ಬಳ್ಳಾರಿ / ಸಿರುಗುಪ್ಪ : ನಗರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟು ಹೋಗಿದ್ದ ರಸ್ತೆಯಲ್ಲಿ ಗುಂಡಿಗಳು ಹೊಂಡಗಳಾಗಿ ನಿರ್ಮಾಣವಾಗಿವೆ. ಗುಂಡಿಯಲ್ಲಿ ಭತ್ತದ ಸಸಿ ನಾಟಿ ಮಾಡಿ ಸಾರ್ವಜನಿಕರು ಇದು ರಸ್ತೆ ಅಲ್ಲ ಗದ್ದೆ ಅನ್ನುವ ರೀತಿ ಯಾಗಿ ಹೆದ್ದಾರಿಗಳು ಮಾರ್ಪಟ್ಟಿವೆ.
ಸಿರುಗುಪ್ಪ ನಗರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟು ಹೋಗಿದ್ದ ರಸ್ತೆಯಲ್ಲಿ ಗುಂಡಿಗಳು ಹೊಂಡಗಳಾಗಿ ನಿರ್ಮಾಣವಾಗಿವೆ
ವಾಹನ ಸವಾರರ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಬೀದರ್- ಜೇವರ್ಗಿಯಿಂದ ಚಾಮರಾಜನಗರಕ್ಕೆ ಸಿರುಗುಪ್ಪ ನಗರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆಯು ಶೋಚನೀಯ ಸ್ಥಿತಿಯಲ್ಲಿದ್ದು, ಸಾರ್ವಜನಿಕರು, ವಾಹನ ಸವಾರರು ನಿತ್ಯ ನರಕ ಅನುಭವಿಸುವಂತಾಗಿದೆ.
ಕೆ.ಕೆ.ಆರ್.ಟಿ.ಸಿ ಬಸ್ನ ಚಕ್ರ ರಸ್ತೆಯ ಕೆಸರುಗುಂಡಿಯಲ್ಲಿ ಹೂತುಹೋಗಿ ಚಾಲಕ, ನಿರ್ವಾಹಕ, ಪ್ರಯಾಣಿಕರು ಪರದಾಡಿದರು. ಭತ್ತ ತುಂಬಿದ ಟ್ರಾಕ್ಟರ್ ತಗ್ಗು ಗುಂಡಿಯಲ್ಲಿ ಸಿಲುಕಿದ್ದು ಕ್ರೇನ್ ಸಹಾಯದಿಂದ ತೆರವುಗೊಳಿಸಿದರು. ನೀರಿನ ಟ್ಯಾಂಕ್ ಮತ್ತು ಐಸ್ ಕ್ರಿಂ ವಾಹನ ರಸ್ತೆ ಮೇಲೆ ಉಳುರುಳಿದ್ದು ಟ್ರಾಫಿಕ್ ಕಿರಿಕಿರಿಯನ್ನು ಪ್ರಯಾಣಿಕರು ಅನುಭವಿಸಿದರು. ಸಾರ್ವಜನಿಕರ ಸಹಾಯದಿಂದ ತೆರವುಗೊಳಿಸಲಾಯಿತು. ನಾಗರಿಕರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿ ಹತಾಶೆ ವ್ಯಕ್ತಪಡಿಸಿ ರಸ್ತೆ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.
ರಸ್ತೆ ಅಭಿವೃದ್ಧಿಗೆ ನಾಗರಿಕರು ಹಲವು ಬಾರಿ ಮನವಿ ಮಾಡಿದ್ದರೂ ಸ್ಪಂದಿಸದ ಕಾರಣ ಗುಂಡಿಗಳು ಬಾಯ್ದೆರೆದು ಕುಳಿತಿವೆ. ನಿರಂತರ ಮಳೆಗೆ ಡಾಂಬರು ಸಂಪೂರ್ಣ ಕಿತ್ತುಹೋಗಿದ್ದು ಮಣ್ಣಿನ ರಸ್ತೆಯಾಗಿ ಪರಿವರ್ತನೆಯಾಗಿದೆ. ಹೆದ್ದಾರಿಯು ದುರಸ್ತಿಗಾಗಿ ಕಾದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಇಲಾಖೆಯು ರಸ್ತೆಯಲ್ಲಿನ ಗುಂಡಿ ಮುಚ್ಚುವ ಕೆಲಸ ಮಾಡಬೇಕು ಹಾಗೂ ರಸ್ತೆ ಅಗಲಿಕರಣ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್



















