ಬಾಗಲಕೋಟೆ : ವಿಶ್ವ ಸಾಹಿತ್ಯದ ಮಟ್ಟದಲ್ಲಿ ತಮ್ಮ ಕಾದಂಬರಿಗಳ ಚಿಂತನೆಗಳ ಮೂಲಕ ಕನ್ನಡಭಾಷೆಯ ಹಿರಿದಾದ ಗುರುತುಗಳನ್ನು ನಾಡೋಜ ಎಸ್. ಎಲ್. ಭೈರಪ್ಪನವರು ಮೂಡಿಸಿದ್ದಾರೆ. ಮನುಷ್ಯ ಸಂಬಂಧಗಳನ್ನು ಆಪ್ತವಾಗಿ ಪರಿಚಯಿಸುವ ಅವರ ಕೃತಿಗಳು ಕನ್ನಡ ಸಾಹಿತ್ಯ ವಲಯದಲ್ಲಿ ವಿಶಿಷ್ಟವಾಗಿ ಕಂಡುಬರುತ್ತವೆ. ಎಸ್.ಎಲ್. ಬೈರಪ್ಪನವರ ಸಾರ್ಥಕ ಬದುಕು ಅನುಕರಣಿಯವಾದದ್ದು ಎಂದು ಡಾ. ಸಂಗಮೇಶ ಬ. ಹಂಚಿನಾಳ ಹೇಳಿದರು. ತಾಲೂಕಿನ ಬೇವೂರಿನ ಆದರ್ಶ ವಿದ್ಯಾವರ್ಧಕ ಸಂಘದ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಕನ್ನಡ ಸಂಘದ ವತಿಯಿಂದ ಜರುಗಿದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕನ್ನಡ ಸಾರಸ್ವತಲೋಕದ ಹಿರಿಯ ಸಾಹಿತಿ ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ಬರವಣಿಗೆಯಲ್ಲಿ ಸಂಸ್ಕೃತಿ, ಚರಿತ್ರೆಯ ಸೂಕ್ಷ್ಮ ಅವಲೋಕನ ಇರಲಾಗಿದ್ದು ಸಂಕಿರ್ಣಮಯ ಸಮಕಾಲೀನ ತಲ್ಲಣಗಳಿಗೆ ಜಾಗೃತ ಧ್ವನಿಯ ಉತ್ತರಗಳನ್ನು ಗಮನಿಸುತ್ತೇವೆ. ಅವರ ಕಾದಂಬರಿಗಳು ಕನ್ನಡ ಚಲನಚಿತ್ರರಂಗದ ಸೊಬಗನ್ನು ಹೆಚ್ಚಿಸಿವೆ. ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಸಹೃದಯ ಓದುಗರನ್ನು ಅಭಿಮಾನಿಗಳನ್ನಾಗಿ ಹೊಂದಿದ್ದ ಎಸ್. ಎಲ್. ಭೈರಪ್ಪನವರು ಕನ್ನಡದ ಶ್ರೇಷ್ಠ ಚೇತನರಾಗಿದ್ದಾರೆ ಎಂದು ಐ.ಕ್ಯೂ.ಎ.ಸಿ ಘಟಕದ ಮುಖ್ಯಸ್ಥ ಡಾ. ಎ.ಎಮ್. ಗೊರಚಿಕ್ಕನವರ ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು. ನುಡಿನಮನ ಕಾರ್ಯಕ್ರಮದಲ್ಲಿ ಪಿ.ಎಸ್.ಸಜ್ಜನ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಗದೀಶ ಗು. ಭೈರಮಟ್ಟಿ, ವಿಶ್ರಾಂತ ಪ್ರಾಚಾರ್ಯ ಬಿ.ಬಿ. ಬೇವೂರ ಉಪನ್ಯಾಸಕರಾದ ಎಸ್.ಎಸ್.ಆದಾಪೂರ, ಡಿ.ವಾಯ್. ಬುಡ್ಡಿಯವರ, ಬಿ.ಎಚ್. ಗೋಡಿ ಭಾಗಿಯಾಗಿ ಎಸ್.ಎಲ್ ಭೈರಪ್ಪನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ವಿದ್ಯಾರ್ಥಿನಿಯರಾದ ಪವಿತ್ರಾ ಮಾಗನೂರ ,ವಿಜಯಲಕ್ಷ್ಮೀ ಬಂಡಿವಡ್ಡರ, ಜ್ಯೋತಿ ಗೌಡರ, ಫಾತಿಮಾ ನಧಾಪ ಗೀತನಮನ ಸಲ್ಲಿಸಿದರು. ವಿದ್ಯಾರ್ಥಿನಿ ಅಕ್ಷತಾ ಕಟ್ಟಿಮನಿ ನಿರೂಪಿಸಿದರು. ಎನ್.ಎಸ್.ಎಸ್ ಸಂಯೋಜನಾಧಿಕಾರಿ ಜಿ.ಎಸ್. ಗೌಡರ ವಂದಿಸಿದರು.
- ಕರುನಾಡ ಕಂದ



















