ಅನಾಹುತ ಜರುಗುವ ಮುನ್ನ ಮುನ್ನೆಚ್ಚರ ವಹಿಸಿ, ಮಕ್ಕಳ ಪಾಠ ಬೇರೆಡೆ ನಿರ್ವಹಿಸಿ – ಕ. ರ. ವೇ ಶರಣ ಬಸಪ್ಪ ಎಲ್ಹೇರಿ ಎಚ್ಚರಿಕೆ
ಯಾದಗಿರಿ/ ಗುರುಮಠಕಲ್: ತಾಲೂಕಿನ ಕಾಳೆಬೆಳಗುಂದಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇಲ್ಛಾವಣಿ ಶಿಥಿಲಗೊಂಡಿರುವ ಸ್ಥಿತಿಯಲ್ಲಿ ಇದ್ದರೂ ಸಹ ಪ್ರತಿನಿತ್ಯ ಅದರ ಕೆಳಗೆ ಮಕ್ಕಳ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಪರಿಸ್ಥಿತಿ ನೋಡಿದರೆ ತುಂಬಾ ಚಿಂತಾಜನಕ ವಿಚಾರ ಎನಿಸುತ್ತದೆ.
ಕಲ್ಯಾಣ ಕರ್ನಾಟಕದ ಶಿಕ್ಷಣ ವ್ಯವಸ್ಥೆ ಸುಧಾರಣೆ ಬರೀ ಮಾತಿಗೆ ಮಾತ್ರ ಅನ್ನುವ ಹಾಗಾಗಿದೆ ಯಾದಗಿರಿ ಜಿಲ್ಲೆ ಪ್ರಭಾವಿ ಶಾಸಕರು ಹಾಗೂ ಮಂತ್ರಿಗಳನ್ನು ಹೊಂದಿದ್ದು ಈ ಭಾಗಕ್ಕೆ ಲಾಭ ಪಡೆಯುವಲ್ಲಿ ವಿಫಲವಾಗಿದೆ.
ಇಂದು ಶಾಲಾ ಮಕ್ಕಳ ಶಾಲೆಗೆ ಪೋಷಕರ ಹೇಳಿಕೆಯ ಆಧಾರದ ಮೇಲೆ ಶಾಲೆಗೆ ಭೇಟಿ ನೀಡಿದ ಶರಣಬಸಪ್ಪ ಎಲ್ಹೇರಿ ಶಾಲಾ ಕೊಠಡಿಗಳ ಸ್ಥಿತಿ-ಗತಿ ಕಂಡು ವಿಚಾರಿಸಿದಾಗ ಕಳೆದ ಒಂದು ವರ್ಷದಿಂದ ಕಟ್ಟಡದ ಮೇಲ್ಛಾವಣೆ ಸಂಪೂರ್ಣ ಹಾಳಾಗಿದ್ದು, ಸ್ಟೀಲ್ ಹಳಿಗಳು ಹೊರಬಂದು ಸಿಮೆಂಟ್ ಹಾಗೂ ಸಣ್ಣ ಜಲ್ಲಿ ಕಲ್ಲುಗಳು ಮಕ್ಕಳ ಮೇಲೆ ಬೀಳುತ್ತಿರುವುದು, ದಿನನಿತ್ಯ ಮಕ್ಕಳು ಈ ಕೊಠಡಿಯಲ್ಲಿ ವಿದ್ಯಾಭ್ಯಾಸ ಮಾಡುವುದು ನೋಡಿದರೆ ಎದೆ ಝಲ್ ಎನ್ನುತ್ತದೆ ಎಂದು ಹೇಳಿದರು.
ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಕೂಡಾ ಯಾವುದೇ ರೀತಿಯ ಪ್ರಯೋಜನ ಆಗಿಲ್ಲ ಮಕ್ಕಳಿಗೆ ಪರ್ಯಾಯವಾಗಿ ವಿದ್ಯಾಭ್ಯಾಸ ಮಾಡಲು ಬೇರೆ ಕಡೆ ಸ್ಥಳ ಅವಕಾಶ ಮಾಡಿಕೊಟ್ಟಿಲ್ಲ, ಆ ಶಾಲೆಯಲ್ಲಿ ಹೆಚ್ಚುವರಿ ಉತ್ತಮ ಕೋಣೆ ಸಹ ಇರುವುದಿಲ್ಲ, ಪೋಷಕರು ಭಯದಲ್ಲೇ ಮಕ್ಕಳನ್ನು ಶಾಲೆಗೆ ಕಳುಹಿಸುವಂತಾಗಿದೆ.
ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾಡಳಿತ ಯಾದಗಿರಿ ಕಲ್ಯಾಣ ಕರ್ನಾಟಕ 2023-24 ನೇ ಸಾಲಿನ ಕೆ ಕೆ ಆರ್ ಡಿ ಬಿ ಯ ಅಕ್ಷರ ಅವಿಸ್ಕಾರ ಮೈಕ್ರೋ ಯೋಜನೆಯಡಿಯಲ್ಲಿ ಶಾಲೆಗೆ ಕೊಠಡಿಗಳ ದುರಸ್ತಿ ಹಾಗೂ ಇತರ ಕಾಮಗಾರಿಗಳಿಗೆ ಅನುದಾನ ಬಂದಿರುತ್ತದೆ.
ಸುಮಾರು 3 ಲಕ್ಷ ಅಂದಾಜು ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕಾಗಿ ಕೆ ಆರ್ ಐ ಡಿ ಎಲ್ ಯಾದಗಿರಿ ತಾಲೂಕ ಗುರುಮಠಕಲ್ ಇವರಿಗೆ ಕಾಮಗಾರಿಯನ್ನು ವಹಿಸಿರುತ್ತಾರೆ, ಆದರೆ ಬಂದಿರುವ ಅನುದಾನ ಕಟ್ಟಡದ ನಿರ್ಮಾಣಕ್ಕೆ ಸಾಕಾಗುವದಿಲ್ಲ ಎಂದು ಬೇರೆ ಕ್ರೀಡಾ ಸಾಮಗ್ರಿಗಳು ಇನ್ನಿತರ ಕೆಲಸಕ್ಕೆ ಬಳಸಿಕೊಂಡಿದ್ದಾರೆ.
ಹೊಸ ಎರಡು ಕೋಠಡಿಗಳ ನಿರ್ಮಾಣಕ್ಕೆ ಅನುದಾನ ಪ್ರಸ್ತುತ ಬಂದಿದ್ದು, ಆದಷ್ಟು ಬೇಗನೆ ಹಳೆಯ ಕಟ್ಟಡವನ್ನು ಬೀಳಿಸಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಬೇಕು, ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ದಯವಿಟ್ಟು ಮಕ್ಕಳನ್ನು ಬೇರೆ ಸ್ಥಳದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಬೇಕು, ಈ ಹಳೆ ಶಾಲಾ ಕಟ್ಟಡ ಬೀಗ ಹಾಕಿ ಮುಂದಾಗುವ ಅನಾಹುತ ತಪ್ಪಿಸಬೇಕು ಹಾಗೂ ಹೀಗೆ ಮುಂದುವರೆದು ಏನಾದರೂ ಅನಾಹುತ ಆದರೆ ಅದಕ್ಕೆ ಶಿಕ್ಷಣ ಇಲಾಖೆ ಹಾಗೂ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಕ್ಷಣಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಕೊಂಡು ಯಾವಾಗ ಬೇಕಾದರೂ ಆಗ ಬಹುದಾದ ಅನಾಹುತ ತಪ್ಪಿಸಿ ಮುಂಜಾಗ್ರತೆಯಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕು, ಭಯದ ವಾತಾವರಣದಲ್ಲಿ ಮಕ್ಕಳು ತಮ್ಮ ಮುಂದಿನ ಭವಿಷ್ಯ ಬರೆಯಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಕ. ರ. ವೇ ತಾಲೂಕ ಪದಾಧಿಕಾರಿಗಳಾದ ದೇವಸಿಂಗ್ ಠಾಕೂರ್, ಮೌನೇಶ್ ಮಾಧ್ವಾರ, ತಾಯಪ್ಪ ಚೇಳಿಮೆಲಿ, ರಾಜು ಕಲಾಲ್, ಲಕ್ಷ್ಮಣ್ ಬಾಗಿಲಿ ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















