ಬಳ್ಳಾರಿ / ಕಂಪ್ಲಿ: ಮಲೆನಾಡಿನಲ್ಲಿ ಮಳೆರಾಯನ ಆರ್ಭಟದಿಂದ ತ್ರಿವಳಿ ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಭರ್ತಿಯಾದ ಜಲಾಶಯದಿಂದ 1 ಲಕ್ಷ ಅಧಿಕ ಕ್ಯೂಸೆಕ್ ನೀರನ್ನು ಗೇಟ್ಗಳ ಮೂಲಕ ನದಿಗೆ ಹರಿಸಿದ ಹಿನ್ನಲೆ ಪಟ್ಟಣದ ಕಂಪ್ಲಿ-ಕೋಟೆಯ ಸೇತುವೆಗೆ ಮುಳುಗಡೆ ಭೀತಿ ಎದುರಾಗಿದೆ.
ಜಲಾಶಯದ ಮೇಲ್ಭಾಗದಲ್ಲಿ ಮಳೆಯ ನರ್ತನದಿಂದ ತುಂಗಭದ್ರಾ ಜಯಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರಿಂದ ಜಲಾಶಯವು ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿದೆ. ಜಲಾಶಯದಿಂದ ನೀರು ಬಿಟ್ಟ ಹಿನ್ನಲೆ ಕಂಪ್ಲಿ-ಕೋಟೆಯ ಸೇತುವೆ ಮೇಲೆ ನೀರು ಹರಿಯಲು ಇನ್ನೇನು ಕ್ಷಣಗಣನೇ ಆರಂಭಗೊಂಡಿದೆ.
ತುಂಗಾಭದ್ರಾ ನದಿಗೆ ಹೆಚ್ಚಿನ ಮಟ್ಟದಲ್ಲಿ ನೀರು ಹರಿಸಿದ್ದು, ನದಿಗೆ ಬಂದ ಸಾಕಷ್ಟು ಪ್ರಮಾಣದ ನೀರಿನಿಂದ ಸೇತುವೆಗಳು ಮುಳುಗಡೆ ಹಂತಕ್ಕೆ ಬಂದಿವೆ. ನದಿ ನೀರು ರೈತರ ಹೊಲ ಗದ್ದೆಗಳಿಗೆ ನುಗ್ಗುತ್ತಿದ್ದು, ಇನ್ನಷ್ಟು ನೀರು ನದಿಗೆ ಹರಿದರೆ, ರೈತರ ಹೊಲ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸುವ ಮುನ್ಸೂಚನೆ ಕಾಣುವಂತಾಗಿದೆ. ಕಂಪ್ಲಿ-ಕೋಟೆ ಭಾಗದ ರಾಮಸಾಗರ ಮಾಗಣಿ ರಸ್ತೆ ಬಳಿಯಲ್ಲಿರುವ ಬಾಳೆ, ಭತ್ತ, ಕಬ್ಬು ಸೇರಿದಂತೆ ರೈತರ ಬೆಳೆಗಳಿಗೆ ನೀರು ನುಗ್ಗುವ ಆತಂಕ ಮನೆ ಮಾಡಿದೆ. ಕಂಪ್ಲಿ-ಕೋಟೆ, ಸಣಾಪುರ, ಇಟಗಿ, ಮುದ್ದಾಪುರ ಪ್ರದೇಶದ ಸಣ್ಣ ಸೇತುವೆಗಳು ಜಲಾವೃತವಾಗುವ ಸಂಭವವಿದೆ. ಹೊಲ ಗದ್ದೆಗಳಲ್ಲಿ ಅಳವಡಿಸಿದ್ದ ಮೋಟರ್ಗಳು ನೀರಿನಲ್ಲಿ ಮುಳುಗಡೆಯಾಗಿವೆ. ಇನ್ನೂ ಕೆಲ ರೈತರು ಅಧಿಕ ನೀರು ಹರಿಸುವ ಹಿನ್ನಲೆ ಮೋಟರ್ಗಳನ್ನು ಸ್ಥಳಾಂತರಿಸಿದರು. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ. ಇದೇ ತಿಂಗಳ 5ರಂದು ಸೇತುವೆ ಮೇಲೆ ನೀರು ಹರಿದು ಸಂಪರ್ಕ ಕಡಿತವಾಗಿತ್ತು. ಆದರೆ, ಈಗ ಮತ್ತೇ ನದಿಯಲ್ಲಿ ಹೆಚ್ಚಿನ ಪ್ರಮಾಣ ನೀರು ಹರಿದು ಬಂದ ಪರಿಣಾಮ ಇಲ್ಲಿನ ಸೇತುವೆ ಮುಳುಗಡೆಯತ್ತ ಸಾಗಿದ್ದು, ಈಗಾಗಲೇ ಸಂಜೆ ನಂತರ ವಾಹನ ಸಂಚಾರ ಸ್ಥಗಿತಗೊಳಿಸಿ, ಪಾದಚಾರಿಗಳು ಸಂಚರಿಸಲು ಅನುವು ಮಾಡಲಾಗಿದೆ. ಇನ್ನೇನು ಇನ್ನಷ್ಟು ಕ್ಯೂಸೆಕ್ ನೀರು ಬಂದರೆ, ಸೇತುವೆ ಮುಳುಗಡೆಯಾಗುವುದು ಶತಸಿದ್ಧ. ತುಂಗಭದ್ರ ಜಲಾಶಯ ಮೈದುಂಬಿ, ನದಿ ಹಾಗೂ ಕಾಲುವೆಗಳಲ್ಲಿ ನೀರು ಹರಿಯುತ್ತಿರುವುದು ರೈತರ ಹಾಗೂ ಜನರಲ್ಲಿ ಸಂತೋಷ ಮಾಡಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ನದಿ ಪಾತ್ರದ ಜನರು ಪ್ರವಾಹ ಭೀತಿಯಲ್ಲಿದ್ದಾರೆ. ತುಂಗ, ಭದ್ರ ಜಲಾಶಯಗಳು ಸಂಪೂರ್ಣವಾಗಿ ತುಂಬಿ, ನದಿಗೆ ನೀರು ಬಿಟ್ಟ ಹಿನ್ನಲೆ ತುಂಗಭದ್ರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಈಗ ತುಂಗಭದ್ರ ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಏರಿಕೆ ಕಾಣುತ್ತಿದ್ದು, ಮುಂಜಾಗೃತ ಕ್ರಮವಾಗಿ ನದಿಗೆ ಸಾಕಷ್ಟು ನೀರು ಹರಿಸಿದ್ದು, ನದಿ ಪಾತ್ರದಲ್ಲಿ ನೀರಿನ ಪ್ರವಾಹ ಉಂಟಾಗಿದೆ. ಒಂದು ಕಡೆ ರೈತರಿಗೆ ಹರ್ಷದಾಯಕವಾದರೆ, ಮತ್ತೊಂದು ಕಡೆ ನದಿ ಪಾತ್ರದ ಜನರಿಗೆ ಸಂಕಷ್ಟ ಎದುರಾದಂತಾಗಿದೆ.
ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟಿದರಿಂದ ತಹಶೀಲ್ದಾರ್ ಜೂಗಲ್ ಮಂಜುನಾಥ ನಾಯಕ ಸೇರಿದಂತೆ ವಿವಿಧ ಅಧಿಕಾರಿಗಳು ಕಂಪ್ಲಿ-ಕೋಟೆಯ ಸೇತುವೆಗೆ ಭೇಟಿ ನೀಡಿ, ಪರಿಶೀಲಿಸಿದರು. ನದಿಯಲ್ಲಿ ನೀರು ಉಕ್ಕಿ ಹರಿದು ಬರುತ್ತಿದ್ದು, ನದಿ ಪಾತ್ರ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು, ನೀರಿನಿಂದ ಸಾರ್ವಜನಿಕರು ದೂರ ಉಳಿಯಬೇಕೆಂದು ಸೂಚಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್



















