀಡಿದರೆ, ನೀರಾವರಿ ಇಲಾಖೆಗೆ ಮಾತ್ರ ಕಾಲುವೆಗಳ ನಿರ್ವಹಣೆಗೆ ಕಳೆದ ಐದಾರು ವರ್ಷಗಳಿಂದ ಅನುದಾನ ನೀಡದೆ ಇರುವುದು ಕಾಲುವೆಗಳ ಅಭಿವೃದ್ಧಿಗೆ ಗ್ರಹಣ ಹಿಡಿದಂತಾಗಿದೆ.
2019ರ ಹಿಂದೆ ನೀರಾವರಿ ವ್ಯಾಪ್ತಿಯಲ್ಲಿ ಬರುವ ಡಿಸ್ಟಿಬ್ಯೂಟರ್ ಕಾಲುವೆಗಳ ನಿರ್ವಹಣೆಗಾಗಿ ಸುಮಾರು 4-5 ಲಕ್ಷ ಅನುದಾನ ಬಿಡುಗಡೆಯಾಗುತ್ತಿತ್ತು. ಆದರೆ, ನಂತರದ ದಿನದಲ್ಲಿ ನೀರಾವರಿ ಇಲಾಖೆಗೆ ಅನುದಾನ ಇಲ್ಲದಂತಾಗಿದೆ. ಇದರಿಂದ ಕಿರು ಕಾಲುವೆಗಳ ಆಧುನೀಕರಣ ಮತ್ತು ಅಭಿವೃದ್ಧಿಯಿಂದ ಕುಂಠಿತವಾಗಿ, ರೈತರ ಹೊಲಗದ್ದೆಗಳಿಗೆ ನೀರು ತಲುಪಲು ಕಷ್ಟಕರವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದು, ಸ್ವಂತ ಖರ್ಚಿನಲ್ಲೇ ಡಿಸ್ಟ್ರಿಬ್ಯೂಟರ್ ಕಾಲುವೆಗಳಲ್ಲಿ ತುಂಬಿರುವ ಹೂಳು, ಜಲಸಸ್ಯ ತೆರವು ಮಾಡಿಕೊಳ್ಳುವ ಪ್ರಸಂಗ ಬಂದಿದೆ.
ಕರ್ನಾಟಕ ನೀರಾವರಿ ಇಲಾಖೆಯ ನಂ.1 ಕಾಲುವೆ ಉಪ ವಿಭಾಗದ ಎಲ್ಎಲ್ಸಿ ವ್ಯಾಪ್ತಿಯಲ್ಲಿ 10 ಡಿಸ್ಟ್ರಿಬ್ಯೂಟರ್ ಮತ್ತು ಎಚ್. ಎಲ್. ಸಿ ಮೂಲಕ ದರೋಜಿ, ಮಾದಾಪುರ ಸೇರಿದಂತೆ 7 ಡಿಸ್ಟಿಬ್ಯೂಟರ್ಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ, ಕಳೆದ ಐದಾರು ವರ್ಷಗಳಿಂದ ಕಿರು ಕಾಲುವೆಗಳು ಹೂಳು ಮತ್ತು ಜಲಸಸ್ಯದಿಂದ ತುಂಬಿ ನೀರು ಹರಿಯದಂತಾಗಿದೆ. ಇದರಿಂದ ಕೆಳ ಭಾಗದ ರೈತರು ಅಳಲು ಸರ್ಕಾರದ ಕಣ್ಣಿಗೆ ಕಾಣದಂತಾಗಿದೆ.
ರಾಜ್ಯದಲ್ಲಿ ಕರ್ನಾಟಕ ನೀರಾವರಿ, ಕೃಷ್ಣ ಭಾಗ್ಯ, ಕಾವೇರಿ, ವಿಶ್ವೇಶ್ವರಯ್ಯ ನೀರಾವರಿ ನಿಗಮ ಮಂಡಳಿಗಳಿವೆ. ಈ ಕರ್ನಾಟಕ ನೀರಾವರಿ ನಿಗಮ ಮಂಡಳಿಯ ವ್ಯಾಪ್ತಿಯಲ್ಲಿ ಕಂಪ್ಲಿ ಉಪ ವಿಭಾಗ ಬರುತ್ತದೆ. ಇಲ್ಲಿನ ನೀರಾವರಿ ಕಛೇರಿಗಳಿಗೆ ಅನುದಾನ ಇಲ್ಲದ ಪರಿಣಾಮ ಅಧಿಕಾರಿಗಳು ಕೈಕಟ್ಟಿ ಕುಳಿತುಕೊಂಡಿದ್ದಾರೆ. ಇದರಿಂದ ಈ ಭಾಗದ ರೈತರು ಸಾಕಷ್ಟು ನೀರಿನ ಸಂಕಷ್ಟ ಎದುರಿಸುವಂತಾಗಿದೆ. ದೇಶದ ಬೆನ್ನೆಲುಬು ರೈತ. ಅದರೆ, ರೈತರ ಸಂಕಷ್ಟವನ್ನು ಸರ್ಕಾರ ಆಲಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿವೆ. ಈಗಾಗಲೇ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಸುಮಾರು 80 ಟಿಎಂಸಿ ನೀರು ಸಂಗ್ರಹವಾಗಿದ್ದು, ಹೆಚ್ಚಿನ ನೀರನ್ನು ನದಿಗೆ ಪೋಲು ಮಾಡಲಾಗುತ್ತಿದೆ. ಆದರೆ, ಈ ನೀರನ್ನೇ ಕಾಲುವೆ ಮೂಲಕ ರೈತರ ಹೊಲಗದ್ದೆಗಳಿಗೆ ಹರಿಸಿದರೆ ಮೊದಲ ಬೆಳೆಯನ್ನು ಆದಷ್ಟು ಬೇಗ ತೆಗೆದುಕೊಳ್ಳಬಹುದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಸರ್ಕಾರ ರೈತರ ಬಗ್ಗೆ ಹೆಚ್ಚಿನ ಗಮನ ಹರಿಸಿ, ನೀರಾವರಿ ಇಲಾಖೆಗೆ ಅನುದಾನ ನೀಡಿ, ಡಿಸ್ಟಿಬ್ಯೂಟರ್ ಕಾಲುವೆಗಳಲ್ಲಿ ತುಂಬಿದ ಹೂಳು, ಜಂಗಲ್ ಕಟ್ಟಿಂಗ್ಗೆ ಅನುವು ಮಾಡಿಕೊಡಿಸಬೇಕೆಂಬುದು ರೈತರ ಆಶಯವಾಗಿದೆ.
ವೇತನ ಬಾಕಿ :
ಇಲ್ಲಿನ ನೀರಾವರಿ ಕಚೇರಿಯಲ್ಲಿ 16 ಹುದ್ದೆಗಳು ಮುಂಜುರಾಗಿದ್ದು, ಇದರಲ್ಲಿ ಎರಡು ಹುದ್ದೆಗಳು ಖಾಲಿ ಇರುವುದು ಕಂಡು ಬಂತು. ಜೆ. ಇ 1, ಬೆರಳಚ್ಚುದಾರ ಹುದ್ದೆ 1 ಸೇರಿದಂತೆ ಎರಡು ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಬೇಕಾಗಿದೆ. ಇಲ್ಲಿನ 80 ಜನ ಲಸ್ಕರ್ಗಳಿಗೆ 2024 ಡಿಸೆಂಬರ್-1ರಿಂದ 2025ರ ಜನವರಿ-1ವರೆಗಿನ ಬಾಕಿ ವೇತನ ಬಿಡುಗಡೆ ಮಾಡಬೇಕಾಗಿದೆ.
ಸರ್ಕಾರದಿಂದ ಕಳೆದ ನಾಲ್ಕೈದು ವರ್ಷದಿಂದ ಡಿಸ್ಟಿಬ್ಯೂಟರ್ನ ಹೂಳು, ಜಂಗಲ್ ಕಟ್ಟಿಂಗ್ ನಿರ್ವಹಣೆಗೆ ಯಾವುದೇ ಅನುದಾನ ಬಂದಿಲ್ಲ. ಆದ್ದರಿಂದ ರೈತರ ಸಹಕಾರದಿಂದೊಗೆ ಕಿರು ಕಾಲುವೆಯ ಹೂಳು, ಜಲಸಸ್ಯ ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ.
- ಶ್ರೀನಿವಾಸ ಎ, ಎಇಇ, ನೀರಾವರಿ ಕಚೇರಿ, ಕಂಪ್ಲಿ.
ಎಲ್ಲಾ ಡಿಸ್ಟಿಬ್ಯೂಟರ್ ನಾಲೆಗಳಲ್ಲಿ ಹೂಳು, ಜಲಸಸ್ಯ ತುಂಬಿಕೊಂಡು, ನೀರು ಸರಾಗವಾಗಿ ಹರಿಯಲು ತೊಂದರೆಯಾಗುತ್ತಿದೆ. ಇದರಿಂದ ಕೆಳ ಹಂತದ ರೈತರ ಹೊಲಗಳಿಗೆ ನೀರು ಇಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನೆ ಇಲ್ಲ. ಕಛೇರಿಯಲ್ಲಿ ಅನುದಾನ ಇಲ್ಲವೆಂದು ಹೇಳುತ್ತಿದ್ದಾರೆ. ಇದರಿಂದ ರೈತರ ಸಂಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಬೇಕು. ಕೂಡಲೇ ಸರ್ಕಾರದ ರೈತರ ಸಂಕಷ್ಟವನ್ನು ಆಲಿಸಿ, ನೀರಾವರಿ ಇಲಾಖೆಗೆ ಅನುದಾನ ಮಂಜೂರು ಮಾಡಿ, ಡಿಸ್ಟ್ರಿಬ್ಯೂಟರ್ಗಳ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಬೇಕು.
- ತಿಮ್ಮಪ್ಪ ನಾಯಕ, ನಗರ ಘಟಕಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಂಪ್ಲಿ.
ವರದಿ: ಜಿಲಾನಸಾಬ್ ಬಡಿಗೇರ



















