
ಗರ್ಭಿಣಿಯರಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕುಸಿತ ಶಾಸಕ ಕಂದಕೂರ ಕಳವಳ
ಯಾದಗಿರಿ : ಗುರುಮಠಕಲ್ ಮತಕ್ಷೇತ್ರದ ಹಲವು ಆಸ್ಪತ್ರೆಗಳಲ್ಲಿ ದಾಖಲಾದ ಗರ್ಭಿಣಿಯರಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಶೇಕಡವಾರು ಅತ್ಯಂತ ಕಡಿಮೆ ಪ್ರಮಾಣದಲ್ಲಿ 8,9 ಹೀಗೆ 10ರೊಳಗೆ ಇರುವುದನ್ನು ಕಂಡು ಶಾಸಕ ಶರಣಗೌಡ ಕಂದಕೂರ ಕಳವಳ ವ್ಯಕ್ತಪಡಿಸಿದರು.
ನಮ್ಮ ಕರುನಾಡ ಕಂದ ಪತ್ರಿಕೆಯಲ್ಲಿ ವಿಸ್ತೃತವಾಗಿ ಆರೋಗ್ಯ ಸಮುದಾಯ ಕೇಂದ್ರಗಳ ಕುರಿತು ಸುದ್ದಿ ಮಾಡುತ್ತಿರುವ ಬೆನ್ನಲ್ಲೇ ಶಾಸಕರು ಭೇಟಿ ನೀಡಿರುವುದು ಹಾಗೂ ಅಲ್ಲಿನ ಪರಿಸ್ಥಿತಿ ನೋಡಿ ತಕ್ಷಣಕ್ಕೆ ನೋಟಿಸ್ ಜಾರಿ ಮಾಡಿರುವುದು ಒಂದು ಒಳ್ಳೆಯ ಬದಲಾವಣೆ.
ಗುರುಮಠಕಲ್ ಮತಕ್ಷೇತ್ರದ ಪಿಹೆಚ್ಸಿ, ಸಿಹೆಚ್ಸಿ, ತಾಲೂಕು ಆರೋಗ್ಯ ಕೇಂದ್ರಗಳಿಗೆ ಶಾಸಕ ಶರಣಗೌಡ ಕಂದಕೂರ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿದ ವಿಷಯ ಕಂಡು ಶಾಸಕರು ಹಿಮೋಗ್ಲೋಬಿನ್ ಹೆಚ್ಚಳಕ್ಕೆ ಶೀಘ್ರ ಕಾರಣ ಹುಡುಕಿ ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ತಾಲೂಕು ಆರೋಗ್ಯ ಅಧಿಕಾರಿ ಹಣಮಂತರೆಡ್ಡಿಯವರಿಗೆ ಸೂಚಿಸಿದರು.
ಔಷಧಿನೇ ಇಲ್ಲಂದ್ರ ಆಸ್ಪತ್ರೆ ಹ್ಯಾಂಗ್ ನಡೆಸ್ತಿರಿ :

ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಕೆಲವು ಕಡೆ ತಜ್ಞ ವೈದ್ಯರಿಲ್ಲ, ವೈದ್ಯರಿದ್ದರೂ ಒಬ್ಬೊರಿಗೆ ಹಲವು ಆಸ್ಪತ್ರೆಗಳು ಪ್ರಭಾರ ಇರುವುದರಿಂದ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ, ಯಾವುದೇ ಆಸ್ಪತ್ರೆಗಳಲ್ಲಿ ಮೂಲ ಸೌಕರ್ಯವಿಲ್ಲವೆಂದು ಜನರು ದೂರಿದರೆ, ನಾಯಿ ಕಡಿತಕ್ಕೆ ಕಳೆದ 6 ತಿಂಗಳಿಂದ ಲಸಿಕೆ ಲಭ್ಯವಿಲ್ಲ, 4 ತಿಂಗಳಿಂದ ಐವಿ ಪ್ಲೂಡ್ಸ್ ಸರಬರಾಜಿಲ್ಲ, ಕೆಲವೊಂದು ಔಷಧಿಗಳು ಆಸ್ಪತ್ರೆಯ ನಿರ್ವಹಣಾ ವೆಚ್ಚದಲ್ಲಿ ಖರೀದಿ ಮಾಡುತ್ತೇವೆ ಹೀಗೆ ಸಾಲು ಸಾಲು ಸಮಸ್ಯೆಗಳು ಗುರುಮಠಕಲ್ ಮತಕ್ಷೇತ್ರದ ಹಲವು ಆಸ್ಪತ್ರೆಗಳಲ್ಲಿ ಕಂಡು ಬಂದವು.
ಕಂಡು ಬಂದ ಹಲವು ದೃಶ್ಯಗಳನ್ನು ಕಂಡು ದಂಗಾದ ಶಾಸಕರು ಇದೇ ರೀತಿ ಆಸ್ಪತ್ರೆಗಳಲ್ಲಿ ಔಷಧಿನೇ ಇಲ್ಲಂದ್ರ ಆಸ್ಪತ್ರೆ ಹ್ಯಾಂಗ್ ರೀ ನಡೆಸ್ತೀರಿ ಎಂದು ಡಿಹೆಚ್ಒ ಅವರನ್ನು ತರಾಟೆಗೆ ತೆಗೆದುಕೊಂಡರು.
ಸಮಜಾಯಿಸಿ ನೀಡಲು ಬಂದ ತಾಲೂಕು ಆರೋಗ್ಯ ಅಧಿಕಾರಿ ಹಣಮಂತರಡ್ಡಿಯವರಿಗೆ ಸುಮ್ನೆ ಇರಪ್ಪ ನಾ ಬಂದಾಗ ಈ ಸಮಸ್ಯೆ ಗೊತ್ತಾಯಿತು. ಇಷ್ಟು ದಿನ ನೀವೆಲ್ಲಾ ಏನ್ರೀ ಮಾಡಿದ್ದೀರಿ, ಯಾವಗಾದರೂ ಬಂದು ಆಸ್ಪತ್ರೆಗೆ ವಿಸಿಟ್ ಮಾಡಿದ್ದೀರಾ, ಮಾಡಿದ್ದರೆ ಎಂದೋ ಈ ಸಮಸ್ಯೆ ಬಗೆ ಹರೀತಿತ್ತು. ಆಸ್ಪತ್ರೆಗಳಲ್ಲಿ ಇಷ್ಟೊಂದು ಸಮಸ್ಯೆ ಇದೆ ನೀವೇನ್ರಿ ಮಾಡ್ತೀರಿ ಎಂದು ಗದರಿದರು.
ತದ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಾಗುಪ್ತ ಸೇರಿದಂತೆ ಹಲವು ಮೇಲಾಧಿಕಾರಿಗಳಿಗೆ ಸ್ಥಳದಿಂದಲೇ ಪೋನ್ ಸಂಪರ್ಕ ಮಾಡಿ ವಿಷಯದ ತೀವ್ರತೆ ಮತ್ತು ಸಮಸ್ಯೆಗಳ ಪರಿಹರಿಸುವಂತೆ ಕೋರಿದರು.
ಕೋಟಗೇರಾ ಆಸ್ಪತ್ರೆಗೆ ಭೇಟಿ :

ಮತಕ್ಷೇತ್ರದ ಕೋಟಗೇರಾ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಟಾಫ್ ನರ್ಸ್ ಗಳ ವರ್ತನೆ, ಫಾರ್ಮಾಸಿಸ್ಟ್ ನಿರ್ಲಕ್ಷ್ಯ ಕಂಡು ಕೆರಳಿದ ಶಾಸಕರು ಕೂಡಲೇ ಇಬ್ಬರಿಗೆ ನೊಟಿಸ್ ನೀಡುವಂತೆ ಸೂಚಿಸಿದರು.
ಇದೇ ವೇಳೆ ಆಸ್ಪತ್ರೆಯಲ್ಲಿನ ರಿಜಿಸ್ಟರ್ನಲ್ಲಿ ಗರ್ಭೀಣಿಯರ ದಾಖಲಾತಿ ಮತ್ತು ಅವರ ಹಿಮೋಗ್ಲೋಬಿನ್ ಪ್ರಮಾಣ ಕುರಿತು ಪರಿಶೀಲಿಸಿದರು. ನಂತರ ಆಸ್ಪತ್ರೆ ಸ್ವಚ್ಚತೆ ಕಾಪಾಡಬೇಕು, ಕಾಂಪೌಡ್ ಒಳಗೆ ಸಿ. ಸಿ ರಸ್ತೆ, ಗಾರ್ಡನ್ ನಿರ್ಮಿಸಲು ಕ್ರಮ ಕೈಗೋಳ್ಳಬೇಕು, ಜನರು ಆಸ್ಪತ್ರೆಗೆ ರೋಗ ವಾಸಿ ಮಾಡಿಕೊಳ್ಳಲು ಬರಬೇಕು ರೋಗ ಹಚ್ಚಿಕೊಂಡು ಹೋಗುವಂತಾಗಬಾರದು ಮತ್ತೊಮ್ಮೆ ಬರುವ ವೇಳೆಗೆ ಎಲ್ಲಾ ಸರಿಯಾಗಬೇಕು ಇಲ್ಲಂದ್ರ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
ಗಾಜರಕೋಟ್ ಆಸ್ಪತ್ರೆಗೆ ಭೇಟಿ :

ಮತಕ್ಷೇತ್ರದ ಗಾಜರಕೋಟ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾಯಿ ಕಡಿತ ಲಸಿಕೆ, ಐವಿ ಪ್ಲೂಡ್ಸ್ ಕೊರತೆ ಗಮನಕ್ಕೆ ಬಂದಿದ್ದು, ಕೂಡಲೇ ಕ್ರಮಕೈಗೊಳ್ಳುವಂತೆ ಡಿಹೆಚ್ಒಗೆ ಸೂಚನೆ ನೀಡಿದರು. ಇದೇ ವೇಳೆ ಆಸ್ಪತ್ರೆಯಲ್ಲಿನ ರಿಜಿಸ್ಟರ್ನಲ್ಲಿ ಗರ್ಭಿಣಿಯರ ದಾಖಲಾತಿ ಮತ್ತು ಅವರ ಹಿಮೋಗ್ಲೋಬಿನ್ ಪ್ರಮಾಣ ಕುರಿತು ಪರಿಶೀಲಿಸಿದರು. ಆಸ್ಪತ್ರೆ ಸಿಬ್ಬಂದಿಗಳು ಜನರು ಆಸ್ಪತ್ರೆ ಕಾಂಪೌಂಡ್ ಒಳಗೆ ಟ್ರಾಕ್ಟರ್ ನಿಲ್ಲಿಸುವುದು, ಮೂತ್ರ ವಿಸರ್ಜನೆ ಮಾಡುವುದು ಮಾಡುತ್ತಿದ್ದು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದಾಗ ಸ್ಥಳದಲ್ಲಿದ್ದ ಪಿಡಿಒಗೆ ಕೂಡಲೇ ಪೊಲೀಸ್ ಸ್ಟೇಶನ್ಗೆ ಕಂಪ್ಲೆಟ್ ಕೊಟ್ಟು ಬಿಡಿ ಎಂದು ಸೂಚಿಸಿದರು.
ಗುರುಮಠಕಲ್ ಆಸ್ಪತ್ರೆಗೆ ಭೇಟಿ :

ಗುರುಮಠಕಲ್ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ರಿಜಿಸ್ಟರ್ನಲ್ಲಿ ಗರ್ಭಿಣಿಯರ ದಾಖಲಾತಿ ಮತ್ತು ಅವರ ಹಿಮೋಗ್ಲೋಬಿನ್ ಪ್ರಮಾಣ ಕುರಿತು ಪರಿಶೀಲಿಸಿದರು. ಜನರು ಆಸ್ಪತ್ರೆ ಅವ್ಯವಸ್ಥೆ ಕುರಿತು ಹಲವು ದೂರುಗಳು ಬರುತ್ತಿದ್ದು, ಎಚ್ಚರದಿಂದ ಇರಿ, ಆಸ್ಪತ್ರೆಗೆ ಬಡವರು ಬರ್ತಾರೆ ಅವರನ್ನು ಮಾನವೀಯತೆ ಇಂದ ಕಾಣಿ, ನರ್ಸ್ ಗಳು ಜನರೊಡನೆ ಸೌಜನ್ಯದಿಂದ ವರ್ತಿಸದಿದ್ದಲ್ಲಿ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು. ಆಸ್ಪತ್ರೆ ಸ್ವಚ್ಚತೆಗೆ ಹೆಚ್ಚಿನ ಗಮನ ನೀಡಬೇಕು, ಈ ಆಸ್ಪತ್ರೆಯನ್ನು 100 ಬೆಡ್ ಆಸ್ಪತ್ರೆಗೆ ಏರಿಸಲು ಕ್ರಮವಹಿಸಲಾಗಿದ್ದು, ಈ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ ನಿವಾರಣೆಯಾಗಲಿದೆ ಎಂದರು.
ಸೈದಾಪುರ ಆಸ್ಪತ್ರೆಗೆ ಭೇಟಿ :

ಸೈದಾಪೂರ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು ಆಸ್ಪತ್ರೆ ಸ್ವಚ್ಚತೆ ಪರಿಶೀಲಿಸಿದರು. ಇದೇ ವೇಳೆ ಆಸ್ಪತ್ರೆಯಲ್ಲಿನ ರಿಜಿಸ್ಟರ್ ಗರ್ಭಿಣಿಯರ ದಾಖಲಾತಿ ಮತ್ತು ಅವರ ಹಿಮೋಗ್ಲೋಬಿನ್ ಪ್ರಮಾಣ ಕುರಿತು ಪರಿಶೀಲಿಸಿದರು.
ತದನಂತರ ಆಸ್ಪತ್ರೆ ಸಿಬ್ಬಂದಿಗಳ ಕ್ವಾರ್ಟರ್ಸ್ ವೀಕ್ಷಿಸಿ ಈ ಭಾಗದಲ್ಲಿಯೇ ಇಷ್ಟೊಂದು ಅತ್ಯುತ್ತಮ ಕ್ವಾಟರಸ್ ನಮ್ಮ ಕೈಯಿಂದಲೇ ಮಾಡಿಸಿದ್ದೇನೆ, ನೀವು ಕೇವಲ ಜನರ ಸೇವೆ ಮಾಡಿ ಸಾಕು ನಿಮಗೇ ಯಾವ ರೀತಿಯ ಸೌಲಭ್ಯ ಬೇಕು ನಾವ್ ಕೊಡ್ತಿವಿ, ಜನರ ದೂರು ಬರದಂತೆ ಗಮನವಹಿಸಬೇಕು ಎಂದು ಸೂಚಿಸಿದರು.
ಮಲ್ಹಾರ ಆಸ್ಪತ್ರೆಗೆ ಭೇಟಿ :

ಮತಕ್ಷೇತ್ರದ ಮಲ್ಹಾರ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು ಅಲ್ಲಿನ ಸ್ವಚ್ಚತೆಗೆ ಶಬ್ಬಾಸ್ ಗಿರಿ ನೀಡಿದರು. ಇದೇ ವೇಳೆ ಆಸ್ಪತ್ರೆಯಲ್ಲಿನ ರಿಜಿಸ್ಟರ್ ಗರ್ಭಿಣಿಯರ ದಾಖಲಾತಿ ಮತ್ತು ಅವರ ಹಿಮೋಗ್ಲೋಬಿನ್ ಪ್ರಮಾಣ ಕುರಿತು ಪರಿಶೀಲಿಸಿದರು.
ಜನರ ಸಮಸ್ಯೆ ಆಲಿಸಿ ಜನರು ಆಸ್ಪತ್ರೆ ಸಿಬ್ಬಂದಿ ವರ್ತನೆ ಸರಿ ಇಲ್ಲವೆಂದು ದೂರಿದಾಗ ಕೆರಳಿದ ಶಾಸಕರು ನೀವು ಎಷ್ಟೇ ಒಳ್ಳಯವರಾಗಿ ಕೆಲಸ ಮಾಡಿದರೂ ಜನರೊಂದಿಗೆ ಉತ್ತಮ ನಡವಳಿಕೆ ಇಲ್ಲಂದ್ರ ನೀವು ಮಾಡಿದ ಕೆಲಸ ವ್ಯರ್ಥ, ಆಸ್ಪತ್ರೆಗೆ ಬರುವವರೊಂದಿಗೆ ಸೌಜನ್ಯದಿಂದ ವರ್ತನೆ ಮಾಡಬೇಕು ಎಂದರು. ನಂತರ ಆಸ್ಪತ್ರೆ ಹಳೆಯದಾಗಿರುವುದರಿಂದ ಹೊಸ ಆಸ್ಪತ್ರೆ ನಿರ್ಮಿಸಬೇಕಾ ಅಥವಾ ಹೆಚ್ಚುವರಿ ಕೋಣೆ ನಿರ್ಮಿಸಿಬೇಕಾ ವರದಿ ಕೊಡಿ ಎಂದು ಡಿ. ಹೆಚ್. ಒ ರವರಿಗೆ ಸೂಚಿಸಿದರು.
9 ಆರೋಗ್ಯ ಕ್ಷೇಮ ಕೇಂದ್ರಗಳ ಸ್ಥಾಪನೆ
ಗುರುಮಠಕಲ್ ಮತಕ್ಷೇತ್ರದ ಬಂದಳ್ಳಿ, ಬೆಳಗುಂದಿ, ಅಚ್ಚೋಲಾ, ಸೈದಾಪುರ, ಮಾಧ್ವಾರ, ಅಜಲಾಪೂರ, ವಂಕಸಂಬ್ರ, ಮೊಗದಂಪೂರ, ಕಂದಕೂರ ಹೀಗೆ 9 ಗ್ರಾಮಗಳಲ್ಲಿ ತಲಾ 65 ಲಕ್ಷ ರೂ. ವೆಚ್ಚದಲ್ಲಿ ಆರೋಗ್ಯ ಕ್ಷೇಮ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತಿದೆ. ಈ ಎಲ್ಲಾ ಕಾಮಗಾರಿ ಟೆಂಡರ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಈ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು.
- ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್.
6 ತಿಂಗಳಿಂದ ನಾಯಿ ಕಡಿತ ಲಸಿಕೆ ಸರಬರಾಜಿಲ್ಲ
ನಾಯಿ ಕಡಿತವೆಂದು ಬರುವ ರೋಗಿಗಳಿಗೆ ಚಿಕಿತ್ಸೆಗಾಗಿ ಸರ್ಕಾರ ಕಳೆದ 6 ತಿಂಗಳಿಂದ ಲಸಿಕೆ ಸರಬರಾಜು ಮಾಡಿಲ್ಲವೆಂದರೆ ಏನ್ರೀ ಅರ್ಥ, ನಾಯಿ ಕಡಿದು ಜನರು ಸತ್ತರೆ ಏನ್ರೀ ಮಾಡ್ತಿರಾ, ಅವರ ಜೀವಕ್ಕೆ ಯಾವ ಬೆಲೆ ಇಲ್ಲವಾ ಎಂದು ಶಾಸಕ ಶರಣಗೌಡ ಕಂದಕೂರ ಆಕ್ರೋಶ ವ್ಯಕ್ತಪಡಿಸಿದರು.
ಗಾಜರಕೋಟ್ ಗ್ರಾಮದಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಳಿ ಬಂದ ಸಮಸ್ಯೆಗೆ ಕೆರಳಿ ಕೆಂಡವಾದ ಶಾಸಕ ಕಂದಕೂರ ಆಸ್ಪತ್ರೆಯಿಂದಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಾ ಗುಪ್ತ ರವರಿಗೆ ಪೋನ್ ಮಾಡಿ ನಾಯಿ ಕಡಿತಕ್ಕೆ ಚಿಕಿತ್ಸೆ ಲಭ್ಯವಿಲ್ಲ, ಕಳೆದ 6 ತಿಂಗಳಿಂದ ಲಸಿಕೆ ಸರಬರಾಜಿಲ್ಲವೆಂದು ಗಮನಕ್ಕೆ ತಂದು ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಹರ್ಷಾಗುಪ್ತ ಕೂಡಲೇ ಕ್ರಮಕೈಗೊಳ್ಳುವುದಾಗಿ ಶಾಸಕರಿಗೆ ಭರವಸೆ ನೀಡಿದರು.
ಎಲ್ಲಾ ಆಸ್ಪತ್ರೆಗಳಿಗೆ ಆರ್. ಒ ಪ್ಲಾಂಟ್
ಗುರುಮಠಕಲ್ ಮತಕ್ಷೇತ್ರದ ಎಲ್ಲಾ ಆಸ್ಪತ್ರೆಗಳಿಗೆ ಸಿ. ಸಿ ರಸ್ತೆ, ಕಾಂಪೌಂಡ್, ಮೂಲಸೌಕರ್ಯ ಜೊತೆಗೆ ಆರ್. ಒ ಪ್ಲಾಂಟ್ಗಳನ್ನು ನಿರ್ಮಿಸಿಕೊಡಲಾಗುವುದು, ಅವಶ್ಯಕತೆ ಇರುವ ಆಸ್ಪತ್ರೆಗಳ ಪಟ್ಟಿ ಮಾಡಿ ಕೊಡಬೇಕು, ಎಲ್ಲಾ ಆಸ್ಪತ್ರೆಗಳ ಅಭಿವೃದ್ಧಿಗೆ ಕೆಕೆಆರ್ಡಿಬಿಯಿಂದ ಸಾಕಷ್ಟು ಅನುದಾನ ನೀಡುವುದಾಗಿ ಶಾಸಕ ಶರಣಗೌಡ ಕಂದಕೂರ ತಿಳಿಸಿದರು.
ಆಸ್ಪತ್ರೆಗಳಲ್ಲಿ ಐ. ವಿ ಪ್ಲೂಡ್ಸ್ ಲಭ್ಯವಿಲ್ಲ
ಕಳೆದ ೪ ತಿಂಗಳಿಂದ ಆಸ್ಪತ್ರೆಗಳಲ್ಲಿ ಐವಿ ಪ್ಲೂಡ್ಸ್ ಲಭ್ಯವಿಲ್ಲ ಹಿಂಗಾದರೆ ಹೇಗೆ ಆಸ್ಪತ್ರೆ ನಡೆಸ್ತೀರಿ, ಇದರಿಂದ ಜನರಿಗೆ ಹೇಗೆ ನೀವು ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯವೆಂದು ಡಿಹೆಚ್ಒ ವಿರುದ್ದ ಶಾಸಕರು ಗರಂ ಆದರು. ಇದಕ್ಕೆ ಸಮಜಾಯಿಸಿ ನೀಡಿದ ಡಿಹೆಚ್ಒ ತಕ್ಷಣದಿಂದಲೇ ಮೇಲಾಧಿಕಾರಿಗಳ ಜೊತೆ ಮಾತನಾಡಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಗುರುಮಠಕಲ್ ಕ್ಷೇತ್ರದ ನಸಲವಾಯಿ, ಬಾಡಿಯಾಳಕ್ಕೆ ಹೊಸ ಆಸ್ಪತ್ರೆ ,ಗುರುಮಠಕಲ್ ಮತಕ್ಷೇತ್ರದ ನಸಲವಾಯಿ ಮತ್ತು ಬಾಡಿಯಾಳ ಗ್ರಾಮದಲ್ಲಿ ಹೊಸ ಆಸ್ಪತ್ರೆಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದ್ದು, ಶೀಘ್ರದಲ್ಲಿಯೇ ಆಸ್ಪತ್ರೆಗೆ ಕ್ರಮ ಕೈಗೊಳ್ಳಲಾಗುವುದು, ಇದರ ಜೊತೆಗೆ ಗುರುಮಠಕಲ್ ಮತಕ್ಷೇತ್ರದ ಎಲ್ಲಾ ಆಸ್ಪತ್ರೆಗಳಿಗೆ ಮೂಲಸೌಕರ್ಯ ಒದಗಿಸಲು ಪಣತೊಟ್ಟಿದ್ದು, ತಾಲೂಕಿನ ಎಲ್ಲಾ ಆಸ್ಪತ್ರೆಗಳ ಮೂಲಸೌಕರ್ಯಗಳ ಪಟ್ಟಿ ಮಾಡಿ ವರದಿ ನೀಡುವಂತೆ ತಾಲೂಕು ಆರೋಗ್ಯ ಅಧಿಕಾರಿ ಹಣಮಂತರೆಡ್ಡಿಯವರಿಗೆ ಸೂಚನೆ ನೀಡಿದರು.
ಕೋಟಗೇರಾ ಫಾರ್ಮಾ ಸಿಸ್ಟ್ ಗೆ ನೊಟೀಸ್
ಮಕ್ಕಳ ನಿಯಂತ್ರಣ ಯೋಜನೆ ಬಗ್ಗೆ ಮಾಹಿತಿ ನೀಡುವಂತೆ ಶಾಸಕರು ಕೇಳಿದಾಗ ಪ್ಯಾರಾಸೆಟಾಮಾಲ್ ಔಷಧಿ ಕೊಡುವುದು, ಅವಧಿ ಮುಗಿಯುವ ಹಂತದಲ್ಲಿರುವ ಮಾತ್ರೆಗಳು ಆಸ್ಪತ್ರೆಗಳಲ್ಲಿಟ್ಟು ದಿನಾಂಕ ಗಮನಿಸದೆ ಮೇಲಾಧಿಕಾರಿಗಳಿಗೆ ವರ್ತಮಾನದ ಕುರಿತು ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ ಕೋಟಗೇರಾ ಫಾರ್ಮಾ ಸಿಸ್ಟ್ ಗೆ ನೊಟೀಸ್ ನೀಡುವಂತೆ ಶಾಸಕ ಕಂದಕೂರ ಸೂಚನೆ ನೀಡಿದರು.
ವರದಿ ಜಗದೀಶ್ ಕುಮಾರ್ ಭೂಮಾ



















