
ಬಳ್ಳಾರಿ / ಕಂಪ್ಲಿ : ತುಂಗಭದ್ರಾ ಜಲಾಶಯದಿಂದ ಭಾನುವಾರ ಸಂಜೆ 1.06ಲಕ್ಷ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಟ್ಟಿರುವುದರಿಂದ ಕಂಪ್ಲಿ-ಕೋಟೆಯಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು, ಕಂಪ್ಲಿ-ಗಂಗಾವತಿ ಸಂಪರ್ಕ ಕಡಿತಗೊಂಡಿದ್ದರೆ, ನದಿ ತೀರದ ಜಮೀನುಗಳು, ದೇವಸ್ಥಾನಗಳು ಹಾಗೂ ಸಂಪರ್ಕ ರಸ್ತೆಗಳು ಜಲಾವೃತಗೊಂಡಿವೆ.
ಕೋಟೆ ಪ್ರದೇಶದ ಹೊಳೆ ಆಂಜನೇಯ ದೇವಸ್ಥಾನ ಜಲಾವೃಗೊಂಡು, ಪ್ರವಾಹದ ನೀರು ಆಂಜಿನೇಯ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿದೆ. ನದಿ ತೀರದ ಸ್ಮಶಾನದ ರಸ್ತೆ, ಮಾಗಾಣಿ ರಸ್ತೆ ಹಾಗೂ ನದಿ ತೀರದ ಕಬ್ಬಿನ ಹಾಗೂ ಬಾಳೆ ತೋಟಗಳು ಜಲಾವೃತಗೊಂಡಿವೆ.

ಇನ್ನು ನದಿ ತೀರದ ಗ್ರಾಮಗಳಾದ ಬೆಳಗೋಡುಹಾಳು, ಸಣಾಪುರ, ಇಟಗಿ ಗ್ರಾಮಗಳ ಜಮೀನುಗಳು ಜಲಾವೃತಗೊಂಡಿದ್ದು ರೈತರು ತೀವ್ರ ಸಂಕಷ್ಟವನ್ನು ಅನುಭವಿಸುವಂತಾಗಿದೆ. ಕಂಪ್ಲಿ ಸಿರುಗಪ್ಪ ಮಾರ್ಗದಲ್ಲಿ ಇಟಗಿ ಗ್ರಾಮದ ಹತ್ತಿರ ಹಿನ್ನೀರು ಬಂದಿರುವುದರಿAದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಂಪ್ಲಿ ಭಾಗದ ಸಂಪರ್ಕ ರಸ್ತೆಗಳು, ಮಾಗಾಣಿ ರಸ್ತೆಗಳು ಜಲಾವೃತಗೊಂಡಿವೆ. ಕಂಪ್ಲಿ ಭಾಗದ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳು ಹಾಗೂ ನೌಕರರ, ವ್ಯಾಪಾರಸ್ಥರು ಮತ್ತೆ ಸುತ್ತು ಬಳಸಿ ಗಂಗಾವತಿಗೆ ತೆರಳಬೇಕಾಗಿದೆ.
ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮೇಲೆ ನೀರು ಬಂದಿರುವುದರಿಂದ ವಾಹನ ಹಾಗೂ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಸೇತುವೆ ಆ ಭಾಗದಲ್ಲಿರುವ ಕಂಪ್ಲಿ-ಕೋಟೆ ಪ್ರದೇಶಗಳ ಜಮೀನುಗಳಿಗೆ ರೈತರು ವಿಜಯನಗರ ಜಿಲ್ಲೆಯ ಬುಕ್ಕಸಾಗರ ಹತ್ತಿರದ ಕಡೇಬಾಗಿಲು ಮಾರ್ಗದಿಂದ ಸುತ್ತು ಬಳಸಿ ಸಂಚರಿಸಬೇಕಾಗಿದೆ.ನಮ್ಮ ಭಾಗದಲ್ಲಿ ಮಳೆ ಇಲ್ಲದಿದ್ದರೂ ಸಹಿತ ಹೊಳೆ ಮಾತ್ರ ಮೈದುಂಬಿ ಹರಿಯುತ್ತಿದ್ದು, ರೈತರು ಸೇರಿದಂತೆ ಸಾರ್ವಜನಿಕರು ತೀವ್ರವಾದ ತೊಂದರೆಯನ್ನು ಅನುಭವಿಸುವಂತಾಗಿದೆ.
ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಂಡಿದ್ದು, ಉತ್ತರ,ಕಲ್ಯಾಣ, ಮಧ್ಯ ಕರ್ನಾಟಕ ಸೇರಿದಂತೆ ಆಂದ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ತೆರಳಬೇಕಾದ ಪ್ರಯಾಣಿಕರು ಸುತು ಬಳಸಿ ಸಂಚರಿಸಬೇಕಾಗಿದೆ. ಒಟ್ನಲ್ಲಿ ನದಿಗೆ ನೀರು ಉಕ್ಕಿದಾಗ ಸೇತುವೆ ಮುಳುಗಡೆಯೊಂದಿಗೆ ದುರಸ್ಥಿಗೆ ಬರುವುದು ಸಾಮಾನ್ಯವಾಗಿದೆ. ಆದರೆ, ಬಹುದಿನದ ಹೊಸ ಸೇತುವೆ ಬೇಡಿಕೆ ಕನಸಾಗಿಯೇ ಉಳಿದಿದೆ.
ಅಧಿಕಾರಿಗಳ ಭೇಟಿ : ತುಂಗಭದ್ರಾ ಜಲಾಶಯದಿಂದ ಅಧಿಕ ಪ್ರಮಾಣದ ನೀರನ್ನು ಬಿಟ್ಟಿರುವ ಹಿನ್ನೆಲೆಯಲ್ಲಿ ಕಂಪ್ಲಿ ಕೋಟೆಯಲ್ಲಿ ನದಿ ಮೈದುಂಬಿ ಹರಿಯುತ್ತಿದ್ದು, ಸಂಪರ್ಕ ಸೇತುವೆ ನೀರಿನಲ್ಲಿ ಮುಳುಗಿದ್ದು, ಸಂಚಾರ ಸ್ಥಗಿತಗೊಂಡಿದ್ದು, ಸ್ಥಳಕ್ಕೆ ಪ್ರಭಾರಿ ತಹಸಿಲ್ದಾರ್ ನರಸಪ್ಪ, ಪಿಐ ಕೆ.ಬಿ.ವಾಸುಕುಮಾರ್,ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ನದಿಯಲ್ಲಿ ಪ್ರವಾಹ ಇರುವುದರಿಂದ ಯಾರೂ ನದಿಗೆ ಇಳಿಯಬಾರದು, ಮೀನುಗಾರರು ಮೀನಿ ಹಿಡಿಯಲು ನದಿಗೆ ತೆರಳಬಾರದು ಎಂದು ಸೂಚಿಸಿದರಲ್ಲದೆ, ನದಿ ತೀರದ ಗ್ರಾಮಗಳಲ್ಲಿ ಹಾಗೂ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪ್ರಭಾರಿ ತಹಸಿಲ್ದಾರ್ ನರಸಪ್ಪ, ಪಿಐ ಕೆ.ಬಿ.ವಾಸುಕುಮಾರ್ ತಿಳಿಸಿದರು. ಸಂಭವನೀಯ ಪ್ರವಾಹ ನುಗ್ಗುವ ಕಂಪ್ಲಿ ಕೋಟೆಯ ಮೀನುಗಾರರ ಕಾಲೋನಿಯಲ್ಲಿ ಮುನ್ನೆಚ್ಚರಿಕೆ ವಹಿಸಿದ್ದು, ಪ್ರವಾಹ ಅಧಿಕವಾದರೆ, ಮೀನುಗಾರರ ಕುಟುಂಬಗಳನ್ನು ಸ್ಥಳಾಂತರ ಮಾಡಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ವರದಿ : ಜಿಲಾನಸಾಬ್ ಬಡಿಗೇರ



















