ಬಳ್ಳಾರಿ / ಕಂಪ್ಲಿ : ಹಾಲಿನಂತೆ ಮನಸ್ಸಿರುವ ಹಾಲುಮತ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಸದಾ ಸಹಕರಿಸಲಾಗುವುದು ಎಂದು ಶಾಸಕ ಜೆ. ಎನ್. ಗಣೇಶ ಹೇಳಿದರು.
ಪಟ್ಟಣದಲ್ಲಿ ಹಾಲುಮತ ಸಮಾಜದಿಂದ ಶ್ರಾವಣಮಾಸದ ಪ್ರಯುಕ್ತ ಆಯೋಜಿಸಿದ್ದ ಅದ್ದಪ್ಪ ಬೀರಲಿಂಗೇಶ್ವರ ದೇವರ ಗಂಗೆಸ್ಥಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಸಮಾಜವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ. ನಾಡಿನ ಸಂಸ್ಕೃತಿ, ಸಂಪ್ರದಾಯಗಳು ಉಳಿಸಿಕೊಂಡು ಬರಲಾಗುತ್ತಿದೆ. ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ಕೊಡಿಸಿ, ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.
ಇಲ್ಲಿನ ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ತಟದಲ್ಲಿ ಗಂಗೆಪೂಜೆ ಸಲ್ಲಿಸಿ ನಂತರ ಆರಂಭಗೊಂಡು ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ, ಇಲ್ಲಿನ ನಡುವಲ ಮಸೀದಿ, ಡಾ. ರಾಜಕುಮಾರ ರಸ್ತೆ, ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತದ ಮೂಲಕ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸಮಾವೇಶಗೊಂಡಿತು. ಈ ಮೆರವಣಿಯಲ್ಲಿ ಸುಮಂಗಲಿಯರ ಕುಂಭ, ಕಳಸ, ಡೊಳ್ಳು ಕುಣಿತ, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮೆರಗು ನೀಡಿದರು. ಇಲ್ಲಿನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಶ್ರದ್ಧೆಯಿಂದ ಜರುಗಿದವು.
ಈ ಸಂದರ್ಭದಲ್ಲಿ ಹಾಲುಮತ ಸಮಾಜದ ಅಧ್ಯಕ್ಷ ಕೆ.ವಸಂತಕುಮಾರ, ಉಪಾಧ್ಯಕ್ಷ ಕುರಿ ಸಿದ್ದಪ್ಪ, ಖಜಾಂಚಿ ಬಳ್ಳಾರಿ ಶೇಖರ, ಮುಖಂಡರಾದ ಕುರಿ ಹುಸೇನಪ್ಪ, ಕೆ.ಯಮನೂರಪ್ಪ, ಬಿ.ಕೆ.ದೇವೇಂದ್ರ, ಕೇಧರನಾಥ, ವೆಂಕಟೇಶ, ಮಂಜು, ಬಳ್ಳಾರಿ ಲಕ್ಷ್ಮಣ, ರಾಜಶೇಖರ, ಪೆದ್ದಣ್ಣ, ಜಿ.ವಿರುಪಣ್ಣ, ಸುಣಗಾರ ರಾಘು ಸೇರಿದಂತೆ ಮಹಿಳೆಯರ, ಮಕ್ಕಳು ಹಾಗೂ ಸಮಾಜದವರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















