ವಿಜಯನಗರ ಜಿಲ್ಲೆ ಕೂಡ್ಲಿಗಿ : ಶ್ರೀಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳನ್ನು , ಸರ್ವರೂ ಸೌಹಾರ್ದತೆಯಿಂದ ಆಚರಿಸುವ ಮೂಲಕ ಸಮಾಜದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ ತಿಳಿಸಿದರು. ಅವರು ಪಟ್ಟಣದ ಪ್ರವಾಸಿ ಮಂದಿರಲ್ಲಿ ಜರುಗಿದ ಶ್ರೀಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿ ಶ್ರೀಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ತರುವ ಮೆರವಣಿಗೆ ಹಾಗೂ ಶ್ರೀಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆ ಮತ್ತು ಮೂರ್ತಿ ವಿಸರ್ಜನೆ ಮಾಡುವ ವೇಳೆಯಲ್ಲಿ , ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಆಯೋಜಕರು ಅಗತ್ಯ ಮುಂಜಾಗ್ರತೆ ಅನುಸರಿಸಬೇಕು ಬೆಂಕಿ ,ನೀರು , ವಿದ್ಯುತ್ ಅವಘಡಗಳು, ಕೋಮು ಗಲಭೆಗಳು ಗುಂಪು ಘರ್ಷಣೆಗಳು , ಯಾವುದೇ ಅಹಿತಕರ ಘಟನೆಗಳು ಜರುಗದಂತೆ ತೀವ್ರ ಎಚ್ಚರವಹಿಸಬೇಕಿದೆ ಹಬ್ಬ ಸರಡಗರ ಸಂಭ್ರಮದಿಂದ ಶಾಂತಿಯುತವಾಗಿ ಜರುಗಿಸುವ ಮೂಲಕ , ಸಾರ್ವಜನಿಕರು ಆಯೋಜಕರು ನಾಗರೀಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದರು.

ಇಲಾಖೆಯ ನಿಯಮಾವಳಿಗಳನ್ನು , ಆಯೋಜಕರು ಖಡ್ಡಾಯವಾಗಿ ಪಾಲಿಸತಕ್ಕದ್ದು ಎಂದರು. ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನೆ ಮಾತನಾಡಿ , ಶಾಂತಿ ಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು , ಇಲಾಖೆ ಸಾಕಷ್ಟು ಸಿಬ್ಬಂದಿ ನೇಮಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದರು. ತಹಶೀಲ್ದಾರರಾದ ವಿ.ಕೆ. ನೇತ್ರಾವತಿ ಮಾತನಾಡಿದರು. ಸಿಪಿಐ ಪ್ರಹ್ಲಾಸ್ ಆರ್ ಚನ್ನಗಿರಿ , ಪಿಎಸ್ಐ ಸಿ.ಪ್ರಕಾಶ್. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ ಸೇರಿದಂತೆ , ಪ ಪಂ ಸದಸ್ಯರು, ಜನಪ್ರತಿನಿಧಿಗಳು, ಗಣ್ಯರು , ಪ.ಪಂ ಮುಖ್ಯಾಧಿಕಾರಿ , ಜೆಸ್ಕಾಂ ಅಧಿಕಾರಿ , ಅಧಿಕಾರಿಗಳು ವೇದಿಕೆಯಲ್ಲಿದ್ದರು. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಯ , ಶ್ರೀಗಣೇಶೋತ್ಸವ ಸಮಿತಿಗಳ ಆಯೋಜಕರು , ಹಿಂದೂ ಮುಸಲ್ಮಾನ್ ಸಮುದಾಯದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು , ವಿವಿಧ ಜನಾಂಗಗಳ ಸಮಾಜದ ಮುಖ್ಯಸ್ಥರು , ಸಮುದಾಯಗಳ ಮುಖಂಡರು ,ವಿವಿಧ ಪಕ್ಷಗಳ ಪ್ರಮುಖರು, ನಾಗರೀಕರು , ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ



















