ಬಳ್ಳಾರಿ / ಕಂಪ್ಲಿ : ಪಟ್ಟಣದ 16ನೇ ವಾರ್ಡಿನ ವಿನಾಯಕ ನಗರದ ಇಂದಿರಾ ನಗರದಲ್ಲಿರುವ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ದಸರಾ ಹಬ್ಬದ ಪ್ರಯುಕ್ತ ಘಟಸ್ಥಾಪನೆ ಅಂಗವಾಗಿ ಸುಮಂಗಲೆಯರಿಂದ ಕಳಸ, ಪೂರ್ಣ ಕುಂಭ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ದೇವಸ್ಥಾನದಲ್ಲಿ ಸಮಾವೇಶಗೊಂಡಿತು. 101 ಕಳಸ, ಪೂರ್ಣಕುಂಭ ಸೇರಿದಂತೆ ವಿವಿಧ ಮಂಗಳವಾದ್ಯ ಮೆರವಣಿಗೆಗೆ ಮೆರಗು ನೀಡಿದ್ದವು. ಶರನ್ನವರಾತ್ರಿ ದಸರಾ ಹಬ್ಬದ ಆಂಗವಾಗಿ ದೇವಸ್ಥಾನದಲ್ಲಿ ಸಕಲ ಸದ್ಭಕ್ತರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ದಸರಾ ಹಬ್ಬದ ಆಂಗವಾಗಿ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ಪ್ರತಿದಿನ ಬೆಳಿಗ್ಗೆ ದೇವಿಗೆ ಪಂಚಾಮ್ರುತ ಆಭಿಷೇಕ, ಕುಂಕುಮಾರ್ಚನೆ ನಡೆಯಲಿದ್ದು, ಸಂಜೆ ಲಲಿತ ಸಹಸ್ರನಾಮ ಪಠಣೆ, ಕುಂಕುಮಾರ್ಚನೆ ಮತ್ತು ಪಲ್ಲಕ್ಕಿ ಸೇವೆಗಳು ನಡೆಯಲಿವೆ. 9 ದಿನಗಳ ಕಾಲ ದೇವಿಗೆ ವಿವಿಧ ದೇವತೆಯರ ಅಲಂಕಾರ ಮಾಡಿ ಪೂಜಿಸಲಿದ್ದಾರೆ. ಸೆ.29ರಂದು ದುರ್ಗಾಷ್ಠಮಿ ಪ್ರಯುಕ್ತವಾಗಿ ಬೆಳಿಗ್ಗೆ ಚಂಡಿ ಹೋಮ, ಪೂರ್ಣಾಹುತಿ, ಅನ್ನಸಂತರ್ಪಣೆ ನಡೆಯಲಿದೆ. ಅ.2ರಂದು ಸಂಜೆ 5ಗಂಟೆಗೆ ಬನ್ನಿಮಹಾಂಕಾಳಿ ದೇವಿಯ ಮಹಾರಥೋತ್ಸವವು ವಿಜೃಂಭಣೆಯಿಂದ ಜರುಗಲಿದೆ.
ವರದಿ : ಜಿಲಾನಸಾಬ್ ಬಡಿಗೇರ್



















