ಬಾಗಲಕೋಟೆ/ಮುಧೋಳ : 12 ನೇ ಶತಮಾನದಲ್ಲಿ ಸಮಾನತೆ ಎಂಬುದು ಅತ್ಯಂತ ಪರಕೀಯದ ವಿಷಯವಾಗಿತ್ತು. ಸಮಾಜ ಸುಧಾರಣೆಗೆ, ಧರ್ಮ ಸುಧಾರಣೆಗೆ ಏನೆಲ್ಲಾ ಕೇಳಲು ಸಾಧ್ಯವಿಲ್ಲ ಎನ್ನುವ ಕಾಲ ಅದಾಗಿತ್ತು. ಅಂತಹ ದಿನಗಳಲ್ಲಿ ಜನಿಸಿ ಬೆಳೆದ ಬಸವಣ್ಣ ಸಕಲರ ಧರ್ಮವನ್ನು ಸಕಲರಿಗಾಗಿ ಒದಗಿಸುವ ದೀಕ್ಷೆಗೆ ಬದ್ಧರಾಗಿದ್ದರು ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯಪಟ್ಟರು.
ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಶ್ರಾವಣ ಸಂಭ್ರಮ 2025 ಶ್ರಾವಣಮಾಸದ ಅಂಗವಾಗಿ ಶುಕ್ರವಾರ ಪ್ರಾರಂಭಗೊಂಡ ಬಸವ ಪುರಾಣ ಕಾರ್ಯಕ್ರಮದ ಸಭೆಯ ಸನ್ನಿಧಿಯಲ್ಲಿ ಮಾತನಾಡುತ್ತಾ ಆಸ್ತಿಕ ಸಮಾಜವನ್ನು ಕಟ್ಟುವ ಕನಸು ಬಸವಣ್ಣನವರದಾಗಿತ್ತು.
ನಡೆ, ನುಡಿ, ಉಣ್ಣುವುದು, ಉಡುವುದು, ಮಾತನಾಡುವುದನ್ನು ಕಲಿಸಿದವ ಬಸವಣ್ಣ.
ಬಸವಣ್ಣ ಹೇಳಿದ ಮಾತು ಮಂತ್ರಗಳನ್ನು ಹೇಳಿದರೆ ಸಾಲದು ಆಚರಣೆಯೊಂದಿಗೆ ಕಾರ್ಯವು ಅನುಷ್ಠಾನಕ್ಕೆ ಬಂದಾಗ ನಮ್ಮ ನಾಡು ಕಲ್ಯಾಣ ಕರ್ನಾಟಕ ಆದೀತು ಎಂದರು.
ಈ ಸಂದರ್ಭದಲ್ಲಿ ಪೂಜ್ಯರಾದ ಸಿದ್ದಯ್ಯ ಸ್ವಾಮಿಗಳು ಹಿರೇಮಠ, ಮಹಾಲಿಂಗಯ್ಯ ಸ್ವಾಮಿಗಳು ಹಿರೇಮಠ, ಆಶ್ರಮದ ಕುಮಾರ್ ಗುರುಪ್ರಸಾದ್ ಸ್ವಾಮಿಗಳು, ಗ್ರಾಮ ಪಂಚಾಯತ್ ಸದಸ್ಯ ಪಿ ಬಿ ಸುನಗಾರ, ಹಿರಿಯ ಜನಪದ ಕಲಾವಿದರಾದ ಮುತ್ತವ್ವ ಲಕ್ಷ್ಮೇಶ್ವರ, ಭೌರಮ್ಮ ಹಿರೇಮಠ, ಅಖಿಲಾಂಡೇಶ್ವರಿ ಸಂಘದ ದ್ರಾಕ್ಷಾಯಿಣಿ ಮುಂತಾದವರು ಉಪಸ್ಥಿತರಿದ್ದರು. ಲೋಕ ನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಎಲ್ ಶಾಮಲಾ ಅವರು ಸ್ವಾಗತಿಸಿ, ವಂದಿಸಿದರು.
- ಕರುನಾಡ ಕಂದ



















