ಬೀದರ್/ಬಸವಕಲ್ಯಾಣ : ಲಿಂಗಾಯತ ಧರ್ಮದ ನಿಷ್ಠಾವಂತ ಹೋರಾಟಗಾರ, ಬಸವ ತತ್ವವನ್ನು ಮನೆ ಮನಗಳಿಗೆ ಮುಟ್ಟಿಸುವ ನಿಟ್ಟಿನಲ್ಲಿ ಹಗಲಿರುಳೆನ್ನದೆ ದುಡಿಯುತ್ತಿರುವ ಯುವ ಶರಣ, ಪ್ರಗತಿಪರ ಚಿಂತಕರು, ಪರಿಸರ ಸಂರಕ್ಷಕರಾದ ಶರಣ ಸಂಗಮೇಶ ಎನ್ ಜವಾದಿ ರವರು ರಚಿಸಿದ ವೈಚಾರಿಕ ಚಿಂತಕರು ಕೃತಿ ನಾನು ಬಿಡುಗಡೆ ಮಾಡಿದ್ದು ಬಹಳಷ್ಟು ಸಂತಸ ತಂದಿದೆ ಎಂದು ಹಿರಿಯ ಸಾಹಿತಿ ಸೋಮನಾಥ ಯಾಳವಾರ ಹೇಳಿದರು.
ನಗರದ ಹರಳಯ್ಯ ಗವಿ ಆವರಣದಲ್ಲಿ ಜರುಗುತ್ತಿರುವ ಶರಣ ವಿಜಯೋತ್ಸವ ನಾಡ ಹಬ್ಬ, ಹುತಾತ್ಮ ದಿನಾಚರಣೆ ಸಮಾವೇಶದಲ್ಲಿ ‘ ವೈಚಾರಿಕ ಚಿಂತಕರು ‘ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು ಶರಣ ಸಾಹಿತ್ಯ ಸಂಸ್ಕೃತಿಗಾಗಿ ಕೆಲಸ ಮಾಡುತ್ತಿರುವ ಸಂಗಮೇಶ ಎನ್. ಜವಾದಿ ನಿಷ್ಠುರವಾದಿ ಲೇಖಕ, ಅನೇಕ ಸಮಾಜ ಮುಖಿ ಲೇಖನಗಳನ್ನು ಬರೆದಿದ್ದಾರೆ. ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇವರ ಬಸವ ಕಾಯಕ ತತ್ವ ನಿಸ್ವಾರ್ಥ ಸೇವೆ ಸರ್ವರಿಗೂ ಮಾದರಿಯಾಗಿದೆ ಎಂದರು.
ನೇತೃತ್ವ ವಹಿಸಿದ್ದ ಬಸವೇಶ್ವರ ಸೇವಾ ಟ್ರಸ್ಟ್ ಮುಖ್ಯಸ್ಥೆ ಶರಣೆ ಇಂದುಮತಿ ಗಾರಂಪಳ್ಳಿ ಮಾತಾಜಿ ಮಾತನಾಡಿ
ಸೇವೆಯೇ ಶ್ರೇಷ್ಠ ಜೀವನದ ದಾರಿಯಲ್ಲಿ ಸಾಗುತ್ತಿರುವ ನಾವು ಬಸವ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗುತ್ತಿದ್ದೇವೆ ಎಂದರು.
ಸಾನಿಧ್ಯ ವಹಿಸಿದ್ದ ಕಲ್ಯಾಣ ಮಹಾಮನೆ ಮಾಹಾಮಠ ಗುಣತೀರ್ಥವಾಡಿ ಬಸವಕಲ್ಯಾಣದ
ಪರಮ ಪೂಜ್ಯರಾದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ ಬಸವಾದಿ ಶರಣರ ಸಮತಾ ತತ್ವ ಮುಗಿಲೆತ್ತರಕ್ಕೆ ಹಾರಿಸುತ್ತಿರುವ ಅಕ್ಕ ಗಂಗಾಂಬಿಕಾ ತಾಯಿ ರವರ ಸೇವೆ ಅನನ್ಯ, ಬಸವ ತತ್ವ ಸೇವೆಗೆ ಎಂದೆಂದಿಗೂ ಸೋಲಾಗುವುದಿಲ್ಲ. ಯಾವಾಗಲೂ ಜಯವಾಗಲಿದೆ. ಒಂದೊಂದು ಗೋಷ್ಠಿಗಳು ಅರ್ಥಪೂರ್ಣವಾಗಿ ಸಾಗುತ್ತಿವೆ. ಬಸವಾದಿ
ಶರಣರ ಮೇಲೆ ಅನೇಕ ಗಂಭೀರ ಆರೋಪಗಳನ್ನು ಮಾಡಿದ ಅಂದಿನ ಕುತಂತ್ರಗಳು ಆದರೂ ಸಹ ಅವರ ಕಾರ್ಯ ಯಶಸ್ವಿಯಾಗಲಿಲ್ಲ. ಶರಣರು ಅಹಿಂಸಾ ಮಾರ್ಗವನ್ನು ಬೋಧಿಸಿದವರು.
ಬಸವಾದಿ ಪ್ರಮಥರು ಪ್ರಾಮಾಣಿಕವಾಗಿ ಮಾಡಿದ ನಿಸ್ವಾರ್ಥ ಸೇವೆ ಅಜರಾಮರವಾಗಿದೆ. ವಚನ ಸಾಹಿತ್ಯ ಸಂರಕ್ಷಣೆ ಮಾಡುವಲ್ಲಿ ಶರಣರ ತ್ಯಾಗ ಬಲಿದಾನ ಇಂದಿನ ಸಮಾಜ ಯಾವತ್ತೂ ಮರೆಯಬಾರದು. ಸಂಗಮೇಶ ಎನ್ ಜವಾದಿ ರವರು ರಚಿಸಿದ ವೈಚಾರಿಕ ಚಿಂತಕರು ಕೃತಿ ಅರ್ಥಪೂರ್ಣವಾಗಿ ಅಷ್ಟೇ ವೈಚಾರಿಕವಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.
ದಿವ್ಯ ನೇತೃತ್ವ ವಹಿಸಿದ್ದ ಹರಳಯ್ಯ ಗವಿ ಮುಖ್ಯಸ್ಥೆ ಶರಣೆ ಗಂಗಾಂಬಿಕೆ ಅಕ್ಕನವರು ಮಾತನಾಡಿ ಪರಿಸರ ಸಂರಕ್ಷಕ,ಸಾಹಿತಿ,ಲೇಖಕ,ಪತ್ರಕರ್ತ, ಬಸವ ತತ್ವ ಪ್ರಚಾರಕ ಶರಣ ಸಂಗಮೇಶ ಎನ್ ಜವಾದಿ ರಚಿಸಿದ “ವೈಚಾರಿಕ ಚಿಂತಕರು” ಕೃತಿಯನ್ನು ಬಸವಾದಿ ಶರಣರ ಪವಿತ್ರ ಭೂಮಿ ಬಸವಕಲ್ಯಾಣದ
ಹರಳಯ್ಯ ಗವಿಯ ಆವರಣದಲ್ಲಿ ಜರುಗುತ್ತಿರುವ
ಶರಣ ವಿಜಯೋತ್ಸವ ನಾಡ ಹಬ್ಬ ಕಾರ್ಯಕ್ರಮದಲ್ಲಿ ಬಿಡುಗಡೆ ಆಗುತ್ತಿರುವುದು ಸಂತಸದ ವಿಷಯವಾಗಿದೆ.
ಸಮಾಜದ ಅನೇಕ ವಿಷಯನ್ನೊಳಗೊಂಡ ಆಯ್ದ ಲೇಖನಗಳ ಗುಚ್ಚವೇ ಈ ಕೃತಿಯಾಗಿದೆ. ಕೃತಿಯಲ್ಲಿ
ಸಮಾಜ ಮುಖಿ ಚಿಂತನೆ, ಕಲ್ಯಾಣ
ಕ್ಷೇತ್ರ, ರೈತರ ಸಮಸ್ಯೆ ಮತ್ತು ಪರಿಹಾರ,
ವೈಚಾರಿಕ ಚಿಂತಕರ ಹಾಗೂ ಸಾಹಿತಿಗಳ ಕಿರು ಪರಿಚಯ ಭಾವದಿಂದ ಕೂಡಿದ ಕೃತಿ ಇದಾಗಿದ್ದು. ಎಲ್ಲರೂ ಕೃತಿಯನ್ನು ಕೊಂಡು ಓದಲೇಬೇಕಾದ ಉತ್ತಮ ಕೃತಿ ಇದಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯದ ಬಸವ ತತ್ವ ಅನುಯಾಯಿ ಅವಿನಾಶ್ ಭೋಷೆಕರ್ ,
ಶರಣ ನಾಗಯ್ಯಾ ಸ್ವಾಮಿ, ವೈಜನಾಥ ಕಾಮಶೆಟ್ಟಿ , ಶಂಕ್ರಪ್ಪ ಪಾಟೀಲ, ಜಗನ್ನಾಥ ರಾಚೋಟಿ, ದತ್ತಾತ್ರೇಯ ಬಾಂದೇಕರ್, ಶರಣ ಶಿವರಾಜ್ ಶಾಶೆಟ್ಟಿ , ರವಿ ಕೋಳಕೂರು,ಚಂದ್ರಶೇಖರ ತಂಗಾ,ದೇವಕಿ ಪಾಟೀಲ, ಬಸವರಾಜ ಭಾಲ್ಕೆಕರ್
ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
- ಕರುನಾಡ ಕಂದ



















