
ಕೊಪ್ಪಳ/ ಗಂಗಾವತಿ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಬುಧವಾರ ಗಂಗಾವತಿ ನಗರದಲ್ಲಿರುವ ದೊಡ್ಡ ದೊಡ್ಡ ತಗ್ಗು ಗುಂಡಿಗಳಿಗೆ ಹೂ ಚಲ್ಲಿ, ಊದು ಬತ್ತಿ ಬೆಳಗಿ, ಪೂಜೆ ಪುನಸ್ಕಾರ ಮಾಡಿ ಮಳೆ ನೀರಿನಿಂದ ತುಂಬಿದ್ದ ಗುಂಡಿಗಳಲ್ಲಿ ಕುಳಿತು ವಿಶೇಷ ಮತ್ತು ವಿಭಿನ್ನ ವಿಧಾನಗಳಲ್ಲಿ ನಗರಸಭೆ ಮುಖ್ಯಾಧಿಕಾರಿ, ನಗರಸಭೆ ಸದಸ್ಯರು, ಕ್ಷೇತ್ರದ ಶಾಸಕರ ವಿರುದ್ಧ ಪ್ರತಿಭಟನೆ ಮಾಡಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಗಂಗಾವತಿ ನಗರದೆಲ್ಲೆಡೆ ಹಲವಾರು ವರ್ಷಗಳಿಂದ ಪ್ರತಿ ರಸ್ತೆಗಳಲ್ಲಿಯೂ ದೊಡ್ಡ ದೊಡ್ಡ ತಗ್ಗು ಗುಂಡಿಗಳು ಬಿದ್ದಿದ್ದು, ಇದರಿಂದ ರಸ್ತೆ ಸವಾರರಿಗೆ, ಸಂಚಾರಿಗಳಿಗೆ, ಶಾಲಾ ಮಕ್ಕಳಿಗೆ, ಹಿರಿಯರಿಗೆ, ಪಾದಚಾರಿಗಳಿಗೆ ಅನಾನುಕೂಲ ಸೃಷ್ಟಿಯಾಗಿದ್ದು ನಗರದ ಸಾರ್ವಜನಿಕರ ಮೂಲಭೂತ ಸೇವೆ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ನಗರಸಭೆ ಆಡಳಿತಾಧಿಕಾರಿಗಳು, ಜನ ಪ್ರತಿನಿಧಿಗಳು ಸಂಪೂರ್ವಾಗಿ ವಿಫಲವಾಗಿದ್ದಾರೆ. ಇದರ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯಾದ್ಯಂತ ತಗ್ಗು ಗುಂಡಿಗಳನ್ನು ಮುಚ್ಚುವ ವಿಶೇಷವಾದ ಹೋರಾಟ ಅಭಿಯಾನಗಳನ್ನು ಹಮ್ಮಿಕೊಂಡಿದ್ದು ಅದರ ಭಾಗವಾಗಿ ಗಂಗಾವತಿ ನಗರದಲ್ಲಿ ಕೂಡ ರಸ್ತೆಯ ಗುಂಡಿಗಳಿಗೆ ಹೂ ಚೆಲ್ಲಿ ಪೂಜೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಲಾಯಿತು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಗಣೇಶ್ ಅಮೃತ್, ಮೈನುದ್ದೀನ್, ಗಣೇಶ್ ಸಾರಂಗಿ, ಮೆಹಬೂಬು, ಮಹಮ್ಮದ್ ಹುಸೇನ್, ಕನಕಪ್ಪ ಉಡಿಜಾಲಿ, ವೀರೇಶ್ ಎಂ ಸೇರಿದಂತೆ ಅನೇಕರು ಭಾಗವಹಿಸಿದ್ದರು.
- ಕರುನಾಡ ಕಂದ



















