ಬಳ್ಳಾರಿ / ಕಂಪ್ಲಿ :2014ನೇ ಸಾಲಿನಲ್ಲಿ ಕಂಪ್ಲಿ ಪಟ್ಟಣದ ಎಂ.ಡಿ ಕ್ಯಾಂಪ್ ನಿವಾಸಿ ದೌಲಾಸಾಬ್ (ವಯಸ್ಸು 30), ತಂದೆ ಹುಸೇನ್ ಸಾಬ್ ಮೇಲೆ ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿ ಮೇಲಿನ ಅತ್ಯಾಚಾರ ಆರೋಪದಲ್ಲಿ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 366(ಎ), 506, 376, 114 ಮತ್ತು ಪಾಕ್ಸೋ ಕಾಯ್ದೆ 4 & 6, ಹಾಗು ಎಸ್ಸಿ/ಎಸ್ಟಿ (ಅತ್ಯಾಚಾರ, ಭಯೊತ್ಪಾದನೆ) ಕಾಯ್ದೆಯ 3(2)(5) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿಗೆ 2014 ರಿಂದ 2023 ರವರೆಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾದ ನಂತರ ಈತ ಪುನಃ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದು, 2025 ಮೇ 10ರಂದು ಶಿಕಾರಿಹಟ್ಟಿ ಕಾಲೋನಿಯ ಬಾಲಕನ ಮೇಲೆ ಹಲ್ಲೆ ಮಾಡಿದ ಪ್ರಕರಣ ಕೂಡಾ ದಾಖಲಾಗಿತ್ತು.
ಆತನಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲದ ಹಿನ್ನೆಲೆಯಲ್ಲಿ, ಸಾರ್ವಜನಿಕ ಶಾಂತಿ ಮತ್ತು ಸಮಾಜದ ಭದ್ರತೆಗೆ ಭಂಗ ಆಗದಂತೆ ನೋಡಿಕೊಳ್ಳಲು, ಕರ್ನಾಟಕ ಪೊಲೀಸ್ ಕಾಯ್ದೆ 1963ರ ಸೆಕ್ಷನ್ 55(ಎ) ಅಡಿಯಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ದೌಲಾಸಾಬ್ ಅವರನ್ನು ಬಳ್ಳಾರಿ ಜಿಲ್ಲೆಯಿಂದ ರಾಮನಗರ ಜಿಲ್ಲೆಯ ಕನಕಪುರ ಪಟ್ಟಣಕ್ಕೆ 3 ತಿಂಗಳ ಕಾಲ ಗಡಿಪಾರು ಮಾಡಲಾಗಿದೆ.
ಈತನನ್ನು ಕನಕಪುರ ಪೊಲೀಸ್ ಠಾಣೆಯ ಅಧೀನಕ್ಕೆ ಹಸ್ತಾಂತರಿಸಲಾಗಿದೆ ಎಂದು ಹಾಗೂ ಯುವಕರು ಕಾನೂನಿನ ಚೌಕಟ್ಟಿನಲ್ಲಿರಬೇಕು ಯಾವುದೇ ಅಪರಾಧವನ್ನು ಮಾಡಬಾರದು ಎಂದು ಕಂಪ್ಲಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















