ಬಳ್ಳಾರಿ/ ಕಂಪ್ಲಿ : ಸಾಕಷ್ಟು ಅನುದಾನದಲ್ಲಿ ಅಭಿವೃದ್ಧಿಪಡಿಸಿದ ರಸ್ತೆಗಳ ಮೇಲೆ ಟ್ರಾಕ್ಟರ್ ವ್ಹೀಲ್ ಹಾಕುವುದನ್ನು ಬಿಟ್ಟರೆ, ಸುಮಾರು 6-7 ವರ್ಷಗಳ ಕಾಲ ರಸ್ತೆಗಳನ್ನು ಕಾಪಾಡಿಕೊಳ್ಳಬಹುದು ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು. ತಾಲೂಕಿನ ದೇವಲಾಪುರ ಗ್ರಾಪಂಯ ಸೋಮಲಾಪುರ ಗ್ರಾಮದ ಎಸ್.ಟಿ ಕಾಲೋನಿಯಲ್ಲಿ ಬಳ್ಳಾರಿ ಕೆಆರ್ಐಡಿಎಲ್ನ 2024-25ನೇ ಸಾಲಿನ 5054 ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿ ಸುಮಾರು 50ಲಕ್ಷ ವೆಚ್ಚದಲ್ಲಿ ಮತ್ತು 100 ಲಕ್ಷ ವೆಚ್ಚದಲ್ಲಿ ನಿರ್ಮಿಸಲಿರುವ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಈಗಾಗಲೇ ಕಂಪ್ಲಿ ತಾಲೂಕು ಸೇರಿದಂತೆ ಕ್ಷೇತ್ರದಲ್ಲಿ ಸಾಕಷ್ಟು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇನ್ನೂ ಕೆಲವೇ ಕೆಲವು ರಸ್ತೆಗಳು ಮಾತ್ರ ಅಭಿವೃದ್ಧಿಪಡಿಸಬೇಕಾಗಿದ್ದು, ಇನ್ನೇನು ಕೆಲ ದಿನಗಳಲ್ಲಿ ಆ ರಸ್ತೆಗಳ ಅಭಿವೃದ್ಧಿ ಕಾರ್ಯ ಮುಗಿಯಲಿದೆ. ಆದರೆ, ಇಲ್ಲಿ ಅಭಿವೃದ್ಧಿ ಪಡಿಸಿದ ರಸ್ತೆಗಳ ಮೇಲೆ ಟ್ರಾಕ್ಟರ್ ವ್ಹೀಲ್ ಹಾಕುವುದಿಂದ ರಸ್ತೆಗಳು ಅತಿ ವೇಗದಲ್ಲಿ ಹಾಳಾಗುವಂತಾಗಿದ್ದು, ಕಷ್ಟಪಟ್ಟು ತಂದು ಅನುದಾನಗಳಿಂದ ಮಾಡಿದ ರಸ್ತೆಗಳು ವ್ಹೀಲ್ಗಳ ಪರಿಣಾಮ ಹಾಳಾಗುತ್ತಿರುವುದು ಶೋಚನೀಯವಾಗಿದೆ. ಆದ್ದರಿಂದ ರೈತರು ರಸ್ತೆಗಳು ಹಾಳಾಗದಂತೆ ನೋಡಿಕೊಳ್ಳಲು ಮೊದಲು ವ್ಹೀಲ್ ಹಾಕುವುದನ್ನು ಬಿಡಬೇಕು. ಈಗ ಸೋಮಲಾಪುರ ಗ್ರಾಮದಿಂದ ಕ್ರಾಸ್ವರೆಗಿನ ರಸ್ತೆಯನ್ನು ಕೋಟ್ಯಾಂತರ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿದೆ. ಮುಂದಿನ ರಸ್ತೆಗಳನ್ನು ಸಹ ಮುಂದಿನ ದಿನದಲ್ಲಿ ಅಭಿವೃದ್ಧಿಪಡಿಸಲಾಗುವುದು, ಕಂಪ್ಲಿ ನಗರದ ನಡುವಲ ಮಸೀದಿಯಿಂದ ಜೋಗಿ ಕಾಲುವೆರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಇಲ್ಲಿ ಗ್ರಾವೆಲ್ ಸಮಸ್ಯೆಯಿಂದ ರಸ್ತೆ ಅಭಿವೃದ್ಧಿ ನಿದಾನಗತಿಯಲ್ಲಿ ಸಾಗುವಂತಾಗಿದ್ದು, ಆದಷ್ಟು ಬೇಗ ರಸ್ತೆ ಅಭಿವೃದ್ಧಪಡಿಸಲು ಸೂಕ್ತಕ್ರಮವಹಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯರಾದ ವಿ.ಮಾರೇಶ, ಕೆ.ಚಂದಸಾಬ್, ಮುಖಂಡರಾದ ಅಂಗಡಿ ಜಂಬಣ್ಣ, ಎಸ್.ಬಸವರಾಜ, ಎನ್.ಪಂಪಣ್ಣ, ರಾಜ, ಮರಿಸ್ವಾಮಿ, ಬಾಬು, ಮಹಬಾಷಾ, ಜಿ.ಮರೇಗೌಡ, ಗೌಡ್ರು ಅಂಜಿನಪ್ಪ, ಹೊಸಕೋಟೆ ಜಗದೀಶ, ಜಾನೂರು ಮಾರೇಶ ಸೇರಿದಂತೆ ಅನೇಕರಿದ್ದರು. ನಂತರ ಹಂಪಾದೇವನಹಳ್ಳಿ ಗ್ರಾ. ಪಂ. ಯ ಚಿಕ್ಕಜಾಯಿಗನೂರು ಗ್ರಾಮದಲ್ಲಿ ಸುಮಾರು 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಗಣೇಶ ಅಡಿಗಲ್ಲು ಪೂಜೆ ಸಲ್ಲಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್



















