ಬಾಗಲಕೋಟೆ -ಮುಧೋಳ :ಜನನ ಮರಣಾತ್ಮಕ ರೂಪವಾಗಿದ್ದಂತ ಸಂಸಾರ ದುಃಖವನ್ನು ನಿವೃತ್ತಿ ಮಾಡಿ ಅಖಂಡ ಸುಖವನ್ನು ಪ್ರಾಪ್ತಿ ಮಾಡುವ ಸದ್ಗುರುವಿನ ಸೇವೆಯನ್ನು. ಚಿಂತನವನ್ನು ಹಾಗೂ ಭಜನಾ ಪೂಜಾದಿಗಳನ್ನು ಮಾಡಬೇಕೆಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪ.ಪೂ.ಶರಣಬಸವ ಶಾಸ್ತ್ರಿಗಳು ಹೇಳಿದರು.
ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಚನ್ನಾಳ ಗ್ರಾಮದ ವಿಶ್ವಗುರು ಬಸವಣ್ಣನವರ ದೇವಾಲಯದಲ್ಲಿ ಶ್ರಾವಣ ಮಾಸದ ಮುಕ್ತಾಯ ಸಮಾರಂಭ ಸಭೆಯಲ್ಲಿ ಕೈವಲ್ಯ ಪದ್ಧತಿ ,ನಿಜಗುಣರ, ಕನಕದಾಸರ, ಪುರಂದರದಾಸರ ಪದ್ಯಗಳನ್ನು ಸುಶ್ರಾವ್ಯ ಹಾಡಿ ಮಾತನಾಡುತ್ತಾ ಕರುಣಾ ಗುಣವುಳ್ಳ ಗುರುವಿನ ಗುಣಗಾನವನ್ನು ಪ್ರತಿದಿನ ಪ್ರತಿಕ್ಷಣ ಮಾಡುವುದು ಈ ಮಾನವ ಜನ್ಮಕ್ಕೆ ಭೂಷಣ ಎಂದರು. ಹೊಸಳ್ಳಿಯ ನಾಗನಗೌಡ ಪಾಟೀಲ ತಂಡದವರು ಮಧುರವಾಗಿ ಭಜನೆ ಮಾಡಿದರು. ಹಿರಿಯರಾದ ಉಮೇಶ್ ಗೋಡಿ, ರಮೇಶ ಅಂಗಡಿ, ಗುರಪ್ಪ ಕುರಬೆಟ್ಟ, ಮಂಜುನಾಥ ಗೋಡಿ, ಪುಂಡಲೀಕ ಪೂಜಾರಿ, ಚನ್ನಪ್ಪ ಗೋಡಿ ಮುಂತಾದವರು ಉಪಸ್ಥಿತರಿದ್ದರು. ಬಂದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ನೂರಾರು ಜನ ಭಜನಾ ಪ್ರೇಮಿಗಳು ಭಾಗವಹಿಸಿ ಸಂಭ್ರಮ ಪಟ್ಟರು. ಮಂಗಲದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.
- ಕರುನಾಡ ಕಂದ



















