ಬಳ್ಳಾರಿ / ಕಂಪ್ಲಿ: ಸೂಗೂರು ಡಿಸ್ಟಿಬ್ಯೂಟರ್ನ ಇಟಗಿ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸದ ಹಿನ್ನಲೆ ಈ ಭಾಗದ ರೈತರಿಗೆ ತುಂಬ ಸಮಸ್ಯೆಯಾಗಿದ್ದು ಇದರಿಂದ ಬೆಳೆಯುವ ಬೆಳೆಯು ಕುಂಠಿತವಾಗುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಂಪ್ಲಿ ತಾಲೂಕು ಅಧ್ಯಕ್ಷ ವಡ್ರು ವಿರೇಶ ಆರೋಪಿಸಿದರು.
ತಾಲೂಕಿನ ಎಮ್ಮಿಗನೂರು ಗ್ರಾಮದ ಇಟಗಿ ನಾಲೆ ಬಳಿಯಲ್ಲಿ ರೈತರು ಪತ್ರಕರ್ತರೊಂದಿಗೆ ಮಾತನಾಡಿ, ಮಲೆನಾಡು ಭಾಗದಲ್ಲಿ ಸಾಕಷ್ಟು ಮಳೆಯಾದ ಪರಿಣಾಮ ಜಲಾಶಯದಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಪೋಲಾಗುತ್ತಿದೆ. ಆದರೆ, ಇಲ್ಲಿನ ರೈತರ ನಾಲೆಗಳಿಗೆ ನೀರು ಇಲ್ಲದಂತಾಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ರೈತರ ಹೊಲಗಳಿಗೆ ನೀರಿಲ್ಲಂತಾಗಿದೆ. ಈಗಾಗಲೇ ಬೆಳೆದ ಭತ್ತ ಸೇರಿದಂತೆ ನಾನಾ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ಇದರಿಂದ ರೈತರು ಸಂಪೂರ್ಣವಾಗಿ ಸಂಕಷ್ಟ ಎದುರಿಸುವಂತಾಗಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಏನು ಪ್ರಯೋಜನೆ ಇಲ್ಲದಂತಾಗಿದೆ. ಇನ್ನೂ ಕೆಲ ರೈತರು ನೀರಿಲ್ಲದ ಪರಿಣಾಮ ಬೆಳೆಗಳನ್ನು ಬೆಳೆಯುವಕ್ಕೆ ಆಗುತ್ತಿಲ್ಲ. ಇಲ್ಲಿನ ರೈತರ ತಾಳ್ಮೆ ಪರೀಕ್ಷಿಸಬೇಡಿ. ಅಧಿಕಾರಿಗಳ ಎಚ್ಚೆತ್ತು ಆ.10ರ ಒಳಗಾಗಿ ನಾಲೆಗೆ ನೀರು ಹರಿಸದಿದ್ದರೆ, ಉಗ್ರ ಹೋರಾಟ ಮಾಡಲಾಗುವುದು ಎಂದರು.
ಈ ವೇಳೆ ರೈತ ಮುಖಂಡರಾದ ಅಡಿವೆಯ್ಯಸ್ವಾಮಿ, ಕಾಗಿ ಈರಣ್ಣ, ಟಿ.ಜಡೆಪ್ಪ, ಕಾಸಿಂಸಾಬ್, ಬಿ.ಜಡೆಪ್ಪ, ಶಿವರುದ್ರಪ್ಪ, ಲಿಂಗಪ್ಪ ಸೇರಿದಂತೆ ರೈತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















