ರಾಯಚೂರು : ಒಳಮೀಸಲಾತಿ ಉಪವರ್ಗೀಕರಣದಲ್ಲಿ 49 ಅಲೆಮಾರಿ ಸಮುದಾಯಗಳಿಗೆ ಮಾತ್ರ ಇದ್ದ ಶೇ. ಒಂದರಷ್ಟು ಮೀಸಲಾತಿ ಪ್ರತ್ಯೇಕಗೊಳ್ಳಲು ಇನ್ನೂ ಎಷ್ಟು ದಿನಗಳ ಕಾಲಾವಕಾಶ ಬೇಕು. ಅಲೆಮಾರಿಗಳು ಮೂಲದಲ್ಲಿ ಭಿಕ್ಷೆ ಬೇಡುವ ಸಮುದಾಯಗಳಾಗಿರಲಿಲ್ಲ, ಸಾಂಸ್ಕೃತಿಕ ಸಮುದಾಯಗಳಾಗಿದ್ದವು. ಸರ್ಕಾರಿ ಸ್ಥಳೀಯ ಆಡಳಿತ ಸಂಸ್ಥೆಗಳು ಅಲೆಮಾರಿಗಳಿಗಾಗಿ ಯಾವ ಕೆಲಸ ಮಾಡುತ್ತಿಲ್ಲ. ಅಡಿಕೆಯಂತಹ ತಬ್ಬಲಿ ಸಮುದಾಯಗಳನ್ನು ಆನೆಯಂತಹ ಬಲಾಢ್ಯ ಗುಂಪಿಗೆ ಸೇರಿಸಿದ ದುರುದ್ದೇಶವಾದರೂ ಏನು? ಸತ್ಯದ ವಾಸ್ತವಾಂಶವನ್ನು ಪರಿಗಣಿಸದೇ ಅಲೆಮಾರಿಗಳ ಅರ್ಹತೆಯನ್ನು ಕುಹಕತೆಯಿಂದ ಪ್ರಶ್ನಿಸುವುದು ಕೈ ಬಿಡಬೇಕು. “ಸಿ” ಗುಂಪಲ್ಲಿ ಆರೋಗ್ಯಕರ ಸ್ಪರ್ಧೆ ಏರ್ಪಡಲು ಸಾಧ್ಯವಿಲ್ಲ. ಅಲೆಮಾರಿ ಯುವಕರು ಸದೃಢರಾಗಿದ್ದಾರೆ. ಈಗ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ ನಮ್ಮ ಸಾಂವಿಧಾನಿಕ, ನೈತಿಕ ಹಕ್ಕನ್ನು ಕಿತ್ತುಕೊಂಡು ಇನ್ನೂ ಅವಕಾಶವಂಚಿರನ್ನಾಗಿ ಮಾಡುತ್ತಿದ್ದಾರೆಂದರೆ ಏನರ್ಥ; ನ್ಯಾಯಕ್ಕೆ ನಮ್ಮ ಆಗ್ರಹವಂತೂ ಮುಂದುವರಿಯುತ್ತದೆ. ಸರ್ಕಾರದಿಂದ ನಲುಗಿದ ನಾವು ನಮ್ಮ ಅಸ್ಮಿತೆಗಾಗಿ ಯಾವ ತ್ಯಾಗಕ್ಕಾದರೂ ಸಿದ್ಧರಾಗಿದ್ದೇವೆ ಎಷ್ಟೋ ಸಂಕಟಗಳ ಮಧ್ಯಯೂ ಚಳವಳಿ ಮಾತ್ರ ಬಿಡುವುದಿಲ್ಲ, ವಿರಮಿಸದೇ ಮುಂದುವರೆಸುತ್ತೇವೆಂದು ಅಲೆಮಾರಿ ಜಾಗೃತ ಸಂಘದ ಅಧ್ಯಕ್ಷ ಬಸವರಾಜ್ ಹಟ್ಟಿ ಹೇಳಿದರು.
ಮುಂದುವರೆದು, ಶಿಕ್ಷಣವೇ ಇಲ್ಲದ ಅಲೆಮಾರಿಗಳಿಗೆ ಮೀಸಲಾತಿ ಸಿಗುವುದು ಯಾವಾಗ ಅವರೇನೂ ಭಾರತೀರಲ್ವಾ? ಊಳೋಕೆ ಭೂಮಿ ಇಲ್ಲ, ಹುಟ್ಟಿದ್ದಕ್ಕೆ ದಾಖಲಾತಿ ಇಲ್ಲ. ಸಾಂಸ್ಕೃತಿಕವಾಗಿ ಬಹಳಷ್ಟು ಶ್ರೀಮಂತರಾಗಿರುವವರು. ಅವರತ್ರ ದುಡ್ಡಿರದೇ ಇರಬಹುದು. ಅವರ ತಿಳುವಳಿಕೆ, ಅನುಭವದ ಸಾಮರ್ಥ್ಯ, ಉತ್ಕೃಷ್ಟವಾದ ಭಾಷೆ ಮತ್ತು ಸಾಹಿತ್ಯ ಇವತ್ತಿಗೂ ಅಲೆಮಾರಿಗಳು ಎದೆಯೊಳಗೆ ಇಟ್ಟುಕೊಂಡಿದ್ದಾರೆ ಅಂತಹ ಜನಾಂಗಕ್ಕೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪ್ರಾತಿನಿಧ್ಯ ಒದಗಿಸದೇ ಇದ್ದ 1% ಒಳಮೀಸಲಾತಿ ಕಿತ್ತುಕೊಂಡು ಅಲೆಮಾರಿಗಳನ್ನು ಅಕ್ಷರಶಃ ಬೀದಿಗೆ ತಳ್ಳಿದೆ. ವ್ಯವಸ್ಥೆಯೇ ಹಾಗಿದೆ. ಯಾವುದೂ ಇಲ್ಲಿ ತಾರ್ಕಿಕ ಅಂತ್ಯಕ್ಕೆ ಹೋಗುವುದಿಲ್ಲ. ಅಲೆಮಾರಿಗಳಿಗೆ ಜ್ಞಾನ ಇದೆ, ಪ್ರಜ್ಞೆ ಇಲ್ಲದಿರಬಹುದು. ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮುಂದೆ ಹೊರಡುತ್ತೇವೆ. ಮುಖ್ಯಮಂತ್ರಿಗಳ ಹಂತದಲ್ಲಿ ಕೆಲಸ ಮಾಡುವವರು, ಸಂಪರ್ಕ ಹೊಂದಿರುವವರು ರಾಜ್ಯದ ಜನರು ಅಲೆಮಾರಿಗಳ ನ್ಯಾಯಕ್ಕೆ ಸಹಕರಿಸಬೇಕು. ದಾರಿದ್ರ್ಯ, ಮನೋದಾರಿದ್ರ್ಯದಿಂದ ಬಳಲುತ್ತಿರುವ ಅಲೆಮಾರಿ ಜನಾಂಗದವರಿಗೆ ನಾಗಮೋಹನ್ ದಾಸ್ ವರದಿ ಒಂದು ಸದಾಶಯವಾಗಿದೆ. ಅದಕ್ಕೆ ಶಕ್ತಿ ಕೊಡಬೇಕಾಗಿ ನೈತಿಕತೆ ಮತ್ತು ಹೊಣೆಗಾರಿಕೆಯ ಪ್ರಜ್ಞಾವಂತರಲ್ಲಿ ಕೋರಲಾಗುವುದು ಎಂದರು.
ಹಾಗೆಯೇ, ಅಲೆಮಾರಿಗಳನ್ನು ನಾಗರಿಕನ್ನಾಗಿಸಲು ಶೇ. ಒಂದು ಒಳಮೀಸಲು ತುಂಬಾ ಅಗತ್ಯ ಇದೆ. ಇಲ್ಲದಿದ್ದರೆ ನಮಗೆ ತಳವೇ ಇಲ್ಲದಂತೆ ಮುಕ್ತಿ ಕೊಡಿಸಲಾಗುತ್ತಿದೆ ಎಂದು ಬಿಡಿಸಿ ಹೇಳುವ ಪ್ರಮೇಯವೇ ಉಳಿದಿಲ್ಲ. ಬಲಿಪಶು ಅಲೆಮಾರಿಗಳ ಮತ್ತೊಂದು ಸುತ್ತಿನ ಹೋರಾಟಕ್ಕೆ ಅವಕಾಶ ಮಾಡಿಕೊಡದೇ ನಮ್ಮ ಆಗ್ರಹದ ಹೋರಾಟಕ್ಕೆ ರಾಜ್ಯ ಸರ್ಕಾರ ಬಾಗಬೇಕು. ಅದು ಬಿಟ್ಟು ಶಾಶ್ವತ ಆಯೋಗ ಮಾಡಿ ಆ ಮೂಲಕ ನ್ಯಾಯ ಕೊಡಿಸುತ್ತೇವೆ ಎಂಬ ಬೋಗಸ್ ಮಾತುಗಳು ನಮಗೀಗ ಬೇಕಾಗಿಲ್ಲ. ಪ.ಜಾ ಶಾಶ್ವತ ಆಯೋಗವಾದರೂ ಆ ಬಲಾಢ್ಯ ಗುಂಪಿನವರು ಅಲೆಮಾರಿಗಳನ್ನು ಪ್ರತ್ಯೇಕ ಇರಲು ಮತ್ತೆ ಬಿಡುವುದಿಲ್ಲ. ಆ ಪ್ರಜ್ಞೆ ನಮ್ಮಲ್ಲಿದೆ ಹಾಗಾಗಿ ನಮ್ಮಲ್ಲಿ ಮರು ಸಂಘರ್ಷಕ್ಕೆ ಅನುವು ಮಾಡಿಕೊಡದೇ ಆದ ಪ್ರಮಾದವನ್ನು ಈಗಲೇ ಸರಿಪಡಿಸಬೇಕು ಮತ್ತು ಸಿ ಗುಂಪಿನೊಂದಿಗೆ ಆಹಾರ, ಉಡುಪು, ಸಂಸ್ಕೃತಿಯಲ್ಲಿ ಅಲೆಮಾರಿಗಳು ಯಾವುದೇ ಕಾರಣಕ್ಕೂ ಹೊಂದಾಣಿಕೆ ಆಗಲ್ಲ. ಆದ್ದರಿಂದ ಆ ಗುಂಪಿನ ಜೊತೆಗೆ ನಮಗೆ ಸಮೀಕರಣ ಬೇಡವೇ ಬೇಡ. ಪಶು, ಪಕ್ಷಿ, ಪ್ರಾಣಿಗಳಿಗಿಂತ ಹೀನಾಯವಾಗಿ ಇನ್ನೂ ಬದುಕುತ್ತಿದ್ದೇವೆ. ಹೊಟ್ಟೆ ಉರಿದು ಹೋಗಿದೆ. ದಯವಿಟ್ಟು ನಮಗೊಂದು ಪ್ರತ್ಯೇಕ ಗುಂಪು ಮಾಡಿ ಕಾಪಾಡಿ ಸಿದ್ದರಾಮಯ್ಯನವರೇ, 1% ವಿಲೀನಗೊಳಿಸಿದ ಆದೇಶವನ್ನು ಕೂಡಲೇ ರದ್ದುಪಡಿಸಿ ಪರಿಷ್ಕೃತ ಆದೇಶ ಹೊರಡಿಸಿ, ಅಲೆಮಾರಿಗಳಿಗೆ ಯಾರೂ ಶತ್ರುಗಳಿಲ್ಲ. ನಮ್ಮ ಚರಿತ್ರೆಯನ್ನು ನಾಶ ಮಾಡಲು ಮುಂದಾಗುತ್ತಿರುವುದು ಸರಿಯಲ್ಲ. ಅಲೆಮಾರಿಗಳನ್ನು ಪ್ರತ್ಯೇಕಿಸಲು ಮುಂದಾಗಿ; ಆ.19 ರಂದು ಘೋಷಣೆಯಾದ ಒಳಮೀಸಲಾತಿ ಪೂರ್ಣಪ್ರಮಾಣದಲ್ಲಿ ಇನ್ನೂ ಜಾರಿಯಾಗಿಲ್ಲ. ಈಗಲಾದರೂ ಸಿದ್ದರಾಮಯ್ಯನವರು ನಮಗೆ ನ್ಯಾಯ ಕೊಡಲು ಮುಂದಾಗಬೇಕೆಂದು ಆಗ್ರಹಿಸಿದರು.
ಜೊತೆಗೆ, ಅಲೆಮಾರಿಗಳಿಗೆ ಭಿಕ್ಷಾಟನೆ ಬಂದ್ ಮಾಡಿದ್ದೀರಿ, ಅವರು ಬೇಟೆಯಾಡಿ ತಿನ್ನುವಂತಹ ಕಾಡುಪ್ರಾಣಿಗಳ ವಧೆ (ನರಿ, ಅಳಿಲು ಇತ್ಯಾದಿ) ಸರ್ಕಾರ ನಿಷೇಧ ಮಾಡಿದೆ. ಇಷ್ಟೆಲ್ಲಾ ಮಾಡಿದ್ದರೂ ಕೂಡ ಇದ್ದ 1% ಅನ್ನೂ ಕಿತ್ತುಕೊಂಡಿದ್ದೀರಿ ಅಂದರೆ ಎಷ್ಟು ಸರಿ ಸಾಮಾಜಿಕ ನ್ಯಾಯವೆಂದರೆ ಇದೇನಾ? ನೀವೇ ಹೇಳಿ? ನಾವು ಬದುಕಬೇಕಾ? ಬೇಡ್ವಾ? ಎಂದು ಅತ್ಯಂತ ಬೇಸರ ವ್ಯಕ್ತಪಡಿಸಿ, ಅಲೆಮಾರಿಗಳೆಲ್ಲ ಒಂದೇ ಸಮುದಾಯ ಅಲ್ಲ 49 ಅಲೆಮಾರಿಗಳು ಮಾತ್ರ ಒಂದೇ ಹಾಗಾಗಿ 49 ಸಮುದಾಯಗಳಿಗಾಗಿ ಪ್ರತ್ಯೇಕ ನಿಗಮದ ರಚನೆಯೂ ನಿಮ್ಮ ಅವಧಿಯಲ್ಲಿಯೇ ಆಗಬೇಕು. ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಿ, ಕೆಲ ಮಾರ್ಪಾಡು ಮಾತ್ರ ಎಂದೇಳಿ ಅಲೆಮಾರಿಗಳಿಗೆ ದೊಡ್ಡ ಮೋಸ, ಅನ್ಯಾಯ ಮಾಡಿದ್ದೀರಿ. ಎಸ್ಸಿ ಪಟ್ಟಿಯಲ್ಲಿ ಎಲ್ಲರಿಗೂ ದೊಡ್ಡ ಜಯ ಸಿಕ್ಕಿದೆ. ಅಲೆಮಾರಿಗಳಿಗೆ ಮಾತ್ರ ಇನ್ನೂ ಯಾವ ಜಯವೂ ಇಲ್ಲ, ನ್ಯಾಯವೂ ಇಲ್ಲದಂತಾಗಿದೆ. ಅಲೆಮಾರಿಗಳ ವಿಷಯದಲ್ಲಿ ರಾಜಕೀಯ ಲೆಕ್ಕಾಚಾರ ಹಾಕಬೇಡಿ; ಒಳಮೀಸಲಾತಿ ಅಂದರೆ ಯಾರಿಗೆ ಇಷ್ಟು ವರ್ಷ ಪ್ರಾತಿನಿಧ್ಯ ಸಿಕ್ಕಿಲ್ಲವೋ ಅವರನ್ನು ಗುರುತಿಸಿ ಪ್ರಾತಿನಿಧ್ಯ ಒದಗಿಸುವುದು ಎಂದರ್ಥ. ಅಂತಹ ಪ್ರಾತಿನಿಧ್ಯದ 1% ಪ್ರತ್ಯೇಕವಾಗುವುದರ ಮೂಲಕ ಸಾಮಾಜಿಕ ನ್ಯಾಯ ನಮ್ಮ ಜೋಪುಡಿಗಳಿಗೂ ಬರುವಂತಾಗಲೆಂದು ಅಲೆಮಾರಿ ಜಾಗೃತ ಸಂಘದ ಅಧ್ಯಕ್ಷರಾದ ಹಟ್ಟಿ ಬಸವರಾಜ್ ಹೇಳಿದರು.
- ಕರುನಾಡ ಕಂದ



















