
ಬಳ್ಳಾರಿ / ಕಂಪ್ಲಿ : ಮತ್ತೆ ಬೀದಿ ನಾಯಿ, ಬಿಡಾಡಿ ದನಗಳ ಹಾವಳಿ ಮರುಕಳಿಸಿದೆ. ಇಡೀ ಊರನ್ನೇ ತಮ್ಮ ಸಾಮ್ರಾಜ್ಯ ಮಾಡಿಕೊಂಡಿದ್ದು ನಾಗರಿಕರಲ್ಲಿ ನಡುಕ ಹುಟ್ಟಿಸಿವೆ. ಯಾವ ಕ್ಷಣದಲ್ಲಿ ದಾಳಿ ನಡೆಸುತ್ತವೆ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ.
ಕಳೆದ ನಾಲ್ಕೈದು ತಿಂಗಳಿನಿಂದ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಿಗದಷ್ಟು ಏರಿಕೆ ಕಾಣುತ್ತಿದೆ. ಯಾವ ಬೀದಿಯಲ್ಲಿ ನೋಡಿದರೂ ನಾಯಿಗಳು, ದನಗಳು ಎಂದು ಪರಿಸ್ಥಿತಿ ಬಂದಿದೆ.
ನಗರದ ಮುಖ್ಯ ರಸ್ತೆ ಸೇರಿ ನಗರದ ಎಲ್ಲಾ ಬಡಾವಣೆಗಳಲ್ಲೂ ಬೀದಿ ನಾಯಿಗಳು ಎಲ್ಲಾ ರಸ್ತೆ, ಮಟನ್ ಮಾರುಕಟ್ಟೆ, ಬಸ್ ನಿಲ್ದಾಣ, ಎಪಿಎಂಸಿ ಆವರಣದಲ್ಲಿ ಹೇಳುವಂತಿಲ್ಲ ಎನ್ನುವಂತಾಗಿದೆ.
ಬಿಡಾಡಿ ದನಗಳ ಸಂಖ್ಯೆ ಬಗ್ಗೆ ಪುರಸಭೆ ಅಧಿಕಾರಿಗಳ ಬಳಿಯೂ ನಿಖರ ಮಾಹಿತಿ ಇಲ್ಲ. ದೂರುಗಳು ಹೆಚ್ಚಾದ ಸಮಯದಲ್ಲಿ ಮಾತ್ರ ಪುರಸಭೆ ಅಧಿಕಾರಿಗಳು ಬಿಡಾಡಿ ದನಗಳ ಮಾಲೀಕರಿಗೆ ಎಚ್ಚರಿಕೆ ನೀಡುವ ಹಾಗೂ ಕೆಲವು ದನಗಳನ್ನು ಹಿಡಿದು ಸಾಗಿಸುವ ನೆಪಮಾತ್ರದ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ತಾತ್ಕಾಲಿಕವಾಗಿ ಸ್ಪಂದಿಸುವುದು ಸಾಮಾನ್ಯವಾಗಿದೆ. ಹೀಗಾಗಿ, ರಸ್ತೆಗಳಲ್ಲಿ ಬಿಡಾಡಿ ದನ, ಕರುಗಳ ‘ಬಿಡಾರ’ ಮತ್ತೆ ಆರಂಭವಾಗುತ್ತದೆ. ಆದರೆ ಶಾಶ್ವತ ಪರಿಹಾರಕ್ಕೆ ಮಾತ್ರ ಮುಂದಾಗುತ್ತಿಲ್ಲ.
ಪಟ್ಟಣದ ಒಂದಲ್ಲ ಒಂದು ಕಡೆ ನಿತ್ಯವೂ ಬಿಡಾಡಿ ದನ, ನಾಯಿಗಳ ದಾಳಿ ನಡೆಯುತ್ತಿವೆ. ಇಂತಹ ಘಟನೆಗಳಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















