
ಕೊಪ್ಪಳ/ ಗಂಗಾವತಿ :ತುಂಗಭದ್ರಾ ನದಿಯನ್ನು ರಕ್ಷಿಸಲು ನಡೆಯುತ್ತಿರುವ ‘ನಿರ್ಮಲ ತುಂಗಭದ್ರಾ’ ಅಭಿಯಾನದ ಮೂರನೇ ಹಂತದ ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಸರ್ವಸಾಮಾನ್ಯರು, ರೈತರು ಮತ್ತು ಪರಿಸರ ಪ್ರೇಮಿಗಳು ತನು-ಮನ-ಧನದಿಂದ ಭಾಗವಹಿಸಬೇಕು ಎಂದು ಹಿರಿಯರಾದ ಲಲಿತಾರಾಣಿ ಶ್ರೀ ರಂಗದೇವರಾಯಲು ಕರೆ ನೀಡಿದರು.
ಸೆ. 4ರಂದು ಗುರುವಾರ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ನವದೆಹಲಿ ಹಾಗೂ
ಪರ್ಯಾವರಣ ಟ್ರಸ್ಟ್ ಶಿವಮೊಗ್ಗ ಮತ್ತು ನಿರ್ಮಲ ತುಂಗಭದ್ರಾ ಅಭಿಯಾನ ಕೊಪ್ಪಳ ಜಿಲ್ಲಾ ಸಮಿತಿ ಸಹಯೋಗದಲ್ಲಿ ಮೂರನೇ ಹಂತದ ಪಾದಯಾತ್ರೆ ಅಂಗವಾಗಿ ಗಂಗಾವತಿ ತಾಲೂಕಿನ ಚಿಕ್ಕ ಜಂತಕಲ್ ಗ್ರಾಮದ ತುಂಗಭದ್ರಾ ನದಿಯ ತಟದಲ್ಲಿರುವ ಶ್ರೀ ಗಂಗಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ ಕಿಷ್ಕಿಂದೆ (ಗಂಗಾವತಿ) ನಿಂದ ಮಂತ್ರಾಲಯದವರೆಗೆ ನಡೆಯಲಿರುವ ಈ ಮೂರನೇ ಹಂತದ ಪಾದಯಾತ್ರೆ ಮಹತ್ವದ್ದಾಗಿದೆ “ತುಂಗಭದ್ರಾ ನದಿಯ ನೀರು ಈ ಹಿಂದೆ ಸುರಕ್ಷಿತ ಮತ್ತು ಶುದ್ಧವಾಗಿತ್ತು. ಆದರೆ ಈಗ ಅದು ಆ ಸ್ಥಿತಿಯಲ್ಲಿ ಇಲ್ಲ. ಎಲ್ಲಾ ನಗರ ಮತ್ತು ಹಳ್ಳಿಗಳ ಕಲುಷಿತ ನೀರು ಮತ್ತು ತ್ಯಾಜ್ಯವು ತಾಯಿ ತುಂಗಭದ್ರಾ ನದಿಯ ಒಡಲಿಗೆ ಸೇರುತ್ತಿದೆ, ತಜ್ಞರ ವರದಿಯ ಪ್ರಕಾರ, ಮುಂದಿನ ನಾಲ್ಕು ವರ್ಷಗಳಲ್ಲಿ ಮಾತ್ರ ಇದರ ನೀರು ಕುಡಿಯಲು ಯೋಗ್ಯವಿರಬಹುದು ನಂತರ ಅದು ಕೇವಲ ಕೃಷಿ ಮತ್ತು ಕಾರ್ಖಾನೆಗಳಿಗೆ ಮಾತ್ರ ಉಪಯುಕ್ತವಾಗಬಹುದು ಎನ್ನುವ ಆತಂಕಕಾರಿ ಸರ್ವೆ ನಮ್ಮನ್ನೆಲ್ಲಾ ನಿದ್ದೆಗೆಡಿಸಿದೆ. ಈ ಹಿಂದೆ ಸುರಕ್ಷಿತವಾಗಿದ್ದ ತುಂಗಭದ್ರೆಯ ನೀರನ್ನು ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ಬಿಟ್ಟುಹೋಗುವುದು ನಮ್ಮೆಲ್ಲರ ಕರ್ತವ್ಯ,” ಎಂದು ಲಲಿತಾ ರಾಣಿಯವರು ಹೇಳಿದರು.
ತುಂಗಭದ್ರಾ ಅಭಿಯಾನದ ಸಂಚಾಲಕರಾದ ಡಾ. ಶಿವಕುಮಾರ್ ಮಾಲಿಪಾಟೀಲ್ , ಪ್ರಭಾಕರ್ ಚಿನ್ನಪಾಟಿ, ಮಹಮ್ಮದ್ ರಫಿ, ಮಂಜುನಾಥ ಗುಡ್ಲಾನೂರ್, ಸರ್ವೇಶ ವಸ್ರ್ತದ, ಜಗನ್ನಾಥ ಅಲ್ಲಂಪಲ್ಲಿ, ವಿಷ್ಣು ಜೋಶಿ, ಅರ್ಜುನ್, ಐ.ಎಂ.ಎ ಅಧ್ಯಕ್ಷರಾದ ಡಾ. ಎ. ಎಸ್. ಎನ್ ರಾಜು , ಶ್ರೀಕಾಂತ್, ಗವಿ, ಪತ್ರಕರ್ತರಾದ ವೆಂಕಟೇಶ್ ಕುಲಕರ್ಣಿ ಹಾಗೂ ಚಿಕ್ಕ ಜಂತಕಲ್ ಗ್ರಾಮ ಪಂಚಾಯತಿ ಅಧ್ಯಕ್ಷೆ ನೇತ್ರಾವತಿ, ವಿಎಸ್ಎಸ್ಎನ್ ಅಧ್ಯಕ್ಷ ವೆಂಕಣ್ಣ ಬಟಾರಿ, ಮಾಜಿ ಜಿ. ಪಂ. ಸದಸ್ಯ ಪರಶುರಾಮ್, ಸುಧೀರ್ ಕಂಪ್ಲಿ, ರೇಣುಕನಗೌಡ, ಹುಲುಗಪ್ಪ ಬಳ್ಳಾರಿ, ರಾಘವೇಂದ್ರ ಕುಲಕರ್ಣಿ, ಮಂಜುನಾಥ್, ಚಂದ್ರಶೇಖರ್, ಸುಮಂಗಲ, ಹನುಮೇಶ್ ಭಾವಿಕಟ್ಟಿ , ಭಾಷಾ ಹಾಗೂ ರೈತರು, ಗ್ರಾಮಸ್ಥರು ಉಪಸ್ಥಿತರಿದ್ದರು.
- ಕರುನಾಡ ಕಂದ



















