ಬಳ್ಳಾರಿ / ಕಂಪ್ಲಿ : ತಾಲೂಕಿನ ನಂ.10 ಮುದ್ದಾಪುರ ಗ್ರಾಮದಲ್ಲಿ ಸಾವಿರಾರು ಭಕ್ತರ ಆರಾಧ್ಯ ದೈವ ಶ್ರೀ ರಂಗನಾಥಸ್ವಾಮಿ ಗಂಗೆಸ್ಥಳ ಮೆರವಣಿಗೆ ಹಾಗೂ 25ನೇ ವರ್ಷದ ವಾರ್ಷಿಕೋತ್ಸವ ಸಡಗರ ಸಂಭ್ರಮದಿಂದ ಬುಧವಾರ ನಡೆಯಿತು.
ಇಲ್ಲಿನ ಮುದ್ದಾಪುರ ಗ್ರಾಮದಲ್ಲಿ ನೆಲೆಸಿ, ಪ್ರಾಚೀನ ಕಾಲದ ಇತಿಹಾಸ ಹೊಂದಿದ ರಂಗನಾಥಸ್ವಾಮಿಯನ್ನು ಸಹಸ್ರಾರು ಭಕ್ತರು ದಿನನಿತ್ಯದಲ್ಲಿ ಆರಾಧಿಸುತ್ತಾ ಬಂದಿದ್ದಾರೆ. ಸ್ವಾಮಿಯ ಕೃಪೆಗೆ ಪಾತ್ರರಾದ ಭಕ್ತರು ಇದೇ ಮೊದಲ ಬಾರಿಗೆ ಗಂಗೆಸ್ಥಳ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಮಾಡಿದರು. ಇಲ್ಲಿನ ಗೌರಮ್ಮ ಕೆರೆ ಬಳಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಆರಂಭಿಸಿ, ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿ, ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಸಮಾವೇಶಗೊಂಡಿತು. ಇಲ್ಲಿನ ಮೆರವಣಿಗೆಯಲ್ಲಿ ತನುಗೊಡ, ಮಹಿಳೆಯರ ಕಳಸ, ಡೊಳ್ಳು ಕುಣಿತ, ತಾಷಾರಾಂಡೋಲ್ ಸೇರಿದಂತೆ ನಾನಾ ಕಲಾ ಪ್ರಕಾರಗಳು ಮೆರಗು ನೀಡಿದವು. ಇಲ್ಲಿನ ದೇವಸ್ಥಾನದಲ್ಲಿ ಮಹಾಮಂಗಳಾರತಿ ಸೇರಿದಂತೆ ವಿಶೇಷ ಧಾರ್ಮಿಕ ಕೈಂಕಾರ್ಯಗಳು ಶ್ರದ್ಧೆಯಿಂದ ನೆರವೇರಿದವು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಯಾದವ ಸಮಾಜದ ಮುಖಂಡರು, ಯುವಕರು, ಮಹಿಳೆಯರು ಸೇರಿದಂತೆ ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















