
ಬೆಳಗಾವಿ/ ಬೈಲಹೊಂಗಲ :ಇಂಚಲ ಶ್ರೀ ಶಿವಯೋಗೀಶ್ವರ ಸಂಸ್ಕೃತ ಪಾಠ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಸಂಸ್ಕೃತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಯಿತು.
ಸರ್ವ ಭಾಷಾ ಜನನಿ ಸಂಸ್ಕೃತ
ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಪೂರ್ಣಾನಂದ ಶ್ರೀ ಅಭಿಮತ ಸಂಸ್ಕೃತ ಭಾಷೆಯು ಸರಳ ಸುಲಲಿತ ಸುಮಧುರ ಭಾಷೆಯಾಗಿದೆ. ದೇವಭಾಷೆ ಎಂಬ ವಿಖ್ಯಾತಿ ಗಳಿಸಿದ ಸಂಸ್ಕೃತ ಭಾಷೆಯು ಸರ್ವ ಭಾಷೆಗಳ ಜನನಿಯಾಗಿದೆ, ಸಂಸ್ಕೃತವೇ ಎಲ್ಲಾ ಭಾಷೆಗಳಿಗೂ ಮುನ್ನುಡಿಯಾಗಿದೆ ಎಂದು ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ ಹೇಳಿದರು.
ಸಮೀಪದ ಇಂಚಲದಲ್ಲಿ ಜರುಗಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಮತ್ತು ಶ್ರೀ ಶಿವಯೋಗೀಶ್ವರ ಸಂಸ್ಕೃತ ಪಾಠಶಾಲೆ ಇಂಚಲ ಇವರುಗಳ ಸಹಯೋಗದಲ್ಲಿ ನಡೆದ ಸಂಸ್ಕೃತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಸ್ಕೃತ ಭಾಷೆಯು ಸರಳವಾದ ಭಾಷೆ ಅದನ್ನು ಕಲಿತವರು ಎಲ್ಲಾ ಭಾಷೆಗಳನ್ನೂ ಸರಳವಾಗಿ ಕಲಿಯಬಹುದು. ವಿಜ್ಞಾನ ,ಗಣಿತ ,ಆಯುರ್ವೇದ ಹೀಗೆ ಸರ್ವ ಭಾಷೆಗಳಿಗೂ ಸಂಸ್ಕೃತ ಅಪಾರ ವಿಚಾರವನ್ನು ನೀಡಿದ್ದು ಸಂಸ್ಕೃತದ ಕಲಿಕೆಯನ್ನು ಎಲ್ಲರೂ ಮಾಡಬೇಕು ಮಾಡಿದರೆ ಜೀವನ ಸಾರ್ಥಕವಾಗುವುದು ಎಂದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ಬೆಳಗಾವಿ ವಲಯ ವಿಷಯ ಪರಿವೀಕ್ಷಕಾರಾದ ಶ್ರೀ ಜಗದೀಶ ಕರೆಪ್ಪನವರ ಮಾತನಾಡಿ ಸಂಸ್ಕೃತ ಕೇವಲ ಒಂದು ಜಾತಿ ಧರ್ಮ ಕುಲಕ್ಕೆ ಸೀಮಿತವಾದ ಭಾಷೆಯಲ್ಲ ಅದು ಸರ್ವ ಧರ್ಮೀಯರ ಭಾಷೆ ಅದನ್ನು ನಾವು ಒಂದೇ ಧರ್ಮಕ್ಕೆ ಸೀಮಿತಗೊಳಿಸದೆ ಸರ್ವರಿಗೂ ವಿಶ್ವ ಭಾಷೆ ಸಂಸ್ಕೃತದ ಮಹತ್ವ ತಿಳಿಸುವ ಕೆಲಸವನ್ನು ಭಾರತೀಯರಾದ ನಾವು ಮಾಡಬೇಕು ಅದು ನಮ್ಮೆಲ್ಲರ ಕರ್ತವ್ಯ ಕೂಡ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಥೆ ಕಾರ್ಯದರ್ಶಿಗಳಾದ ಕೊಳ್ಳಿ ಗುರುಗಳು ಮಾತನಾಡಿ ಸಂಸ್ಕೃತ ಭಾಷೆಯ ಪಾಲನೆ ಪೋಷಣೆ ಕೆಲಸವನ್ನು ಎಲ್ಲರೂ ಮಾಡಬೇಕು ಅಂದರೆ ಮಾತ್ರ ನಮ್ಮ ತಾಯಿ ಭಾಷೆ ಉಳಿಸಿಕೊಳ್ಳಲು ಸಾಧ್ಯ ಎಂದರು. ಉಪನ್ಯಾಸಕರಾಗಿ ಆಯುರ್ವೇದ ಮಹಾವಿದ್ಯಾಲಯದ ಉಪನ್ಯಾಸಕರಾದ ಮಂಜುನಾಥ್ ಭಟ್ ಸಂಸ್ಕೃತ ಭಾಷೆಯ ಬೆಳವಣಿಗೆ, ಹಿನ್ನಲೆ ಕುರಿತು ಉಪನ್ಯಾಸ ನೀಡಿದರು. ಪಾಠಶಾಲಾ ಮಕ್ಕಳಿಂದ ಸಂಸ್ಕೃತ ನೃತ್ಯಗಳು, ನಾಟಕ ,ಸರಳ ಸಂಭಾಷಣೆ ಹೀಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ 2024/25 ನೇ ಸಾಲಿನ ಸಂಸ್ಕೃತ ಪ್ರಸಿದ್ಧ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಪಾಠಶಾಲಾ ಮುಖ್ಯೋಪಾಧ್ಯಾಯ ಎಸ್ ಡಿ ಕರಾಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಿ ಪಿ ತುಪ್ಪದ ಮತ್ತು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಬಿ ಎಸ್ ಮಲ್ಲೂರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಲ್ಲೇಶ ಮಲಮೇತ್ರಿ, ಎಲ್ ಆರ್ ಕೇದಾರಿ, ಎಸ್ ಎಂ ದಿನ್ನಿಮನಿ ಇದ್ದರು. ಕೆ ಡಿ ನಾಯಕ ನಿರೂಪಿಸಿದರು.ಪ್ರಭು ಹಿರೇಮಠ್ ವಂದಿಸಿದರು.
ವರದಿ ಉಮೇಶ ಗೌಡರ



















