
ಬೆಳಗಾವಿ: ಅಥಣಿ ತಾಲೂಕಿನ ಖವಟಕೊಪ್ಪ ಗ್ರಾಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನೂತನವಾಗಿ ನಿರ್ಮಿಸಲಾದ ಸರಕಾರಿ ಪ್ರೌಢಶಾಲೆಯನ್ನು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿ ಅವರು ಉದ್ಘಾಟಿಸಿ ಮಾತನಾಡಿದರು.
ಅವರು ಮಾತನಾಡಿದ ಸಂದರ್ಭದಲ್ಲಿ “ಗ್ರಾಮೀಣ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಬೇಕು. ನಮ್ಮ ಊರ ಮಕ್ಕಳೂ ನಗರ ಮಕ್ಕಳಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಬೇಕು. ಅದಕ್ಕಾಗಿ ಸರ್ಕಾರ ಗ್ರಾಮೀಣ ಪ್ರದೇಶಗಳಿಗೂ ಸಮಾನ ಸೌಲಭ್ಯ ಒದಗಿಸುತ್ತಿದೆ. ಈ ಶಾಲೆ ಮಕ್ಕಳ ಭವಿಷ್ಯಕ್ಕೆ ಬೆಳಕಾಗಬೇಕು. ಶಿಕ್ಷಣವೇ ಸಮಾಜದ ನಿಜವಾದ ಶಕ್ತಿ, ಬಡವರಿಗೂ ಬಾಗಿಲು ತೆರೆಸುವ ಬೃಹತ್ ಆಯುಧ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ. ಪೂ. ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಕೌಲಗುಡ್ಡ, ಹಣಮಾಪುರ, ಶ್ರೀ ವಿಠ್ಠಲ ಕಾಂಬಳೆ, ಶ್ರೀ ಶಾಂತಿನಾಥ ನಂದೇಶ್ವರ, ಶ್ರೀ ಮಹಾದೇವ ಚೌಗಲೆ, ಶ್ರೀ ಆನಂದ ಕುಲಕರ್ಣಿ, ಶ್ರೀ ವಿವೇಕ ನಾರಗೊಂಡ, ಶ್ರೀ ಎ.ಎಂ. ಖೋಬ್ರಿ, ಶ್ರೀ ಅನಂತ ಬಸರಿಕೊಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎಂ.ಆರ್. ಮುಂಜೆ ಹಾಗೂ ಅಥಣಿ ಪುರಸಭೆ ಸದಸ್ಯರು, ಶಾಲಾ ಶಿಕ್ಷಕ-ಶಿಕ್ಷಕಿಯರು, ವಿಧ್ಯಾರ್ಥಿ-ವಿಧ್ಯಾರ್ಥಿನಿಯರು ಹಾಗೂ ಮಾದ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಪ್ರೇರಣಾದಾಯಕ ಸಂದೇಶ ನೀಡಿ “ಶಿಕ್ಷಣದ ಮೂಲಕವೇ ನಮ್ಮ ಕನಸುಗಳನ್ನು ಸಾಕಾರಗೊಳಿಸಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯೂ ಬಾಳಿನಲ್ಲಿ ದೊಡ್ಡ ಸ್ಥಾನಕ್ಕೇರುವುದು ಸಾಧ್ಯ. ಶಾಲೆಯು ಕೇವಲ ಓದುವ ಜಾಗವಲ್ಲ, ಅದು ವ್ಯಕ್ತಿತ್ವ ಬೆಳೆಸುವ ಮಂದಿರವಾಗಿದೆ” ಎಂದು ಗಣ್ಯರು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಿ, ಶಾಲಾ ಆವರಣದಲ್ಲಿ ಹಸಿರು ಸಂಸ್ಕೃತಿ ಬೆಳಸುವ ಉದ್ದೇಶದಿಂದ ವೃಕ್ಷಾರೋಪಣೆಯೂ ನೆರವೇರಿಸಲಾಯಿತು.
ವರದಿ. ವಿಠ್ಠಲ ಖೋಕಾಟೆ



















