ವೃತ್ತಿಪರ ಕಲಾವಿದರ ಬದುಕಿಗೆ ಹೊಸ ಯೋಜನೆಗಳನ್ನು ರೂಪಿಸಿ-ಶರಣಬಸವ ಶಾಸ್ತ್ರಿಗಳು
ಬಾಗಲಕೋಟೆ : ಕಲೆಯನ್ನು ಕಾಯಕ ಮಾಡಿಕೊಂಡ ವೃತ್ತಿಪರ ಕಲಾವಿದರ ಬದುಕಿಗೆ ಆಸರೆಯಾಗುವ ಹೊಸ ಯೋಜನೆಗಳನ್ನು ರೂಪಿಸಬೇಕೆಂದು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟದ ಅಧ್ಯಕ್ಷ ಹಾಗೂ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿಗಳು ಸರ್ಕಾರಕ್ಕೆ ಒತ್ತಾಯಿಸಿದರು. ಅವರು ಬಾಗಲಕೋಟೆಗೆ ನೂತನವಾಗಿ ನೇಮಕಗೊಂಡ ಜಿಲ್ಲಾಧಿಕಾರಿಗಳನ್ನು ಗೌರವಿಸಿ ಮಾತನಾಡುತ್ತಾ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆಯ ಸಚಿವರಾದ ಶಿವರಾಜ್ ತಂಗಡಗಿ ಅವರ ಅವಧಿಯಲ್ಲಿ ರಾಜ್ಯದ ಕಲಾವಿದರ ಮಾಶಾಸನವನ್ನು ಐದು ನೂರಕ್ಕೆ ಏರಿಕೆ ಮಾಡಿರುವುದು ರಾಜ್ಯದ ಕಲಾವಿದರ ವಲಯದಲ್ಲಿ ಸಂತಸವನ್ನು ಮೂಡಿಸಿದೆ ಘನ ಸರ್ಕಾರಕ್ಕೆ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ಹೇಳಲಿಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ ಅವರು ಕಲಾವಿದರ ವಯಸ್ಸು, ಸೇವೆ ,ವಿದ್ವತ್ತು, ಬಡತನವನ್ನು ಗಮನದಲ್ಲಿಟ್ಟುಕೊಂಡು ಕಲಾವಿದರಿಗೆ ಮಾಶಾಸನವನ್ನು ನೀಡಬೇಕೆಂದು ಆಗ್ರಹಿಸಿದರು.
ಕಲಾವಿದ ಸದಾಶಿವ ಅಗೋಜಿ ಮಾತನಾಡಿ ನಮ್ಮ ಬೇಡಿಕೆಗಳನ್ನು ಹಂತ ಹಂತವಾಗಿ ಪೂರೈಸಬೇಕೆಂದು ಕೇಳಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಪವಿತ್ರಾ ಜಕ್ಕಪ್ಪನವರು ಮಾತನಾಡಿ ವೃತ್ತಿಪರ ಹಾಗೂ ಮೂಲ ಜನಪದ ಕಲಾವಿದರನ್ನು ಗುರುತಿಸುವ ಕಾರ್ಯ ಇಲಾಖೆಯಿಂದಾಗಬೇಕೆಂದು ಹೇಳಿದರು. ರೈಲ್ವೆ ಹೋರಾಟಗಾರ ಕುತ್ಬುದ್ದೀನ್ ಖಾಜಿ ಕಲಾವಿದರ ಒಕ್ಕೂಟಕ್ಕೆ ಬೆಂಬಲವನ್ನು ಸೂಚಿಸಿದರು. ಮುಖಂಡರಾದ ಯಲ್ಲಪ್ಪ ಪೂಜಾರ್, ಶಂಕರಪ್ಪ ತಂಬಾಕದ್, ಈಶ್ವರ ಹೊರಟ್ಟಿ, ರಾಮಪ್ಪ ಬಾಲಪ್ಪ ಗಲಗಲಿ, ಪಾಂಡುರಂಗ ಕನಸಗೇರಿ, ಶಿವಲಿಂಗವ್ವ ಗಸ್ತಿ, ಲಕ್ಕವ್ವ ಕಪರಟ್ಟಿ, ಗೋವಿಂದಪ್ಪ ಪರಂಡಿ ಮುಂತಾದವರು ಮಾತನಾಡಿದರು. ನೂರಾರು ಕಲಾವಿದರು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಬಂದಿದ್ದು ವಿಶೇಷವಾಗಿತ್ತು.
– ಕರುನಾಡ ಕಂದ



















