ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿ ಎಲ್ಲಾ ರೀತಿಯ ನಾಮಫಲಕಗಳನ್ನು ಕನ್ನಡ ಭಾಷೆಯಲ್ಲಿ ಬರೆಯಿಸಿ ಪರಿಣಾಮಕಾರಿಯಾಗಿ ಬಳಸಲು ಒತ್ತಾಯಿಸುವುದರ ಜೊತೆಗೆ ಎಲ್ಲಾ ಬಗೆಯ ಅಂಗಡಿಗಳ ನಾಮಫಲಕಗಳನ್ನು ವ್ಯಾಪಾರಸ್ಥರು ಮಾತೃಭಾಷೆಯಲ್ಲಿ ಅಳವಡಿಸಬೇಕೆಂದು ಆಗ್ರಹಿಸಿ ವಿಜಯ ಕರುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಪುರಸಭೆಯ ಕಿರಿಯ ಅಭಿಯಂತರರಾದ ಜೆ. ತೇಜಸ್ವಿನಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ವೇದಿಕೆಯ ರಾಜ್ಯ ಕಾರ್ಯಧ್ಯಕ್ಷ ಬಿ.ವಿರೂಪಾಕ್ಷಿ ಯಾದವ್ ಮಾತನಾಡಿ ಪಟ್ಟಣದ ಎಲ್ಲಾ ವ್ಯಾಪಾರಸ್ಥರು ರಾಜ್ಯ ಸರ್ಕಾರದ ನಿಯಮದಂತೆ ತಮ್ಮ ಅಂಗಡಿಗಳಿಗೆ ಕನ್ನಡ ಭಾಷಾ ನಾಮಫಲಕಗಳನ್ನು ಅಳವಡಿಸಬೇಕು. ಕನ್ನಡ ಭಾಷೆಯ ರಸೀದಿಗಳನ್ನು ಗ್ರಾಹಕರಿಗೆ ನೀಡಬೇಕು. ನಾಮಫಲಕಗಳು ಕಡ್ಡಾಯವಾಗಿ ಶೇ.60 ರಷ್ಟು ಪ್ರಮಾಣದಲ್ಲಿರಬೇಕು. ಪಟ್ಟಣದ ಕೆಲವು ವ್ಯಾಪಾರಸ್ಥರು ನಿಯಮಗಳನ್ನು ಉಲ್ಲಂಘಿಸಿ ಕನ್ನಡೇತರ ಭಾಷೆಯ ನಾಮಫಲಕಗಳನ್ನು ಅಳವಡಿಸಿದ್ದಾರೆ. ಕಿರಾಣಿ, ಬಟ್ಟೆ ಇತರೆ ವರ್ತಕರು ಗ್ರಾಹಕರಿಗೆ ತಿಳಿಯದ ಹಿಂದಿ ಸೇರಿದಂತೆ ಇತರೆ ಭಾಷೆಯಲ್ಲಿ ಬರೆದುಕೊಡುವುದನ್ನು ಕೈಬಿಟ್ಟು ಕಡ್ಡಾಯವಾಗಿ ಕನ್ನಡದಲ್ಲಿ ಬರೆದ ಪಟ್ಟಿ, ರಸೀದಿ ಒದಗಿಸಬೇಕು, ಕನ್ನಡಪರವಾಗಿರುವ ಈ ಮೂರು ಬೇಡಿಕೆಗಳನ್ನು ನ.01ರೊಳಗೆ ಈಡೇರಿಸದಿದ್ದಲ್ಲಿ, ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಕಿರಿಯ ಅಭಿಯಂತರರಾದ ತೇಜಸ್ವಿನಿ ಅವರು ಸಂಘಟಕರ ಮನವಿ ಪತ್ರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಸಂತೋಷ್, ಬಿ.ರಮೇಶ್, ಎಂ.ಶಿವಪ್ರಕಾಶ್, ಬಿ.ಮಂಜುಳಾ, ಗೋಪಾಲ್ ಯಾದವ್, ಕೆ.ಶಬ್ಬೀರ್, ಜಿ.ಶಿವಕುಮಾರ್, ಹುಲಿಗೆಮ್ಮ, ಎನ್.ಗಂಗಮ್ಮ, ಕೆ.ಈರಮ್ಮ, ರೇಣುಕಮ್ಮ, ವೈ. ಯಲ್ಲಪ್ಪ, ಎ.ಪ್ರವೀಣ, ಸಂತೋಷ್ ಕುಮಾರ್ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















