
ಬಳ್ಳಾರಿ / ಕಂಪ್ಲಿ : ಕಂಪ್ಲಿ ನಗರದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಸಕಲ ಸಿದ್ದತೆಗೊಂಡಿದ್ದು, ಪ್ರತಿಷ್ಠಾಪನೆಗೆ ಯುವ ಸಮೂಹ ಉತ್ಸುಕವಾಗಿರುವುದು ಕಂಡು ಬಂತಾದರೂ, ಇಲ್ಲಿನ ವ್ಯಾಪಾರದಲ್ಲಿ ಥಂಡ ಹೊಡೆದ ಪರಿಣಾಮ ಚಿತ್ರಗಾರ ಕುಟುಂಬದವರು ಕಂಗಾಲಾಗಿದ್ದಾರೆ. ವಿಘ್ನ ನಿವಾರಕ ಲಂಬೋದರ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ದ ಆಚರಿಸಲು ಗಂಡುಗಲಿ ಕುಮಾರ ರಾಮನ(ಕಂಪಲಿರಾಯನ) ನಾಡಿನಲ್ಲಿ ಜನತೆ ಸನ್ನದ್ಧಗೊಂಡಿದ್ದಾರೆ. ಗಣೇಶ ಚತುರ್ಥಿ ಹಿನ್ನೆಲೆ ಕಂಪ್ಲಿ ನಗರ ಮತ್ತು ಹಳ್ಳಿಗಳಲ್ಲಿ ಸಾರ್ವಜನಿಕರು ತಮ್ಮ ತಮ್ಮ ಮನೆಯಲ್ಲಿ ಗಣಪತಿಗಳನ್ನು ಕೂರಿಸಲು ಮೂರ್ತಿಗಳನ್ನು ಖರೀದಿ ಮಾಡುವಲ್ಲಿ ನಿರತರಾಗಿರುವುದು ಕಂಡರೂ, ಜನರು ಪಿಒಪಿ ಕಡೆ ವಾಲಿದ ಪರಿಣಾಮ ಪರಿಸರ ಸ್ನೇಹಿ (ಮಣ್ಣಿನ) ಗಣಪ ಕೊಂಡುಕೊಳ್ಳುವರ ಸಂಖ್ಯೆ ವಿರಳವಾಗುತ್ತಿರುವುದರಿಂದ ಗಣೇಶ ತಯಾರಿಕೆಯನ್ನೇ ಕುಲಕಸುಬು ಮಾಡಿಕೊಂಡ ಗಣಪತಿ ತಯಾರಿಕರ ಬದುಕು ಅತಂತ್ರವಾಗಿಸಿದೆ. ಪಟ್ಟಣದಲ್ಲಿ ಮಾರುತಿರಾವ್ ಚಿತ್ರಗಾರ, ವೆಂಕಟೇಶ ಚಿತ್ರಗಾರ, ಅನಂತಕುಮಾರ ಚಿತ್ರಗಾರ ಕುಟುಂಬಗಳ ಕಲಾವಿದರು ಹಲವಾರು ದಶಕಗಳಿಂದ ನಾನಾ ಕಡೆಗಳಿಂದ ಗುಣಮಟ್ಟದ ಮಣ್ಣು ತಂದು, ವಿಘ್ನನಿವಾರಕ ಗಣೇಶನ ಮೂರ್ತಿ ತಯಾರಿಸುತ್ತಾ ಬಂದಿದ್ದಾರೆ ಗಣೇಶ ಸೇರಿದಂತೆ ನಾನಾ ಮೂರ್ತಿಗಳ ತಯಾರಿಕೆ ಇವರ ಮೂಲ ಕುಲಕಸುಬು ಆಗಿದೆ. ಇದನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿರುವ ಚಿತ್ರಗಾರ ಕುಟುಂಬದ ಕಲಾವಿದರಿಗೆ ಸರ್ಕಾರದ ಸೌಲಭ್ಯಗಳು ಮರೀಚಿಕೆಯಾಗಿದೆ. ಕಲಾವಿದ ಮಾರುತಿರಾವ್ ಚಿತ್ರಗಾರ ಮಾತನಾಡಿ, ಈ ಬಾರಿ ಗಣಪತಿ ವ್ಯಾಪಾರ ಕಡಿಮೆ ಇದೆ ಬೇಕಾಬಿಟ್ಟಿ ದರಕ್ಕೆ ಕೇಳುತ್ತಿದ್ದಾರೆ. ಜನರು ಗಣೇಶನನ್ನು ತೆಗೆದುಕೊಳ್ಳಲು ಬರುತ್ತಿಲ್ಲ. ಈಗ ರೆಡಿಮೇಡ್ ವ್ಯಾಪಾರ ಜಾಸ್ತಿಯಾಗಿದೆ. ಇದರಿಂದ ಚಿತ್ರಗಾರ ಕುಟುಂಬದ ಕಲಾವಿದರ ಬದುಕಿಗೆ ಕಂಟಕವಾಗಿದೆ. ವಂಶ ಪಾರಂಪರಿಕವಾಗಿ ಕುಲಕಸುಬು ಮಾಡಿಕೊಂಡು ಬಂದಿರುವ ನಮಗೆ ಸರ್ಕಾರದ ಸೌಲಭ್ಯಗಳು ಇಲ್ಲ. ಇದರಿಂದ ನಾವು ಸಂಪೂರ್ಣವಾಗಿ ಹಿಂದುಳಿದ್ದು, ಈಗಾಗಲೇ ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ, ನಮ್ಮ ಕೂಗು ಯಾರಿಗೂ ಕೇಳಿಸುತ್ತಿಲ್ಲ. ಈಗಲಾದರೂ ಸರ್ಕಾರ ಮತ್ತು ಅಧಿಕಾರಿಗಳು ಕಣ್ಣು ತೆರೆದು, ನಮ್ಮ ಸಂಕಷ್ಟವನ್ನು ಆಲಿಸಿ, ಸೌಲಭ್ಯಗಳನ್ನು ಕಲ್ಪಿಸಬೇಕು. ಗಣಪತಿ ಮೂರ್ತಿ ಪ್ರತಿಷ್ಠಾಪನೆಯ ಕಳೆದ ದಿನದಂದು ನಗರದಲ್ಲಿ ಮಳೆ ಸುರಿದ ಪರಿಣಾಮ ವ್ಯಾಪಾರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಆದ್ದರಿಂದ ಸರ್ಕಾರ ಕಲಾವಿದರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್



















