ಬಾಗಲಕೋಟೆ : ನಮ್ಮ ನಾಡಿನ ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕೃತಿ, ಸೇವೆ ಮಾಡಲು ಅಣಿಯಾಗಿರುವ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನವನ್ನು ಲೋಕಾರ್ಪಣೆಗೊಳಿಸಲು ಸಿದ್ಧತೆಗಾಗಿ ಜಿಲ್ಲೆಯ ಎಲ್ಲಾ ಕಲಾವಿದರ ಪೂರ್ವ ಭಾವಿ ಸಭೆಯನ್ನು ರವಿವಾರ ದಿ.14 ರಂದು ಮುಂಜಾನೆ 11 ಗಂಟೆಗೆ ಬಾಗಲಕೋಟೆಯ ವಿದ್ಯಾ ಗಿರಿಯ ಸಾಯಿ ಮಂದಿರದಲ್ಲಿ ಕರೆಯಲಾಗಿದೆ ಎಂದು ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಲ್. ಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಅವರ ಅಣತಿಯಂತೆ ಪ್ರತಿಷ್ಠಾನದ ಉದ್ಘಾಟನೆ, ಸಂಗೀತ ಸಮ್ಮೇಳನ ಆಯೋಜಿಸುವುದು. ಜಿಲ್ಲೆಯ ಹಿರಿಯ ಮತ್ತು ಕಿರಿಯ ಕಲಾವಿದರನ್ನು ಗೌರವಿಸುವುದು. ಅತಿಥಿಗಳನ್ನು ಆಹ್ವಾನಿಸುವುದು ಸೇರಿದಂತೆ ಅನೇಕ ವಿಷಯಗಳನ್ನು ಚರ್ಚಿಸಲಾಗುವುದು ಹಾಗಾಗಿ ಜಿಲ್ಲೆಯ ಜನಪದ ಸಂಗೀತ, ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ರಂಗಭೂಮಿ ಸೇರಿದಂತೆ ಎಲ್ಲಾ ರಂಗಗಳ ಕಲಾವಿದರು ಸಾಂಸ್ಕೃತಿಕ ಸಂಘ-ಸಂಸ್ಥೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಬೇಕೆಂದು ಶಂಕರ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷರು, ಸಂಗೀತಗಾರರಾದ ಸಿದ್ದರಾಮಯ್ಯ ಮಠಪತಿ, ಮುಖಂಡರಾದ ಆನಂದಕುಮಾರ್ ಕಂಬಳಿಹಾಳ ಗವಾಯಿಗಳು, ವಿಜಯಕುಮಾರ ಹಿರೇಮಠ ಉಪಸ್ಥಿತರಿದ್ದರು.
- ಕರುನಾಡ ಕಂದ



















